ಪಶ್ಚಿಮ ಬಂಗಾಳದಲ್ಲಿ ಮತ್ತೆ ಗಲಭೆ: ಪೊಲೀಸರ ಗುಂಡೇಟಿಗೆ ಇಬ್ಬರು ಬಲಿ
ಇತ್ತೀಚೆಗಷ್ಟೇ ವೈದ್ಯರ ಪ್ರತಿಭಟನೆಯಿಂದ ನಲುಗಿದ್ದ ಪಶ್ಚಿಮ ಬಂಗಾಳ ಇದೀಗ ಮತ್ತೊಂದು ಗಲಭೆಗೆ ಸಾಕ್ಷಿಯಾಗಿದೆ. ಶುಕ್ರವಾರ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ಇಬ್ಬರ ಸಾವಿನಲ್ಲಿ ಕೊನೆಯಾಗಿದ್ದು, ಇಂದು ಸಹ ಗಲಭೆ ಮುಂದುವರಿದಿದೆ.
ಪಶ್ಚಿಮ ಬಂಗಾಳದ ನಾರ್ಥ್ 24 ಪರ್ಗನಾಸ್ ಜಿಲ್ಲೆಯ ಭಟ್ಪುರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ 16 ಜನರನ್ನು ಬಂಧಿಸಲಾಗಿದೆ. ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
'ಕ್ಷಮೆ ಕೇಳಿ' ಎಂದ ವೈದ್ಯರು ದೀದಿಗೆ ಹಾಕಿದ 6 ಷರತ್ತುಗಳೇನು?
ಗಲಭೆಯಲ್ಲಿ ಇಬ್ಬರು ಮೃತರಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ನಡೆದ ಕ್ಷುಲ್ಲಕ ಘಟನೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಈ ಗುಂಪುಗಳಲ್ಲಿ ರಾಜಕೀಯ ವಿರೋಧಿಗಳಾದ ಬಿಜೆಪಿ ಮತ್ತು ಟಿಎಂಸಿ ಸದಸ್ಯರು ನುಸುಳಿಕೊಂಡು ಗಲಭೆ ಎಬ್ಬಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಗಲಭೆಯನ್ನು ನಿಯಂತ್ರಿಸಲು ಮುಂದಾದ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತರಾಗಿದ್ದಾರೆ ಎನ್ನಲಾಗಿದೆ. ಇದೀಗ ಗಲಭೆ ಮತ್ತಷ್ಟು ಉಗ್ರ ಸ್ವರೂಪ ಪಡೆದಿದ್ದು, ಇಬ್ಬರು ವ್ಯಕ್ತಿಗಳನ್ನು ಕೊಂದ ಪೊಲೀಸರು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗುತ್ತದೆ.
ಸರ್ವಪಕ್ಷ ಮುಖ್ಯಸ್ಥರ ಸಭೆಗೂ ಬರುವುದಿಲ್ಲ ಎಂದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಭಟ್ಪುರದಲ್ಲಿ ನಡೆಯುತ್ತಿರುವ ಗಲಭೆಯ ಕುರಿತು ವರದಿ ತಯಾರಿಸಿಸುವಂತೆ ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರು ನಿಯೋಗವೊಂದನ್ನು ಕಳಿಸಿದ್ದಾರೆ. ಇತ್ತೆಡೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸರ್ಕಾರ ಮತ್ತು ಪೊಲಿಸರ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.