"ಕೊಳೆತ ನಾಯಕರನ್ನು ಸೇರಿಸಿಕೊಳ್ಳುತ್ತಿರುವ ಬಿಜೆಪಿ ಕಸದ ಪಕ್ಷ"
ಕೋಲ್ಕತ್ತಾ, ಜನವರಿ 11: "ಬೇರೆ ಪಕ್ಷದ ಕೊಳೆತ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳುತ್ತಿರುವ ಬಿಜೆಪಿ ಕಸದ ಪಕ್ಷ" ಎಂದು ಬಿಜೆಪಿ ಕುರಿತು ವ್ಯಂಗ್ಯ ಮಾಡಿದ್ದಾರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. ಈಚೆಗಷ್ಟೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವು ಸದಸ್ಯರ ಕುರಿತು ಈ ಹೇಳಿಕೆ ನೀಡಿದ್ದಾರೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ನದಿಯಾ ಜಿಲ್ಲೆಯಲ್ಲಿ ಪ್ರಚಾರ ಮೆರವಣಿಗೆಯಲ್ಲಿ ತೊಡಗಿಕೊಂಡಿದ್ದ ಅವರು, ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು. ದೇಶದಲ್ಲಿ ಹಲವು ಸಮಸ್ಯೆಗಳು ಹುಟ್ಟಿಕೊಂಡಿರುವುದು ಬಿಜೆಪಿ ನಡವಳಿಕೆಯಿಂದ ಎಂದು ದೂರಿದರು. ಮುಂದೆ ಓದಿ...
ಹಿಂದೂ ದೇವತೆ ಬಗ್ಗೆ ಹೇಳಿಕೆ; ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ
"ದೇಶದ ಆಹಾರ ಬಿಕ್ಕಟ್ಟಿಗೆ ಬಿಜೆಪಿ ಕಾರಣ"
ಈಚೆಗೆ ಪರಿಚಯಿಸಿದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದೇ ದೇಶ ಆಹಾರ ಬಿಕ್ಕಟ್ಟು ಎದುರಿಸಲು ಕಾರಣ ಎಂದು ಆರೋಪಿಸಿದ್ದಾರೆ. "ದೇಶ ಈಗ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ, ರೈತರು ತಮ್ಮ ಹೋರಾಟವನ್ನು ಮುಂದುವರೆಸಿದ್ದೇ ಆದರೆ, ಮುಂದೆ ದೇಶದಲ್ಲಿ ಆಹಾರದ ಕೊರತೆ ಎದುರಾಗುವುದು ಖಚಿತ. ರೈತರು ನಮ್ಮ ಆಸ್ತಿ. ಅವರ ಹಿತಾಸಕ್ತಿಗೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡಬಾರದು" ಎಂದು ಹೇಳಿದ್ದಾರೆ. ಶೀಘ್ರವೇ ಕೇಂದ್ರ ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
"ಬಿಜೆಪಿ ಡಸ್ಟ್ ಬಿನ್ ಪಕ್ಷ"
ಬಿಜೆಪಿ ಡಸ್ಟ್ ಬಿನ್ ಪಕ್ಷ. ಭ್ರಷ್ಟ ಹಾಗೂ ಕೊಳೆತು ಹೋಗಿ ಪ್ರಯೋಜನಕ್ಕೆ ಬಾರದ ಸದಸ್ಯರನ್ನು ತನ್ನ ಪಕ್ಷಕ್ಕೆ ಕರೆಸಿಕೊಳ್ಳುತ್ತಿದೆ. ಇವರಿಂದ ಬಿಜೆಪಿಗೆ ಯಾವುದೇ ರೀತಿಯಲ್ಲಿಯೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಉಚಿತವಾಗಿ ಕೊರೊನಾ ಲಸಿಕೆ: ಮಮತಾ ಘೋಷಣೆ
"ಕೊಳ್ಳೆ ಹೊಡೆದ ಹಣ ಕಾಪಾಡಲು ಹೀಗೆ ಮಾಡುತ್ತಾರೆ"
ತೃಣಮೂಲ ಕಾಂಗ್ರೆಸ್ ನ ಕೆಲವು ನಾಯಕರು ಈಗ ಬಿಜೆಪಿ ಸೇರಿದ್ದಾರೆ. ತಾವು ಕೊಳ್ಳೆ ಹೊಡೆದ ಹಣವನ್ನು ಕಾಪಾಡಿಕೊಳ್ಳಲು ಅವರೆಲ್ಲ ಬಿಜೆಪಿಗೆ ಹೋಗಿದ್ದಾರೆ. ಪಕ್ಷ ವಾಷಿಂಗ್ ಮೆಷಿನ್ ನಂತೆ ಕೆಲಸ ನಿರ್ವಹಿಸುತ್ತಿದೆ. ಭ್ರಷ್ಟ ಅಧಿಕಾರಿಗಳು ಪಕ್ಷಕ್ಕೆ ಸೇರುತ್ತಿದ್ದಂತೆ ಸಂತರಾಗಿಬಿಡುತ್ತಾರೆ ಎಂದು ವ್ಯಂಗ್ಯ ಮಾಡಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಜ್ಜು
ಮುಂಬರುವ ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದೆ. ಈ ಬಾರಿ 294 ಸೀಟುಗಳಿಗೆ ಸ್ಪರ್ಧೆ ನಡೆಯುತ್ತಿದ್ದು, 200 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಬಿಜೆಪಿ ಸವಾಲು ಹಾಕಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನೇರ ಹಣಾಹಣಿಯಲ್ಲಿದೆ.