ಬಿಜೆಪಿ ಬಿಟ್ಟು ಎಡಪಕ್ಷ, ಕಾಂಗ್ರೆಸ್ ಅನ್ನು ಲೇವಡಿ ಮಾಡಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜ 8: ಸದಾ ಬಿಜೆಪಿ ಇಲ್ಲವೇ ಪ್ರಧಾನಿ ಮೋದಿ ವಿರುದ್ದ ಕಿಡಿಕಾರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಪರೂಪಕ್ಕೆ ಎನ್ನುವಂತೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದಿದ್ದಾರೆ.
"ರಾಜ್ಯಗಳಲ್ಲಿ ರಾಜಕೀಯ ಅಸ್ತಿತ್ವವಿಲ್ಲದವರು, ಬಂದ್ ಎನ್ನುವ ನಾಟಕವನ್ನು ಮಾಡುತ್ತಾ, ಈ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹಾಳು ಮಾಡುತ್ತಿದ್ದಾರೆ" ಎಂದು ಮಮತಾ ಹೇಳಿದ್ದಾರೆ.
ಭಾರತ ಬಂದ್ನಲ್ಲಿ ಪಾಲ್ಗೊಂಡ ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ ರಾಹುಲ್ ಗಾಂಧಿ
"ಭಾರತ್ ಬಂದ್ ಅನ್ನು ಕೇಂದ್ರದ ಆರ್ಥಿಕ ನೀತಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರವ್ಯಾಪಿ ಎನ್ಆರ್ಸಿ ವಿರುದ್ಧ ಕರೆಯಲಾಗಿದೆ, ಆದರೆ ತಮ್ಮ ಪಕ್ಷ ಮತ್ತು ಸರ್ಕಾರವು ಯಾವುದೇ ರೀತಿಯ ಮುಷ್ಕರದ ವಿರುದ್ಧವಾಗಿದೆ" ಮಮತಾ ಬ್ಯಾನರ್ಜಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
"ಪಶ್ಚಿಮ ಬಂಗಾಳದಲ್ಲಾಗಲಿ ಅಥವಾ ದೇಶದ ಇತರ ಭಾಗಗಳಲ್ಲಿ ನಡೆದ ಪೌರತ್ವ ವಿರುದ್ದ ಹೋರಾಟದಲ್ಲಿ ಅವರು (ಎಡಪಕ್ಷಗಳು, ಕಾಂಗ್ರೆಸ್) ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಈಗ ಬಂದ್ ಗೆ ಕರೆನೀಡಿರುವುದು ಹಾಸ್ಯಾಸ್ಪದ" ಎಂದು ಮಮತಾ ಲೇವಡಿ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ: ಜನಜಾಗೃತಿ ಅಭಿಯಾನದಲ್ಲೂ ಬಿಜೆಪಿಗೆ ಹಿನ್ನಡೆ!
"ಮೋದಿ-ಶಾ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಮೋದಿಯವರ ಬಂಡವಾಳಶಾಹಿ ಧೋರಣೆಯಿಂದ ಸಾರ್ವಜನಿಕ ವಲಯಗಳು ಇಂದು ದುರ್ಬಲಗೊಂಡಿವೆ. ಇಂದು 20ಕೋಟಿಗೂ ಅಧಿಕ ಕಾರ್ಮಿಕರು ಭಾರತ ಬಂದ್ ನಡೆಸುತ್ತಿದ್ದು ಅವರಿಗೆ ನನ್ನ ವಂದನೆಗಳು" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಎಲ್ಲಾ ನಗರಗಳು, ಅದರಲ್ಲೂ ಬೆಂಗಳೂರಿನಲ್ಲಿ ಜನಜೀವನ ಎಂದಿನಂತೆ ಸಾಮಾನ್ಯವಾಗಿರುತ್ತದೆ ಮತ್ತು ಜನರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ತಡೆ ಇರುವುದಿಲ್ಲ" ಎನ್ನುವ ಮಾತನ್ನು ಸಿಎಂ ಯಡಿಯೂರಪ್ಪ ಹೇಳಿದ್ದರು.