ಪಶ್ಚಿಮ ಬಂಗಾಳ ಈಗ ಪರಿವರ್ತನೆಗೆ ಸಿದ್ಧವಾಗಿದೆ; ಮೋದಿ
ಕೋಲ್ಕತ್ತಾ, ಫೆಬ್ರವರಿ 22: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈಗ ರಾಜ್ಯವು ಅಭಿವೃದ್ಧಿ ಅಥವಾ ಪರಿವರ್ತನೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಸೋಮವಾರ ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, "ನಿಮ್ಮೆಲ್ಲರ ಉತ್ಸಾಹ ಹಾಗೂ ಶಕ್ತಿ, ಬಂಗಾಳವು ಪರಿವರ್ತನೆಗೆ ಸಿದ್ಧವಾಗಿದೆ ಎಂಬ ಸಂದೇಶವನ್ನು ಕೋಲ್ಕತ್ತಾದಿಂದ ದೆಹಲಿವರೆಗೂ ನೀಡಿದೆ" ಎಂದಿದ್ದಾರೆ.
ರಕ್ಷಣಾ ಉಪಕರಣಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಭಾರತ ಬದ್ಧ: ಮೋದಿ
"ಬಡತನವನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿರುವ ಎಲ್ಲಾ ದೇಶಗಳಲ್ಲಿ ಒಂದು ಸಾಮಾನ್ಯ ಅಂಶವಿದೆ. ಅದೇ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿ. ಅದನ್ನು ಪಶ್ಚಿಮ ಬಂಗಾಳ ಬಯಸುತ್ತಿದೆ. ರೈತರು ಹಾಗೂ ಬಡವರ ಬ್ಯಾಂಕ್ ಖಾತೆಗೆ ಕೇಂದ್ರ ನೇರವಾಗಿ ಹಣ ಹಾಕುತ್ತಿದೆ. ಆದರೆ ಟಿಎಂಸಿ ಸರ್ಕಾರದ ಕಾರಣ ಈ ಯೋಜನೆ ಫಲಾನುಭವಿಗಳಿಗೆ ಸೂಕ್ತವಾಗಿ ತಲುಪುತ್ತಿಲ್ಲ. ಇದರಿಂದಲೇ ತೃಣಮೂಲ ಕಾಂಗ್ರೆಸ್ ನಾಯಕರು ಶ್ರೀಮಂತರಾಗುತ್ತಿದ್ದಾರೆ ಹಾಗೂ ಮಧ್ಯಮ ವರ್ಗದವರು ಬಡವರಾಗುತ್ತಿದ್ದಾರೆ" ಎಂದು ದೂರಿದರು.
"ಕೇಂದ್ರದ ಆಯುಷ್ಮಾನ್ ಭಾರತ ಯೋಜನೆಯೂ ಇಲ್ಲಿನ ಲಕ್ಷಾಂತರ ಮಂದಿಗೆ ತಲುಪುತ್ತಿಲ್ಲ. ಬಂಗಾಳದ ಜನರು ಹಾಗೂ ಅಭಿವೃದ್ಧಿ ನಡುವೆ ಮಮತಾ ಬ್ಯಾನರ್ಜಿ ಸರ್ಕಾರ ಇಂಥದ್ದೊಂದು ಕಂದಕವನ್ನು ಸೃಷ್ಟಿ ಮಾಡಿದೆ" ಎಂದು ಆರೋಪಿಸಿದರು. ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ 294 ಸೀಟುಗಳಿಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಟಿಎಂಸಿ ಹಾಗೂ ಬಿಜೆಪಿ ಎರಡೂ ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿದೆ.
ಸೋಮವಾರ ಪಶ್ಚಿಮ ಬಂಗಾಳ ಭೇಟಿಗೂ ಮುನ್ನ ಪ್ರಧಾನಿ ಮೋದಿ ಅಸ್ಸಾಂಗೆ ಭೇಟಿ ನೀಡಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.