ಚುನಾವಣಾ ನಂತರದ ಹಿಂಸಾಚಾರ: ದೀದಿ ಸರ್ಕಾರದ ವಿರುದ್ದ ಹೈಕೋರ್ಟ್ ತರಾಟೆ
ಕೋಲ್ಕತಾ, ಜು. 02: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಬಳಿಕ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನು ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವು ನಿರಾಕರಣೆ ಮೋಡ್ನಲ್ಲಿದೆ ಎಂದು ನ್ಯಾಯಪೀಠ ಹೇಳಿದೆ.
ವಿಧಾನಸಭೆ ಚುನಾವಣೆಯ ಬಳಿಕ ಹಿಂಸಾಚಾರ ನಡೆದಿದೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿವೆ. ರಾಜ್ಯವು ಕೆಟ್ಟ ಹಾದಿಯಲ್ಲಿ ಸಿಲುಕಿದೆ ಎಂದು ಕೋಲ್ಕತ್ತಾ ಹೈಕೋರ್ಟ್ ಪೀಠ ಅಭಿಪ್ರಾಯಿಸಿದೆ.
ಬಂಗಾಳ ಹಿಂಸಾಚಾರ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಈ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ನಡೆಸಿದ್ದು, "ವರದಿಯ ಪರಿಶೀಲನೆಯಿಂದ ಅರ್ಜಿದಾರರು ತೆಗೆದುಕೊಂಡ ನಿಲುವಿನ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ಹಿಂಸಾಚಾರ ನಡೆದಿದೆ ಹಾಗೂ ರಾಜ್ಯವು ಕೆಟ್ಟ ಹಾದಿಯಲ್ಲಿ ಸಿಲುಕಿದೆ," ಎಂದಿದೆ.
ಚುನಾವಣೆ ಬಳಿಕದ ಹಿಂಸಾಚಾರದ ಬಗ್ಗೆ ಎನ್ಎಚ್ಆರ್ಸಿ ವರದಿಯನ್ನು ಪರಿಶೀಲಿಸಿದ ಕೋಲ್ಕತ್ತಾ ಹೈಕೋರ್ಟ್ ಎಲ್ಲಾ ವಿಷಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲು ಅಥವಾ ಎನ್ಎಚ್ಆರ್ಸಿ ಅಥವಾ ಇನ್ನಾವುದೇ ಪ್ರಾಧಿಕಾರ / ಆಯೋಗದ ಮುಂದೆ ಇರಿಸಲು, ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ದಾಖಲಾದ ಸಂತ್ರಸ್ತರ ಹೇಳಿಕೆಗಳನ್ನು ಪಡೆಯಲು ಪೊಲೀಸರಿಗೆ ನಿರ್ದೇಶನ ನೀಡಿದೆ.
"ಲೈಂಗಿಕ ದೌರ್ಜನ್ಯದ ಪ್ರಕರಣಗಳ ಬಗ್ಗೆ ಉಲ್ಲೇಖ ಮಾಡಿದ ಹೈಕೋರ್ಟ್, ಅಪ್ರಾಪ್ತ ವಯಸ್ಕರ ಮೇಲೂ ಹಲ್ಲೆ ನಡೆಸಲಾಗಿದೆ. ಅಪ್ರಾಪ್ತರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ," ಎಂದು ಹೇಳಿದೆ.
ಹಾಗೆಯೇ ರಾಜ್ಯ ಪೊಲೀಸರ ವಿಶೇಷ ಶಾಖೆ / ಗುಪ್ತಚರ ಶಾಖೆಯ ಪತ್ರವ್ಯವಹಾರದ ಸಂರಕ್ಷಣೆ, ವಿವಿಧ ನಿಯಂತ್ರಣ ಕೊಠಡಿಗಳ ದಾಖಲೆಗಳನ್ನು ಖಾತ್ರಿಪಡಿಸಿಕೊಳ್ಳುವಂತೆ ಹೈಕೋರ್ಟ್ ಬಂಗಾಳ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
ಎನ್ಎಚ್ಆರ್ಸಿ ಸಲ್ಲಿಸಿದ ಮಧ್ಯಂತರ ವರದಿಯನ್ನು ಆಧರಿಸಿ ನ್ಯಾಯಾಲಯ ನಿರ್ದೇಶನ ನೀಡಿದೆ. "ನಾವು ಮಧ್ಯಂತರ ವರದಿಯನ್ನು ಪ್ರಕಟಿಸುವುದಿಲ್ಲ," ಎಂದು ನ್ಯಾಯಾಲಯ ತಿಳಿಸಿದೆ
ಎನ್ಎಚ್ಆರ್ಸಿ ಸಮಿತಿಯ ಶಿಫಾರಸಿನಂತೆ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಹಿಂಸಾಚಾರದಿಂದ ಬಳಲುತ್ತಿರುವವರಿಗೂ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಿರ್ದೇಶಿಸಿದೆ. ಹಾಗೆಯೇ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಅಭಿಜಿತ್ ಸರ್ಕಾರ್ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಆದೇಶಿಸಿದೆ.
(ಒನ್ಇಂಡಿಯಾ ಸುದ್ದಿ)