ಕಳ್ಳನನ್ನು ಹಿಡಿಯಲು ಬಂಗಾಳಕ್ಕೆ ತೆರಳಿದ್ದ ಬಿಹಾರದ ಪೊಲೀಸ್ನನ್ನು ಹೊಡೆದು ಕೊಂದ ಗ್ರಾಮಸ್ಥರು
ಉತ್ತರ್ ದಿನಾಜ್ಪುರ್, ಏಪ್ರಿಲ್ 10: ಬಿಹಾರದ ಪೊಲೀಸ್ ಅಧಿಕಾರಿಯೊಬ್ಬರನ್ನು ಜನರ ಗುಂಪೊಂದು ಥಳಿಸಿ ಕೊಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರದಲ್ಲಿ ನಡೆದಿದೆ. ಬಿಹಾರದ ಕಿಶನ್ಗಂಜ್ ಪೊಲೀಸ್ ಠಾಣೆಯ ಎಸ್ಎಚ್ಒ ಅಶ್ವಿನಿ ಕುಮಾರ್ ಅವರು ಉತ್ತರ ದಿನಾಜ್ಪುರದ ಗೋಲ್ಪೊಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಸ್ಥಳೀಯರಿಂದ ಹಲ್ಲೆಗೆ ಒಳಗಾಗಿ ತೀವ್ರ ಗಾಯಗೊಂಡಿದ್ದರು. ಬಳಿಕ ಅವರು ಮೃತಪಟ್ಟಿದ್ದಾರೆ.
'ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ದಾಳಿ ನಡೆಸುವ ಸಲುವಾಗಿ ಬಂದಿದ್ದರು' ಎಂದು ಐಜಿ ಪೂರ್ಣಿಯಾ ರಂಗೆ ತಿಳಿಸಿದ್ದಾರೆ.
ಒರಿಸ್ಸಾ ಮೂಲದ ತಾಯಿ ಮತ್ತು ಮಗನ ಬರ್ಬರ ಹತ್ಯೆ !
ಅಶ್ವಿನಿ ಕುಮಾರ್ ಅವರು ಕಳವು ಆರೋಪಿಯ ಪತ್ತೆಗಾಗಿ ದಾಳಿಗಳನ್ನು ನಡೆಸಲು ಬಂಗಾಳಕ್ಕೆ ತೆರಳಿದ್ದರು. ಆದರೆ ಅವರಿಗೆ ಬಂಗಾಳದ ಸ್ಥಳೀಯ ಪೊಲೀಸರಿಗೆ ನೆರವು ಸಿಕ್ಕಿರಲಿಲ್ಲ ಎನ್ನಲಾಗಿದೆ. ಆರೋಪಿಯ ಪತ್ತೆಗಾಗಿ ಅವರು ಪಕ್ಕದ ಪಾಂಜಿಪರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದಕ್ಕೆ ತೆರಳಿದ್ದರು. ಬಳಿಕ ಉತ್ತರ ದಿನಾಜ್ಪುರದ ಹಳ್ಳಿಗೆ ಹೋಗಿದ್ದರು. ಅಲ್ಲಿ ಅವರ ಮೇಲೆ ಗ್ರಾಮಸ್ಥರ ಗುಂಪು ಹಲ್ಲೆ ನಡೆಸಿದೆ. ಕಲ್ಲು ಮತ್ತು ದೊಣ್ಣೆಗಳಿಂದ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ತೀವ್ರ ಗಾಯಗೊಂಡ ಅವರನ್ನು ಇಸ್ಲಾಮಪುರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಶ್ವಿನಿ ಕುಮಾರ್ ಅವರು ಸ್ಥಳೀಯ ಪೊಲೀಸರನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದರು. ಅವರು ಅವರೊಂದಿಗೆ ದಾಳಿ ನಡೆಸಲು ತಂಡವೊಂದನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ತಂಡವನ್ನು ಕಳುಹಿಸಿರಲಿಲ್ಲ ಎಂದು ಬಿಹಾರ ಪೊಲೀಸ್ ಸಂಸ್ಥೆ ಆರೋಪಿಸಿದೆ. ಘಟನೆ ಸಂಬಂಧ ಪಾಂಜಿಪರ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.