Breaking News: ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ
ಕೋಲ್ಕತ್ತಾ, ಅಕ್ಟೋಬರ್ 03: ಪಶ್ಚಿಮ ಬಂಗಾಳದಲ್ಲಿ ಇಂದು ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಭವಾನಿಪುರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಸುಮಾರು 58,832 ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವ ಮಮತಾ ಬ್ಯಾನರ್ಜಿ, ಗೆಲುವು ಖಚಿತವಾಗುತ್ತಿದ್ದಂತೆ ಜನರಿಗೆ ಧನ್ಯವಾದ ತಿಳಿಸಿದ್ದಾರೆ. "ನಾವು ಎಲ್ಲಾ ವಾರ್ಡ್ಗಳಲ್ಲೂ ಗೆಲುವು ಸಾಧಿಸಿದ್ದೇವೆ. ನಾನು ಈಗ ಸಂತಸದಲ್ಲಿದ್ದೇನೆ ಹಾಗೂ ಸಂತುಷ್ಟಳಾಗಿದ್ದೇನೆ. ಏಕೆಂದರೆ ಭವಾನಿಪುರ ನನಗೆ ದಾರಿ ತೋರಿಸಿದೆ," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾಗೆ ಮುನ್ನಡೆ: ಟಿಎಂಸಿಯಿಂದ ಈಗಲೇ ಸಂಭ್ರಮಾಚರಣೆ ಆರಂಭ
"ಭವಾನಿಪುರ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ಇತ್ತು. ಈಗ ನಾನು ಜನರಿಗಾಗಿ ಇನ್ನೂ ಹೆಚ್ಚಿನ ಕಾರ್ಯ ನಿರ್ವಹಣೆ ಮಾಡಲು ನನಗೆ ಸ್ಪೂರ್ತಿ ದೊರೆತಿದೆ," ಎಂದಿದ್ದಾರೆ. "ನಾನು ಜಯದ ಸಂಕೇತವನ್ನು ತೋರಿಸುವುದಿಲ್ಲ," ಎಂದು ಕೂಡಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ನಾನು ಜಯದ ಸಂಕೇತವನ್ನು ತೋರಿಸುವುದಿಲ್ಲ. ನಾನು ಮೂರು ಬೆರಳುಗಳನ್ನು ತೋರಿಸುತ್ತೇನೆ. ಯಾಕೆಂದರೆ ನಾನು ಒಬ್ಬಳೇ ಈ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಇನ್ನುಳಿದ ಎರಡು ಕ್ಷೇತ್ರದಲ್ಲಿ ನನ್ನ ಸಹೋದ್ಯೋಗಿಗಳು ಗೆಲುವು ಸಾಧಿಸಲಿದ್ದಾರೆ," ಎಂದಿದ್ದಾರೆ.
ಇನ್ನು ತನ್ನ ಸೋಲನ್ನು ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ಒಪ್ಪಿಕೊಂಡಿದ್ದಾರೆ. "ನಾನು ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ. ನಾನು ಕೋರ್ಟ್ಗೆ ಹೋಗುವುದಿಲ್ಲ. ಆದರೆ ಒಂದು ಲಕ್ಷ ಅಂತರದಲ್ಲಿ ಮಮತಾ ಬ್ಯಾನರ್ಜಿ ಜಯ ಸಾಧಿಸುತ್ತಾರೆ ಎಂದು ಅವರು ಹೇಳಿದ್ದರು. ಆದರೆ ಕೇವಲ ಐವತ್ತು ಸಾವಿರ ಮತಗಳು ಬ್ಯಾನರ್ಜಿಗೆ ದೊರೆತಿದೆ," ಎಂದಿದ್ದಾರೆ. ಹಾಗೆಯೇ ಮಮತಾ ಬ್ಯಾನರ್ಜಿಗೆ ಶುಭಾಶಯ ತಿಳಿಸಿದ್ದಾರೆ.
21 ನೇ ಸುತ್ತಿನ ಮತ ಎಣಿಕೆಯಲ್ಲಿ ಮಮತಾ ಬ್ಯಾನರ್ಜಿ 84,709 ಗಳಿಸಿದ್ದು, ಬಿಜೆಪಿಯ ಪ್ರಿಯಾಂಕಾ ಟೆಬ್ರಿವಾಲ್ 26,320 ಮತಗಳನ್ನು ಗಳಿಸಿದ್ದರು. 17ನೇ ಸುತ್ತಿನ ಮತ ಎಣಿಕೆಯಲ್ಲಿ ಮಮತಾ ಬ್ಯಾನರ್ಜಿ ಒಟ್ಟು ಸರಿ ಸುಮಾರು 45,738 ಮತಗಳ ಮತಗಳ ಮುನ್ನಡೆಯನ್ನು ಸಾಧಿಸಿದ್ದರು. ಇನ್ನು ಕೇವಲ ನಾಲ್ಕು ಸುತ್ತಿನ ಮತ ಎಣಿಕೆ ಬಾಕಿ ಉಳಿದಿರುವಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭ ಮಾಡಿದ್ದರು.
15 ನೇ ಸುತ್ತಿನಲ್ಲಿ ಮಮತಾ ಬ್ಯಾನರ್ಜಿ 58,503 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಪ್ರಿಯಾಂಕ ಟಿಬ್ರೆವಾಲ್ 18,846 ಮತಗಳನ್ನು ಪಡೆದಿದ್ದರು, ಒಟ್ಟು ಸರಿಸುಮಾರು 40,000 ಅಂತರವಿತ್ತು. 16 ಸುತ್ತಿನ ಮತ ಎಣಿಕೆ ನಡೆಯುವಷ್ಟರಲ್ಲಿ ಈ ಅಂತರ ಮತ್ತಷ್ಟು ಅಧಿಕವಾಗಿತ್ತು.
ಇನ್ನು 17 ಸುತ್ತಿನಲ್ಲಿ ಮಮತಾ ಬ್ಯಾನರ್ಜಿಗೆ 67,620 ಮತಗಳು ದೊರಕಿದ್ದು, ಬಿಜೆಪಿಯ ಪ್ರಿಯಾಂಕ ಟಿಬ್ರೆವಾಲ್ಗೆ 21,882 ಮತಗಳು ಮಾತ್ರ ಲಭಿಸಿತ್ತು. ಒಟ್ಟು 45,738 ಮತಗಳ ಮುನ್ನಡೆಯನ್ನು ಮಮತಾ ಬ್ಯಾನರ್ಜಿ ಹೊಂದಿದ್ದರು. ಕೊನೆಯದಾಗಿ 21 ನೇ ಸುತ್ತಿನ ಮತ ಎಣಿಕೆಯಲ್ಲಿ ಮಮತಾ ಬ್ಯಾನರ್ಜಿ 58,832 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿಯ ಕೋಲ್ಕತ್ತಾದ ನಿವಾಸದ ಹೊರಗಡೆ ಟಿಎಂಸಿ ಬೆಂಬಲಿಗರು ನೆರೆದಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಚುನಾವಣಾ ಆಯೋಗವು ಯಾವುದೇ ಸಂಭ್ರಮಾಚರಣೆ ಅಥವಾ ಮೆರವಣಿಗೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಇನ್ನು ಮಮತಾ ಬ್ಯಾನರ್ಜಿ ಭರ್ಜರಿ ಮುನ್ನಡೆಯನ್ನು ಸಾಧಿಸಿರುವ ಬಗ್ಗೆ ಸಹೋದರ ಕಾರ್ತಿಕ್ ಸಂತಸವನ್ನು ವ್ಯಕ್ತಪಡಿಸಿದ್ದರು. "ಇಲ್ಲಿ ಟಿಎಂಸಿ ಅಲ್ಲದೇ ಬೇರೆ ಯಾವ ಪಕ್ಷಕ್ಕೂ ಒಂದು ಸ್ಥಾನವಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ದೀದಿ ಜನರಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ದೆಹಲಿಯಲ್ಲಿ (ಕೇಂದ್ರ) 2024 ರಲ್ಲಿ ನಾವು ಸರ್ಕಾರವನ್ನು ರಚನೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)