ಮಮತಾಗೆ ಮುನ್ನಡೆ: ಟಿಎಂಸಿಯಿಂದ ಈಗಲೇ ಸಂಭ್ರಮಾಚರಣೆ ಆರಂಭ
ಕೋಲ್ಕತ್ತಾ, ಅಕ್ಟೋಬರ್ 03: ಪಶ್ಚಿಮ ಬಂಗಾಳದಲ್ಲಿ ಇಂದು ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಭವಾನಿಪುರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಮುನ್ನಡೆಯಲ್ಲಿ ಇದ್ದಾರೆ.
ಪ್ರಸ್ತುತ 17ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು, ಮಮತಾ ಬ್ಯಾನರ್ಜಿ ಒಟ್ಟು ಸರಿ ಸುಮಾರು 45,738 ಮತಗಳ ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ. ಇನ್ನು ಕೇವಲ ನಾಲ್ಕು ಸುತ್ತಿನ ಮತ ಎಣಿಕೆ ಬಾಕಿ ಉಳಿದಿದೆ. ಈ ಹಿನ್ನೆಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಲೇ ಸಂಭ್ರಮಾಚರಣೆ ಆರಂಭ ಮಾಡಿದ್ದಾರೆ ಎಂದು ವರದಿಯಾಗಿದೆ.
ಭವಾನಿಪುರ ಉಪ ಚುನಾವಣೆ ಮತ ಎಣಿಕೆ; ಮಮತಾ ಬ್ಯಾನರ್ಜಿ ಮುನ್ನಡೆ
15 ನೇ ಸುತ್ತಿನಲ್ಲಿ ಮಮತಾ ಬ್ಯಾನರ್ಜಿ 58,503 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಪ್ರಿಯಾಂಕ ಟಿಬ್ರೆವಾಲ್ 18,846 ಮತಗಳನ್ನು ಪಡೆದಿದ್ದರು, ಒಟ್ಟು ಸರಿಸುಮಾರು 40,000 ಅಂತರವಿತ್ತು. 16 ಸುತ್ತಿನ ಮತ ಎಣಿಕೆ ನಡೆಯುವಷ್ಟರಲ್ಲಿ ಈ ಅಂತರ ಮತ್ತಷ್ಟು ಅಧಿಕವಾಗಿದೆ.
ಇನ್ನು 17 ಸುತ್ತಿನಲ್ಲಿ ಮಮತಾ ಬ್ಯಾನರ್ಜಿಗೆ 67,620 ಮತಗಳು ದೊರಕಿದ್ದು, ಬಿಜೆಪಿಯ ಪ್ರಿಯಾಂಕ ಟಿಬ್ರೆವಾಲ್ಗೆ 21,882 ಮತಗಳು ಮಾತ್ರ ಲಭಿಸಿದೆ. ಒಟ್ಟು 45,738 ಮತಗಳ ಮುನ್ನಡೆಯನ್ನು ಮಮತಾ ಬ್ಯಾನರ್ಜಿ ಹೊಂದಿದ್ದಾರೆ.
13 ಹಂತದ ಮತ ಎಣಿಕೆ ಮುಗಿಯುತ್ತಿದ್ದಂತೆ ಟಿಎಂಸಿ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭ ಮಾಡಿದ್ದಾರೆ. ಮಮತಾ ಬ್ಯಾನರ್ಜಿಯ ಕೋಲ್ಕತ್ತಾದ ನಿವಾಸದ ಹೊರಗಡೆ ಟಿಎಂಸಿ ಬೆಂಬಲಿಗರು ನೆರೆದಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ಚುನಾವಣಾ ಆಯೋಗವು ಯಾವುದೇ ಸಂಭ್ರಮಾಚರಣೆ ಅಥವಾ ಮೆರವಣಿಗೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಇನ್ನು ಮಮತಾ ಬ್ಯಾನರ್ಜಿ ಭರ್ಜರಿ ಮುನ್ನಡೆಯನ್ನು ಸಾಧಿಸಿರುವ ಬಗ್ಗೆ ಸಹೋದರ ಕಾರ್ತಿಕ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಇಲ್ಲಿ ಟಿಎಂಸಿ ಅಲ್ಲದೇ ಬೇರೆ ಯಾವ ಪಕ್ಷಕ್ಕೂ ಒಂದು ಸ್ಥಾನವಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ದೀದಿ ಜನರಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ದೆಹಲಿಯಲ್ಲಿ (ಕೇಂದ್ರ) 2024 ರಲ್ಲಿ ನಾವು ಸರ್ಕಾರವನ್ನು ರಚನೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)