ಪಶ್ಚಿಮ ಬಂಗಾಳ ಚುನಾವಣೆ; ಗೆಲುವಿಗೆ ಬಿಜೆಪಿ ಹೊಸ ಕಾರ್ಯತಂತ್ರ
ಕೋಲ್ಕತ್ತಾ, ಫೆಬ್ರವರಿ 17: ವಿಧಾನಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದ್ದು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯ ಬಿರುಸಾಗಿದೆ. ಪಶ್ಚಿಮ ಬಂಗಾಳದ ಕಠಿಣ ಹಾಗೂ ನಿರ್ಣಾಯಕ ಕ್ಷೇತ್ರಗಳಲ್ಲಿ ತಮ್ಮ ಪಕ್ಷವನ್ನು ಬಲಪಡಿಸಲು ಸಂಘಟನಾ ಚಾತುರ್ಯಕ್ಕೆ ಹೆಸರಾಗಿರುವ ನಾಯಕರನ್ನು ನೇಮಿಸಲು ಚಿಂತಿಸಿರುವ ಬಿಜೆಪಿ, ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಕನಸಿಗೆ ಕಠಿಣ ಸವಾಲು ಒಡ್ಡಿರುವ ಸುಮಾರು 109 ಕ್ಷೇತ್ರಗಳಲ್ಲಿ ಬಲಿಷ್ಠ ನಾಯಕರನ್ನು ನೇಮಿಸಲು ಬಿಜೆಪಿ ಮುಂದಾಗಿದೆ. ಬಹುಪಾಲು ಕ್ಷೇತ್ರಗಳು ಹಿಂದಿನ ಬಂಗಾಳ ಪ್ರದೇಶಗಳಾಗಿದ್ದು, ಸುಮಾರು 22 ಬಿಜೆಪಿ ನಾಯಕರಿಗೆ ಈ ಕ್ಷೇತ್ರಗಳಲ್ಲಿನ ಮತದಾರರನ್ನು ಓಲೈಸುವ, ಹಾಗೆಯೇ ಕ್ಷೇತ್ರಗಳ ಚುನಾವಣಾ ಕಾರ್ಯವನ್ನು ನಿರ್ವಹಣೆ ಮಾಡುವ ಹೊಣೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ಮೂರರಿಂದ ಆರು ಕ್ಷೇತ್ರಗಳ ಉಸ್ತುವಾರಿ ವಹಿಸುವುದಾಗಿ ತಿಳಿದುಬಂದಿದೆ.
ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಮಮತಾ ಕಾರ್ಡ್ V/s ರಾಮ್ ಕಾರ್ಡ್
ಬುಧವಾರ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಕೈಗೊಂಡಿದ್ದ ವರ್ಚುಯಲ್ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಫೆಬ್ರವರಿ 25, 26ರಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ.ನಡ್ಡಾ ಅವರು ಈ ನಾಯಕರನ್ನು ಭೇಟಿ ಮಾಡಿ ಚುನಾವಣಾ ಕಾರ್ಯವೈಖರಿ ಕುರಿತು ಚರ್ಚೆ ನಡೆಸಲಿರುವುದಾಗಿ ತಿಳಿದುಬಂದಿದೆ.
ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ 294 ಸೀಟುಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ.