ಅಕ್ಟೋಬರ್ 7ರಂದು ವಿಧಾನಸಭೆ ಸದಸ್ಯೆಯಾಗಿ ಮಮತಾ ಪ್ರಮಾಣವಚನ
ಕೋಲ್ಕತ್ತಾ, ಅಕ್ಟೋಬರ್ 05: ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಸೆಪ್ಟೆಂಬರ್ 30ರಂದು ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಕ್ಟೋಬರ್ 07ರಂದು ವಿಧಾನಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಈ ಕುರಿತು ಮಾಹಿತಿ ನೀಡಿದ್ದು, ಉಪ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಇಬ್ಬರು ಟಿಎಂಸಿ ಶಾಸಕರೂ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು.,
ಶಾಸಕರಿಗೆ ಪ್ರಮಾಣವಚನ ಬೋಧಿಸುವ ಸ್ಪೀಕರ್ ಅಧಿಕಾರವನ್ನು ಹಿಂಪಡೆದ ಬಂಗಾಳ ರಾಜ್ಯಪಾಲರು
ಮಮತಾ ಬ್ಯಾನರ್ಜಿ ಅವರು ಭವಾನಿಪುರ ಉಪ ಚುನಾವಣೆಯಲ್ಲಿ 58,835 ಮತಗಳಿಂದ ಜಲಗಳಿಸಿದ್ದರು. ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಗೆಲ್ಲುವುದು ಅವರಿಗೆ ಅನಿವಾರ್ಯವಾಗಿತ್ತು. ಭಾನುವಾರ ಉಪ ಚುನಾವಣಾ ಫಲಿತಾಂಶ ಘೋಷಣೆಯಾಗಿತ್ತು.
ಜಾಕಿರ್ ಹುಸೇನ್ ಜಂಗೀಪುರ ಕ್ಷೇತ್ರ ಹಾಗೂ ಅಮಿರುಲ್ ಇಸ್ಲಾಂ ಅವರು ಸಂಸರ್ಗಂಜ್ ಕ್ಷೇತ್ರಗಳಿಂದ ಜಯ ಸಾಧಿಸಿದ್ದಾರೆ. ಚುನಾಯಿತ ಸದಸ್ಯರಾದ ಮಮತಾ ಬ್ಯಾನರ್ಜಿ, ಜಾಕಿರ್ ಹುಸೇನ್ , ಅಮಿರುಲ್ ಇಸ್ಲಾಂ ಅವರು ಅಕ್ಟೋಬರ್ 7 ರಂದು ಬೆಳಗ್ಗೆ 11.45ಕ್ಕೆ ಪ್ರಮಾಣವಚನ ಬೋಧಿಸಲಾಗುವುದು ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.
ಕೋಲ್ಕತ್ತಾದ ಟಿಎಂಸಿ ಕಚೇರಿ ಮುಂದೆ ಮತ್ತು ಸಿಎಂ ಮಮತಾ ನಿವಾಸದ ಹೊರಗೆ ಸಂಭ್ರಮ ಮನೆಮಾಡಿದೆ. ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಂಡಿದ್ದರು. ಆದರೂ ಟಿಎಂಸಿಗೆ ಬಹುಮತ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದರು.
ಅದಾಗಿ ಆರು ತಿಂಗಳ ಬಳಿಕ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಗೆಲುವು ಮಮತಾ ಬ್ಯಾನರ್ಜಿಗೆ ಸಿಎಂ ಖುರ್ಚಿ ಉಳಿಸಿಕೊಳ್ಳಲು ಅನಿವಾರ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದ ಹಿನ್ನೆಲೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಉಪ ಚುನಾವಣೆ ನಡೆದಿತ್ತು.
ಇಂದು ಹದಿನಾರನೇ ಸುತ್ತಿನ ಮತ ಎಣಿಕೆಯ ನಂತರ ಮಮತಾ ಬ್ಯಾನರ್ಜಿಯವರು 52 ಸಾವಿರದ 017 ಮತಗಳಿಂದ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರಿಂದ ಮುನ್ನಡೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತ್ತು.
2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ತನ್ನ ಪಕ್ಷದ ಗೆಲುವಿನ ಅಂತರ 49 ಸಾವಿರದ 936 ಮತಗಳನ್ನು ಈ ಬಾರಿ ಮುರಿದು ದಾಖಲೆ ಬರೆದಿದ್ದಾರೆ. ಆ ವರ್ಷವೇ ಅವರು ಎಡರಂಗದ 34 ವರ್ಷಗಳ ಆಡಳಿತವನ್ನು ಸೋಲಿಸಿ ಟಿಎಂಸಿಯನ್ನು ಅಧಿಕಾರಕ್ಕೆ ತಂದಿದ್ದರು.
ಮುರ್ಷಿದಾಬಾದ್ನ ಸಂಸರ್ಗಂಜ್ ಮತ್ತು ಜಂಗೀಪುರ ಉಪ ಚುನಾವಣೆಗಳಲ್ಲಿ ಸಹ ಟಿಎಂಸಿ ಮುಂಚೂಣಿಯಲ್ಲಿದೆ, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಏಳನೇ ಸುತ್ತಿನ ಎಣಿಕೆಯ ನಂತರ ಅಧಿಕೃತ ಮಾಹಿತಿಯ ಪ್ರಕಾರ, ದಕ್ಷಿಣ ಕೋಲ್ಕತ್ತಾದ ಭವಾನಿಪುರ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಬ್ಯಾನರ್ಜಿ 76 ಸಾವಿರದ 413 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ 24,396 ಮತಗಳನ್ನು ಪಡೆದಿದ್ದರು.
ಭವಾನಿಪುರದ ಮತದಾರರ ತೀರ್ಪು ನಂದಿಗ್ರಾಮದಲ್ಲಿ ನನ್ನ ವಿರುದ್ಧ ರೂಪಿಸಲಾದ ಪಿತೂರಿಗೆ ಉತ್ತರವಾಗಿದೆ. ನಾನು ಭವಾನಿಪುರ ಪೌರ ಸಂಸ್ಥೆಯ ಎಲ್ಲಾ ವಾರ್ಡ್ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದೇನೆ "ಎಂದು ಉಪಚುನಾವಣೆಯಲ್ಲಿ ಗೆದ್ದ ನಂತರ ಮಮತಾ ಬ್ಯಾನರ್ಜಿ ಹೇಳಿದರು.