Just in: ಬಂಗಾಳ ಕೊಲೆ ಪ್ರಕರಣ, ಸಿಬಿಐನಿಂದ 7 ಮಂದಿ ಬಂಧನ
ನವದೆಹಲಿ, ಜುಲೈ 25: ಕಳೆದ ವರ್ಷ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಭುಗಿಲೆದ್ದ ಹಿಂಸಾಚಾರದ ಘಟನೆಗಳ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 7 ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದರು.
ಪ್ರಣಬ್ ಬರ್ಕೈತ್, ಪ್ರೀತಮ್ ರಾಯ್ ಸರ್ಕಾರ್, ರತನ್ ರಾಯ್ ಸರ್ಕಾರ್, ಲಿತನ್ ಶಿಲ್, ಲಿತನ್ ಭೌಮಿಕ್, ನಕುಲ್ ರಾಯ್ ಸರ್ಕಾರ್ ಮತ್ತು ಬಿಸ್ವಜಿತ್ ಬರ್ಮನ್ ಎಂಬುವವರನನ್ನು ಬಂಧಿಸಲಾಗಿದೆ. ಏಳು ಮಂದಿ ಆರೋಪಿಗಳ ಮೇಲೆ ನಿರಂತರ ಕಣ್ಗಾವಲು ಇಡಲಾಗಿತ್ತು. ನಂತರ ಅವರನ್ನು ಕೂಚ್ ಬೆಹಾರ್, ಜೈಪುರ ಮತ್ತು ಕೋಲ್ಕತ್ತಾದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರೋಪಿಗಳ ಇರುವನ್ನು ಖಚಿತ ಮಾಹಿತಿಯ ಆಧಾರದ ಮೇಲೆ, ಸಿಬಿಐ ಮೂರು ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಸಂಘಟಿತ ಶೋಧಕಾರ್ಯ ನಡೆಸಿತು. ಬಳಿಕ ಅವರೆಲ್ಲರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಕರಣ ಕುರಿತು ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ 2021ರ ಆಗಸ್ಟ್ 19ರಂದು ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಮೇ 4, 2021 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಶ್ರೀಧರ್ ದಾಸ್ ಎಂಬುವವರನ್ನು ಅಪರಿಚಿತ ಜನರು ದೊಣ್ಣೆ ಮತ್ತು ಕಬ್ಬಿಣದ ರಾಡ್ಗಳಿಂದ ನಿರ್ದಯವಾಗಿ ಥಳಿಸಿದ್ದಾರೆ ಎಂದು ಏಜೆನ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಂತ್ರಸ್ತರ ಪತ್ನಿ ಆತನನ್ನು ರಕ್ಷಿಸಲು ಯತ್ನಿಸಿದಾಗ ಆರೋಪಿ ಆಕೆಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದೆ.
"ಘಟನೆಯಲ್ಲಿ ಗಾಯಗೊಂಡಿದ್ದ ಶ್ರೀಧರ್ ದಾಸ್ ಅವರನ್ನು ದಿನ್ಹಟಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೂಚ್ ಬೆಹಾರ್ನಲ್ಲಿರುವ ಇತರ ಆಸ್ಪತ್ರೆಗಳು / ನರ್ಸಿಂಗ್ ಹೋಮ್ಗಳಲ್ಲಿ ದಾಖಲಿಸಲಾಯಿತು. ಆದರೆ, ಜೂನ್ 21, 2021 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು" ಎಂದು ಸಿಬಿಐ ತಿಳಿಸಿದೆ.
ಮೇ 2, 2021 ರಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಬಂಗಾಳದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತ್ತು. ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ.
Recommended Video
ತೃಣಮೂಲ ಪಕ್ಷದ ಸದಸ್ಯರನ್ನು ಪ್ರತಿಸ್ಪರ್ಧಿ ಗುಂಪುಗಳು ಗುರಿಯಾಗಿಸಿಕೊಂಡಿರುವ ಆರೋಪಗಳು ಮತ್ತು ಪ್ರತ್ಯಾರೋಪಗಳ ನಡುವೆ, ಕೋಲ್ಕತ್ತಾ ಹೈಕೋರ್ಟ್ ಈ ಅಪರಾಧಗಳ ತನಿಖೆಯನ್ನು ಸಿಬಿಐಗೆ ವಹಿಸಿದೆ.