ಯಾಸ್ ಚಂಡಮಾರುತ: ಪ್ರಧಾನಿ ಮೋದಿ ಜೊತೆಗಿನ ಪರಿಶೀಲನಾ ಸಭೆಗೆ ಗೈರಾದ ದೀದಿ
ಕೊಲ್ಕತ್ತಾ, ಮೇ 28: ಯಾಸ್ ಚಂಡಮಾರುತ ಭಾರೀ ಕೊಲ್ಕತ್ತಾ ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಯುಂಟು ಮಾಡಿದೆ. ಸಾಕಷ್ಟು ಆಸ್ತಿಪಾಸ್ತಿಗಳು ಈ ಭೀಕರ ಚಂಡಮಾರುತದ ಕಾರಣದಿಂದಾಗಿ ನಷ್ಟಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳಕ್ಕೆ ತೆರಳಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಇದರ ಜೊತೆಗೆ ಪಶ್ಚಿಮ ಮಿಡ್ನಾಪುರದ ಕಲೈಕುಂದದಲ್ಲಿ ಪರಿಶೀಲನಾ ಸಭೆಯನ್ನು ನಡೆಸಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಈ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದು ಮಮತಾ ಬ್ಯಾನರ್ಜಿ ಕ್ಷುಲ್ಲಕ ರಾಜಕೀಯವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊರೊನಾ ಜೊತೆ ಯಾಸ್: ಒಡಿಶಾ ಸಿಎಂ ಕಾರ್ಯವೈಖರಿ ಇಡೀ ದೇಶಕ್ಕೆ ಮಾದರಿ!
ಆದರೆ ಮೂಲಗಳು ಮಾಹಿತಿಯ ಪ್ರಕಾರ ಪ್ರಧಾನಿ ಮೋದಿ ಜೊತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮುಖಾಮುಖಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಪರಿಶೀಲನಾ ಸಭೆಯ ನಂತರ ಪ್ರಧಾನಿ ಮೋದಿ ಜೊತೆಗೆ 10-15 ನಿಮಿಷಗಳ ಕಾಲ ಮಮತಾ ಬ್ಯಾನರ್ಜಿ ಚರ್ಚೆ ನಡೆಸಿದ್ದು ಚಂಡಮಾರುತದಿಂದ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಪ್ರಧಾನಿ ಮೋದಿ ನಡೆಸಿದ ಪರಿಶೀಲನಾ ಸಭೆಗೆ ಮಮತಾ ಬ್ಯಾನರ್ಜಿ ಗೈರು ಹಾಜರಾದ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವಿಯ ಟ್ವಿಟ್ಟರ್ನಲ್ಲಿ ಟೀಕಿಸಿದ್ದಾರೆ. ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧದ ಸೋಲು ಅವರನ್ನು ಇನ್ನೂ ಕಾಡುತ್ತಿದೆ ಎಂದಿರುವ ಮಾಳವಿಯಾ ಈ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಕ್ಷುಲ್ಲಕ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಬಂಗಾಳ, ಒಡಿಶಾದಲ್ಲಿ ಯಾಸ್ ಅಬ್ಬರ, ಮಧ್ಯರಾತ್ರಿ ಜಾರ್ಖಂಡ್ಗೆ ಭೀತಿ
ಇದಕ್ಕೂ ಮುನ್ನ ಪ್ರಧಾನಿ ಮೋದಿ ಒಡಿಶಾದ ಭುವನೇಶ್ವರಗೆ ತೆರಳಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ವಿವರಗಳನ್ನು ಪಡೆದುಕೊಂಡರು. ನಂತರ ಒಡಿಶಾದಲ್ಲಿ ಯಾಸ್ ಚಂಡಮಾರುತದಿಂದ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗಿರುವ ಬಾಲಸೋರ್ ಮತ್ತು ಭದ್ರಕ್ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ.