ಟಿಎಂಸಿ ಶಾಸಕನ ಹತ್ಯೆ: ಬಿಜೆಪಿ ಮುಖಂಡ ಮುಕುಲ್ ರಾಯ್ ವಿರುದ್ಧ ಎಫ್ಐಆರ್
ಕೋಲ್ಕತಾ, ಫೆಬ್ರುವರಿ 11: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸತ್ಯಜಿತ್ ಬಿಸ್ವಾಸ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಭಾನುವಾರ ಬಿಜೆಪಿ ಮುಖಂಡ ಮುಕುಲ್ ರಾಯ್ ಮತ್ತು ಇತರೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದೆ.
ಟಿಎಂಸಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುಕುಲ್ ರಾಯ್, ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ತಮ್ಮ ವಿರುದ್ಧದ ಈ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ಎಫ್ಐಆರ್ನಲ್ಲಿ ತಮ್ಮ ಹೆಸರು ಸೇರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಟಿಎಂಸಿ ಎಂಎಲ್ಎ ಸತ್ಯಜಿತ್ ಬಿಸ್ವಾಸ್ ಗುಂಡಿಟ್ಟು ಬರ್ಬರ ಹತ್ಯೆ
ಎಫ್ಐಆರ್ನಲ್ಲಿ ದಾಖಲಾದ ನಾಲ್ವರಲ್ಲಿ ಇಬ್ಬರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕ್ ಮಂಡಲ್ ಮತ್ತು ಸುಜಿತ್ ಮಂಡಲ್ ಎಂಬುವವರನ್ನು ಬಂಧಿಸಲಾಗಿದ್ದು, ಅವರನ್ನು ರಾಣಘಾಟ್ ನ್ಯಾಯಾಲಯವು 14 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಟಿಎಂಸಿ ಶಾಸಕನ ಹತ್ಯೆ; ಇಬ್ಬರ ಬಂಧನ, ಪೊಲೀಸ್ ಅಧಿಕಾರಿ ಅಮಾನತು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಶನಿವಾರ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸರಸ್ವತಿ ಪೂಜೆ ಕಾರ್ಯಕ್ರಮವೊಂದರಲ್ಲಿ ಶಾಸಕರು ಮತ್ತು ಸಚಿವರೊಬ್ಬರು ಭಾಗವಹಿಸಿದ್ದರೂ ಅಲ್ಲಿ ಯಾವುದೇ ಭದ್ರತೆ ಒದಗಿಸಿರಲಿಲ್ಲ ಎಂದು ಆರೋಪಿಸಲಾಗಿದೆ.