ಮಹಾತ್ಮರ ಸಂದೇಶಗಳನ್ನು ಇಡೀ ದೇಶಕ್ಕೆ ಸಾರಿದ್ದು ಬಿಜೆಪಿ; ನಡ್ಡಾ
ಕೋಲ್ಕತ್ತಾ, ಏಪ್ರಿಲ್ 15: ಮಮತಾ ಬ್ಯಾನರ್ಜಿ ಬಂಗಾಳದ ರಾಜಕೀಯದಿಂದ ಹೊರಹೋಗಲು ಗಂಟೆ ಬಾರಿಸಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚುನಾವಣಾ ಸಮಾವೇಶದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿದ್ದಾರೆ.
"ಬಿಜೆಪಿ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಬಳಸಿರುವ ಪದ ಬಂಗಾಳದ ಸಂಸ್ಕೃತಿಗೆ ಅವಮಾನ ಮಾಡಿದಂತಿದೆ. ಬಂಗಾಳದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿರುವುದು ಹಾಗೂ ಸಂರಕ್ಷಿಸುತ್ತಿರುವುದು ಬಿಜೆಪಿ" ಎಂದು ಹೇಳಿರುವ ಅವರು, ರಾಜ್ಯದ ವಿದ್ವಾಂಸರ, ವೇದಾಂತಿಗಳ ಸಂದೇಶವನ್ನು ಇಡೀ ದೇಶದ ಜನರಿಗೆ ತಲುಪಿಸಲು ಕೇಸರಿ ಪಕ್ಷ ಶ್ರಮಿಸಿದೆ ಎಂದರು.
ಮಮತಾ ಬ್ಯಾನರ್ಜಿ ಸ್ಥಿತಿ ಸೋತ ಆಟಗಾರನಂತಾಗಿದೆ: ಜೆಪಿ ನಡ್ಡಾ
ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ್ ಠಾಗೂರ್ ಹಾಗೂ ಶ್ಯಾಮ್ಪ್ರಸಾದ್ ಮುಖರ್ಜಿ ಅವರಂಥ ಮಹಾತ್ಮರ ಸಂದೇಶಗಳನ್ನು ಇಡೀ ದೇಶಕ್ಕೆ ಸಾರಿದ್ದು ಬಿಜೆಪಿ ಎಂದು ಹೇಳಿಕೊಂಡ ಅವರು, "ದೇಶದ ಪ್ರಧಾನಿ ಮೋದಿ ಅವರಿಗೆ, ಅಮಿತ್ ಶಾ ಅವರಿಗೆ ತಮ್ಮ ಪ್ರಚಾರ ವೇಳೆ ಮಮತಾ ಬ್ಯಾನರ್ಜಿ ಅವರು ಬಳಸಿದ ಪದಗಳು ಸರಿಯೇ? ಇದು ಬಂಗಾಳದ ಸಂಸ್ಕೃತಿಯೇ" ಎಂದು ಪ್ರಶ್ನಿಸಿದ್ದಾರೆ.
ಬಂಗಾಳದವರೇ ಆದ ನಾವು ಬಂಗಾಳದ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದೇವೆ. ಬಂಗಾಳದ ಸಂಸ್ಕೃತಿಗೆ ಮಮತಾ ಬ್ಯಾನರ್ಜಿ ಗೌರವ ನೀಡುತ್ತಿಲ್ಲ ಎಂದು ಜಮಲ್ಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸಿದರು. ರಾಜ್ಯದ ಒಳಿತಿಗೆ, ಅಭಿವೃದ್ಧಿಗೆ ನೀವು ಮಮತಾ ಬ್ಯಾನರ್ಜಿಯನ್ನು ಶಾಶ್ವತವಾಗಿ ನಿಷೇಧಿಸಬೇಕಿದೆ ಎಂದು ಜನರಲ್ಲಿ ಮನವಿ ಮಾಡಿದರು.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದ್ದು, ಐದನೇ ಹಂತದ ಚುನಾವಣೆಗೆ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಟಿಎಂಸಿ- ಬಿಜೆಪಿ ಪರಸ್ಪರ ಆರೋಪಗಳೂ ಜೋರಾಗಿವೆ.