ಭವಾನಿಪುರ ಉಪಚುನಾವಣೆ: ಮಮತಾ ಎದುರು ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಕಣಕ್ಕೆ
ಕೋಲ್ಕತ್ತಾ, ಸೆಪ್ಟೆಂಬರ್ 10: ಪಶ್ಚಿಮ ಬಂಗಾಳದಲ್ಲಿ ಭವಾನಿಪುರ ಉಪಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎದುರು ಬಿಜೆಪಿ ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಕಣಕ್ಕೆ ಇಳಿಸಿದೆ. ಬಿಜೆಪಿ ಈಗ ಮಮತಾ ಎದುರು ವಕೀಲೆ ಪ್ರಿಯಾಂಕ ಟಿಬ್ರೆವಾಲ್ರನ್ನು ತಮ್ಮ ಅಭ್ಯರ್ಥಿಯಾಗಿ ಆರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈ ಹಿಂದೆ ಹೇಳಲಾಗಿತ್ತು. ಇದರಂತೆ ಬಿಜೆಪಿ ಈಗ ವಕೀಲೆ ಪ್ರಿಯಾಂಕ ಟಿಬ್ರೆವಾಲ್ರನ್ನು ಮಮತಾ ಬ್ಯಾನರ್ಜಿ ಎದುರು ಸ್ಪರ್ಧೆಗೆ ಇಳಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಪ್ರೇರಣೆಗೆ ಒಳಪಟ್ಟು ಬಿಜೆಪಿಗೆ ಆಗಸ್ಟ್ 2014 ರಲ್ಲಿ ಸೇರ್ಪಡೆಯಾದ ಬಾಬೂಲ್ ಸುಪ್ರಿಯೋರ ಕಾನೂನು ಸಲಹೆಗಾರರಾಗಿ ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಕಾರ್ಯ ನಿರ್ವಹಿಸುತ್ತಿದ್ದರು. 2015 ರಲ್ಲಿ ಕೋಲ್ಕತಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 58 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕ ಟಿಬ್ರೆವಾಲ್ ಸ್ಪರ್ಧಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್ನ ಸ್ವಪನ್ ಸಮ್ಮದರ್ ಎದುರು ಪರಾಭವಗೊಂಡಿದ್ದಾರೆ.
ಭವಾನಿಪುರದಲ್ಲಿ ಹೈ ವೋಲ್ಟೆಜ್ ಸ್ಪರ್ಧೆ: ದೀದಿ ಎದುರು ಬಿಜೆಪಿಯಿಂದ ವಕೀಲೆ ಕಣಕ್ಕೆ?
2020 ರಲ್ಲಿ ಪಶ್ಚಿಮ ಬಂಗಾಳದ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ಪ್ರಿಯಾಂಕ ಟಿಬ್ರೆವಾಲ್ ಆಯ್ಕೆಯಾಗಿದ್ದಾರೆ. ಇನ್ನು 2021 ರಲ್ಲಿ ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಇಂತಲಿ ಕ್ಷೇತ್ರದಲ್ಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಆದರೆ ಟಿಎಂಸಿಯ ಸ್ವರ್ಣ ಕಮಲ್ ಸಹಾ ಎದುರು 58,257 ಮತಗಳ ಅಂತರದ ಸೋಲನ್ನುಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯವನ್ನು ಗಳಿಸಿದ ಬಳಿಕ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರದಲ್ಲಿ ಸ್ಪರ್ಧಿಸಿರಲಿಲ್ಲ. ಬದಲಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಬಳಿಕ ಮಮತಾ ಬ್ಯಾನರ್ಜಿ ಮೇ 5ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ನವೆಂಬರ್ 5 ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ.
ಈ ಹಿನ್ನೆಲೆಯಿಂದಾಗಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಿಗದಿಯಾಗಿದ್ದು, ಮಮತಾ ಬ್ಯಾನರ್ಜಿ ವಿರುದ್ದ ಬಿಜೆಪಿಯಿಂದ ವಕೀಲೆ ಸ್ಪರ್ಧೆಗೆ ಇಳಿದಿದ್ದಾರೆ. ಭವಾನಿಪುರ ಮಾತ್ರವಲ್ಲದೇ ಇನ್ನೂ ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಮುರ್ಷಿದಾಬಾದ್ನ ಜಂಗೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಜಾಕಿರ್ ಹುಸೇನ್, ಸಮ್ಸೇರ್ಗಂಜ್ ಕ್ಷೇತ್ರದಿಂದ ಅಮಿರುಲ್ ಇಸ್ಲಾಂ ಟಿಎಂಸಿಯಿಂದ ಕಣಕ್ಕೆ ಇಳಿಸಲಾಗಿದೆ. ಈ ಎರಡೂ ಕ್ಷೇತ್ರಗಳ ಶಾಸಕರು ಕೋವಿಡ್ನಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಉಪಚುನಾವಣೆ ನಡೆಯುತ್ತಿದೆ.
ಉಪಚುನಾವಣೆ: ಇಂದಿನಿಂದ ದೀದಿ ಪ್ರಚಾರ, ಅಭ್ಯರ್ಥಿ ಕಣಕ್ಕಿಳಿಸದ ಕಾಂಗ್ರೆಸ್
ಇನ್ನು ಕಾಂಗ್ರೆಸ್ ಪಕ್ಷ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಗೆಲುವಿಗೆ ಬೆಂಬಲವೆಂಬಂತೆ ತಮ್ಮ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಭವಾನಿಪುರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ದವಾಗಿ ಅಭ್ಯರ್ಥಿಯನ್ನು ಇಳಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಯೂಟರ್ನ್ ಹೊಡೆದಿದೆ. "ಪಕ್ಷವು ತೃಣಮೂಲ ಕಾಂಗ್ರೆಸ್ನ ಎದುರು ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ," ಎಂದು ಕಾಂಗ್ರೆಸ್ ಹೇಳಿಕೊಂಡಿದೆ. "ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆದೇಶದಂತೆ ನಾವು ತೃಣಮೂಲ ಕಾಂಗ್ರೆಸ್ನ ವಿರುದ್ದವಾಗಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ, ಹಾಗೆಯೇ ಮಮತಾ ವಿರುದ್ದ ಯಾವುದೇ ಪ್ರಚಾರವನ್ನು ಮಾಡುವುದಿಲ್ಲ," ಎಂದು ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಕಾಂಗ್ರೆಸ್ನ ಈ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಪಿಐಎಂ ನಾಯಕ ಸುಜನ್ ಚಕ್ರವರ್ತಿ, "ನಾವು ಟಿಎಂಸಿ ಹಾಗೂ ಬಿಜೆಪಿ ವಿರುದ್ದವಾಗಿ ನಮ್ಮ ಅಭ್ಯರ್ಥಿಯನ್ನು ಮೂರು ಕ್ಷೇತ್ರಗಳಲ್ಲೂ ಕಣಕ್ಕೆ ಇಳಿಸುತ್ತೇವೆ. ಜನರಿಗೆ ಬದಲಾವಣೆಯ ಅಗತ್ಯವಿದೆ. ಆದರೆ ನಾವು ಕಾಂಗ್ರೆಸ್ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿಕೊಳ್ಳುವಂತೆ ನಾವು ಹೇಳಲು ಸಾಧ್ಯವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ತಾನು ಬಿಜೆಪಿಯ ಅಭ್ಯರ್ಥಿಯಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಕೀಲೆ ಪ್ರಿಯಾಂಕ ಟಿಬ್ರೆವಾಲ್, "ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಸಂದೇಶಕಿ, ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಆರಂಭವಾದ ನಂತರ ದೇಶವು ಬೆಳೆಯುತ್ತಿದೆ, ಆದ್ದರಿಂದ ಭವಾನಿಪುರದ ಜನರು ನನಗೆ ಮತ ಹಾಕಬೇಕು ಎಂದು ನಾನು ಬಯಸುತ್ತೇನೆ. ಈ ಮೂಲಕ ಪಶ್ಚಿಮ ಬಂಗಾಳವನ್ನೇ ನಾವು ಅಭಿವೃದ್ದಿ ಪಡಿಸಬಹುದು," ಎಂದು ಹೇಳಿದ್ದರು.
(ಒನ್ ಇಂಡಿಯಾ ಸುದ್ದಿ)