ಮಮತಾ ಬ್ಯಾನರ್ಜಿ ನಿವಾಸದ ಬಳಿ ಪ್ರಚಾರಕ್ಕೆ ಅಡ್ಡಿ; ಬಿಜೆಪಿ
ಕೋಲ್ಕತ್ತಾ, ಸೆಪ್ಟೆಂಬರ್ 22: ಸೆಪ್ಟೆಂಬರ್ 30ರಂದು ನಿಗದಿಯಾಗಿರುವ ಉಪಚುನಾವಣೆಗೆ ಪಶ್ಚಿಮ ಬಂಗಾಳದ ಭವಾನಿಪುರ ಸಜ್ಜಾಗುತ್ತಿದ್ದು, ಬಿಜೆಪಿ ಹಾಗೂ ಟಿಎಂಸಿ ಪ್ರಚಾರ ಬಿರುಸಾಗಿ ಸಾಗಿದೆ.
ಆದರೆ ಬುಧವಾರ, ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಗೆ ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಬಳಿ ಪ್ರಚಾರ ನಡೆಸದಂತೆ ಪೊಲೀಸರು ನಮಗೆ ತಡೆ ಒಡ್ಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಭವಾನಿಪುರ ಉಪ ಚುನಾವಣೆ; ಫಲಿತಾಂಶದ ಬಗ್ಗೆ ಎಚ್ಡಿಕೆ ಭವಿಷ್ಯ!
ಮಮತಾ ಬ್ಯಾನರ್ಜಿ ಮನೆಗೆ ತೆರಳುವ ಹರೀಶ್ ಚಟರ್ಜಿ ರಸ್ತೆಯಲ್ಲಿ ಚುನಾವಣಾ ಪ್ರಚಾರ ನಡೆಸಲು ಹೊರಟಿದ್ದ ಸಂದರ್ಭ ಪೊಲೀಸರು ನಮಗೆ ತಡೆಒಡ್ಡಿದ್ದಾರೆ. ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ. ಟಿಎಂಸಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ದೂರಿದ್ದಾರೆ.
ಪೊಲೀಸರಿಗೆ ವೃತ್ತಿಪರತೆ ಎಂಬುದೇ ಇಲ್ಲ, ಎಲ್ಲವೂ ನಾಶವಾಗಿದೆ ಎಂದು ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಮಜುಂದಾರ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿದೆ.
ಮುಖ್ಯಮಂತ್ರಿ ನಿವಾಸ ಹೆಚ್ಚಿನ ಭದ್ರತೆಯ ಪ್ರದೇಶಕ್ಕೆ ಒಳಪಟ್ಟಿದೆ ಹಾಗೂ ಬಿಜೆಪಿ ನಾಯಕರೊಂದಿಗೆ ಹೆಚ್ಚಿನ ಜನರು ಇದ್ದರು. ಯಾರಲ್ಲಿಯೂ ಲಸಿಕೆ ಪಡೆದ ಪ್ರಮಾಣಪತ್ರವಿರಲಿಲ್ಲ' ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಸೆಪ್ಟೆಂಬರ್ 30ರ ಉಪ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೋಲುವ ಭಯ ಶುರುವಾಗಿದೆ. ಹೀಗಾಗಿ ನಮಗೆ ಪ್ರಚಾರ ಮಾಡದಂತೆ ತಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಕೂಡ ದೂರಿದ್ದು, ನಮ್ಮ ಬಳಿ ಅನುಮತಿಯಿದ್ದರೂ ನಮಗೆ ಮಂಗಳವಾರ ಪ್ರಚಾರಕ್ಕೆ ಅವಕಾಶ ನೀಡಲಿಲ್ಲ ಎಂದಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರಾಗಿ ಸುಕಾಂತ ಮಜುಂದಾರ್ ನೇಮಕ
ಈಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಕೆಲವೇ ಮತಗಳಿಂದ ಮಮತಾ ಬ್ಯಾನರ್ಜಿ ಸೋತಿದ್ದು, ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಉಪಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿದೆ. ಬಿಜೆಪಿಯು ವಕೀಲೆಯಾದ ಪ್ರಿಯಾಂಕ ಟಿಬ್ರೆವಾಲ್ರನ್ನು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯ ಎದುರು ಕಣಕ್ಕೆ ಇಳಿಸಿದೆ. ಭವಾನಿಪುರ ಕ್ಷೇತ್ರದಲ್ಲಿ ತನ್ನ ಪ್ರಚಾರ ಕಾರ್ಯ ಬಿರುಸುಗೊಳಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಲ್ಲಿ ಜಯ ಗಳಿಸಲು ಬೇಕಾದ ಎಲ್ಲಾ ಪ್ರಚಾರ, ಕಾರ್ಯತಂತ್ರಗಳನ್ನು ತೃಣಮೂಲ ಕಾಂಗ್ರೆಸ್ ಮಾಡುತ್ತಿದೆ. ಉಳಿದ ಎರಡು ಕ್ಷೇತ್ರಗಳಾದ ಮುರ್ಷಿದಾಬಾದ್ನ ಜಂಗೀಪುರ ಹಾಗೂ ಸಮ್ಸೇರ್ಗಂಜ್ ಕ್ಷೇತ್ರದಲ್ಲಿಯೂ ಟಿಎಂಸಿ ಪ್ರಚಾರ ಕಾರ್ಯ ನಡೆಸುತ್ತಿದೆ.
ಭವಾನಿಪುರದಲ್ಲಿ ಬಂಗಾಳಿ ಜನರ ಮತ ಮಾತ್ರವಲ್ಲದೆ ಬಂಗಾಳಿಯೇತರರ ಮತಗಳನ್ನು ಪಡೆಯಲು ತೃಣಮೂಲ ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಜಯಗಳಿಸಿದ ಹಿನ್ನೆಲೆ ಪಕ್ಷ ಮಮತಾ ಬ್ಯಾನರ್ಜಿಯನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇದೀಗ ತಮ್ಮ ಈ ಮುಖ್ಯಮಂತ್ರಿ ಸ್ಥಾನವನ್ನು ಮಮತಾ ಉಳಿಸಿಕೊಳ್ಳಬೇಕಾದರೆ ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ.