ಟಿಎಂಸಿ ಅಭ್ಯರ್ಥಿ ಪರ ಪ್ರಚಾರ, ಬಾಂಗ್ಲಾ ನಟ ಬಂಧನಕ್ಕೆ ಆಗ್ರಹ
ಕೋಲ್ಕತಾ, ಏಪ್ರಿಲ್ 16: ತೃಣಮೂಲ ಕಾಂಗ್ರೆಸ್ ಪರ ಬಾಂಗ್ಲಾದೇಶದ ನಟ ಫಿರ್ದೋಸ್ ಅಹ್ಮದ್ ಅವರು ಪ್ರಚಾರ ನಡೆಸಿರುವುದು ಭಾರತೀಯ ಜನತಾ ಪಕ್ಷ (ಬಿಜೆಪಿ) ಕೆಂಗಣ್ಣಿಗೆ ಗುರಿಯಾಗಿದೆ. ಟಿಎಂಸಿ ಪರ ವಿದೇಶಿ ಪ್ರಜೆಯೊಬ್ಬರು ಚುನಾವಣಾ ಪ್ರಚಾರ ನಡೆಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲು ಮುಂದಾಗಿದೆ.
ಬೆಂಗಾಲಿ ಸಿನಿಮಾ ತಾರೆಯರಾದ ಅಂಕುಶ್ ಹಾಗೂ ಪಾಯಲ್ ಜೊತೆಗೆ ಫಿರ್ದೋಸ್ ಅಹ್ಮದ್ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಟಿಎಂಸಿ ಅಭ್ಯರ್ಥಿ ಕನ್ಹಯ್ಯಾಲಾಲ್ ಅಗರವಾಲ್ ಪರ ಇಂಡೋ-ಬಾಂಗ್ಲಾ ಗಡಿಭಾಗದ ಹೆಮ್ತಾಬಾದ್ ಹಾಗೂ ಕರಂದ್ಗಿ ಪ್ರದೇಶಗಳಲ್ಲಿ ಪ್ರಚಾರ ನಡೆಸಿ, ಟಿಎಂಸಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದ್ದರು.
ದೀದಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿಂದ 20 ಲಕ್ಷ ರೂ. ದಂಡ
ಬಾಂಗ್ಲಾದೇಶದ ಪ್ರಜೆಯೊಬ್ಬರು ಈ ರೀತಿ ಪ್ರಚಾರ ಮಾಡುವುದು ಅಕ್ಷಮ್ಯವಾಗಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ನಟ ಫಿರ್ದೋಸ್ ಅವರನ್ನು ಬಂಧಿಸುವಂತೆ ಬಿಜೆಪಿ ಜೆಪಿ ಮಂಜುಂದರ್ ಅವರ ನೇತೃತ್ವದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಬಾಂಗ್ಲಾದೇಶಿ ವಲಸಿಗರು, ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಎಂಸಿ ವಾಮಮಾರ್ಗವನ್ನು ಹಿಡಿದಿದೆ ಎಂದು ದೂರಲಾಗಿದೆ. ಹೀಗೆ, ಬಿಟ್ಟರೆ, ಮಮತಾ ಬ್ಯಾನರ್ಜಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೂಡಾ ಪ್ರಚಾರಕ್ಕಾಗಿ ಕರೆಸಿಕೊಳ್ಳಬಹುದು ಎಂದು ಬೆಂಗಾಲದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಶ್ ಅವರು ಗೇಲಿ ಮಾಡಿದ್ದಾರೆ.