ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಮತದಾರ ಪಾಠ: ಅಬ್ಬಾಸ್ ಸಿದ್ದಿಕಿ
ಕೋಲ್ಕತ್ತಾ, ಫೆಬ್ರವರಿ.28: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ದುರಹಂಕಾರಕ್ಕೆ ಮತದಾರರು ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಇಂಡಿಯನ್ ಸೆಕ್ಯೂಲರ್ ಫ್ರೆಂಟ್ ಅಬ್ಬಾಸ್ ಸಿದ್ದಿಕಿ ಕಿಡಿ ಕಾರಿದ್ದಾರೆ.
ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಮತ್ತು ಟಿಎಂಸಿ ಜನ ವಿರೋಧಿ ಆಡಳಿತಕ್ಕೆ ಜನರೇ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಮೀಕ್ಷೆ: ಚುನಾವಣಾ ನಿರತ ಮುಂದಿನ ಸಿಎಂ ಯಾರಾಗಬೇಕು?
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಮತ್ತು ಅದರ ಬಿ-ಭಾಗವಾಗಿರುವ ಟಿಎಂಸಿ ಪಕ್ಷಕ್ಕಿಂತ ಎಡಪಕ್ಷಗಳಿಗೆ ಮತದಾರರು ಹೆಚ್ಚಿನ ಬೆಂಬಲ ನೀಡಲಿದ್ದಾರೆ. "ಮಮತಾ ಮತ್ತು ಅವರ ಟಿಎಂಸಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದೆ ಮತ್ತು ಅರಾಜಕತೆಯನ್ನು ಬಿಚ್ಚಿಟ್ಟಿದೆ. ಅವರು ಚುನಾವಣೆಯಲ್ಲಿ ಅದಕ್ಕೆ ದಂಡ ಪಾವತಿಸಬೇಕಾಗುತ್ತದೆ" ಎಂದು ಅಬ್ಬಾಸ್ ಸಿದ್ದಿಕಿ ಹೇಳಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಮಾತುಕತೆ:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷ, ಕಾಂಗ್ರೆಸ್ ಹಾಗೂ ಇಂಡಿಯನ್ ಸೆಕ್ಯೂಲರ್ ಫ್ರೆಂಟ್ ಪಕ್ಷದ ನಡುವೆ ಸ್ಥಾನ ಹಂಚಿಕೆ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಈ ಮೈತ್ರಿಕೂಟವೇ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಲಿದೆ. ಭವಿಷ್ಯದಲ್ಲಿ ಯಾವುದೇ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅದರ ಬದಲಿಗೆ ಎಡಪಕ್ಷಗಳ ಮೈತ್ರಿಕೂಟವೇ ಆಡಳಿತ ನಡೆಸಲಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ:
ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿತು. ಈ ಪೈಕಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.