ಆ ಬ್ಯಾಂಕ್ ಉದ್ಯೋಗಿ ಕದ್ದಿದ್ದು 84 ಲಕ್ಷ ರುಪಾಯಿ, ಎಲ್ಲವೂ ನಾಣ್ಯಗಳೇ!
ಪಶ್ಚಿಮ ಬಂಗಾಲದ ಕೋಲ್ಕತ್ತಾದ ಎಂಬತ್ತೆರಡು ಕಿಲೋಮೀಟರ್ ದೂರದಲ್ಲಿರುವ ಮೇಮಾರಿಯ ಎಸ್ ಬಿಐ ಶಾಖೆಯಲ್ಲಿ ವಿಲಕ್ಷಣ ಪ್ರಕರಣವೊಂದು ಬಯಲಾಗಿದೆ. 35 ವರ್ಷದ ತಾರಕ್ ಜೈಸ್ವಾಲ್ ಈ ಶಾಖೆಯಲ್ಲಿ ಹಿರಿಯ ಸಹಾಯಕ ಮ್ಯಾನೇಜರ್. ಕಳೆದ 17 ತಿಂಗಳ ಅವಧಿಯಲ್ಲಿ 84 ಲಕ್ಷ ರುಪಾಯಿಯನ್ನು ಆತ ಕಳವು ಮಾಡಿದ್ದಾನೆ. ಆ ಮೊತ್ತ ಪೂರ್ತಿಯಾಗಿ ನಾಣ್ಯಗಳಲ್ಲೇ ಕಳವು ಮಾಡಲಾಗಿದೆ.
ಸಾರ್ವಜನಿಕವಾಗಿ ಚಲಾವಣೆಯಲ್ಲಿರುವ ದೊಡ್ಡ ಮೊತ್ತದ ನಾಣ್ಯವಾದ 10 ರುಪಾಯಿಯದ್ದನ್ನೇ ಕಳವು ಮಾಡಿದ್ದು, ಹಾಗೆ ಹದಿನೇಳು ತಿಂಗಳಲ್ಲಿ 8,40,000 ನಾಣ್ಯಗಳು, ಪ್ರತಿ ತಿಂಗಳು 50 ಸಾವಿರ ನಾಣ್ಯಗಳು, ದಿನಕ್ಕೆ 2 ಸಾವಿರದಂತೆ (25 ಕಾರ್ಯ ನಿರ್ವಹಿಸುವ ದಿನಗಳಂತೆ) 84 ಲಕ್ಷ ರುಪಾಯಿ ಕಳುವಾಗಿದೆ.
ಸಿಸಿಬಿ ಅಲೋಕ್ ಕುಮಾರ್ ರೌಡಿಗಳಿಗೆ 'ಸಿಂಹಸ್ವಪ್ನ' ಅನ್ನೋದು ಇದೇ ಕಾರಣಕ್ಕೆ
ಇಷ್ಟೆಲ್ಲ ಹಣ ಹಾಕಿದರೂ ಒಂದು ನಾಣ್ಯ ಕೂಡ ವಾಪಸಾಗಿಲ್ಲ. ಶುಕ್ರವಾರ ಜೈಸ್ವಾಲ್ ನನ್ನು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ. ಶನಿವಾರದಂದು ಕೋರ್ಟ್ ನಲ್ಲಿ ಹಾಜರುಪಡಿಸಿದ್ದು, ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಅಂದಹಾಗೆ ಇಷ್ಟೆಲ್ಲ ಹಣವನ್ನು ಜೈಸ್ವಾಲ್ ಹಾಕಿದ್ದು ತನ್ನ ಲಾಟರಿ ಚಟಕ್ಕೆ.
ಆಡಿಟ್ ನಡೆಯುವಾಗ ಜೈಸ್ವಾಲ್ ಬರಲಿಲ್ಲ
ಬ್ಯಾಂಕ್ ನಿಂದ ಕಳವು ಮಾಡಿದ ಸಂಪೂರ್ಣ ಹಣವನ್ನು ಲಾಟರಿಗೆ ಹಾಕಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಜೈಸ್ವಾಲ್ ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ನವೆಂಬರ್ ಇಪ್ಪತ್ತೊಂಬತ್ತನೇ ತಾರೀಕು ಬ್ಯಾಂಕ್ ನಲ್ಲಿನ ನೋಟು ಹಾಗೂ ನಾಣ್ಯಗಳ ಆಡಿಟ್ ಆರಂಭಿಸಿದಾಗಿನಿಂದ ಜೈಸ್ವಾಲ್ ಬ್ಯಾಂಕ್ ಗೆ ಹಾಜರಾಗುವುದನ್ನೇ ನಿಲ್ಲಿಸಿದ್ದ. ರಜಾಗೆ ಕೂಡ ಅರ್ಜಿ ಹಾಕಿರಲಿಲ್ಲ.
ಕರೆನ್ಸಿ ಚೆಸ್ಟ್ ಕೀಲಿ ಕೈಯನ್ನು ಪತ್ನಿಗೆ ಕೊಟ್ಟು ಕಳಿಸಿದ್ದ
ಪ್ರತಿ ದಿನದ ಕೆಲಸ ಪೂರ್ಣಗೊಂಡ ಮೇಲೆ ನಾಣ್ಯಗಳನ್ನು ಲೆಕ್ಕ ಹಾಕಿ ಅದನ್ನು ಜೋಪಾನ ಮಾಡುವ ಜವಾಬ್ದಾರಿ, ಅಂದರೆ ಕರೆನ್ಸಿ ಚೆಸ್ಟ್ ನೋಡಿಕೊಳ್ಳುತ್ತಿದ್ದುದು ಇದೇ ಜೈಸ್ವಾಲ್. ಆದ್ದರಿಂದಲೇ ಆತನೇ ಪ್ರಮುಖ ಶಂಕಿತನಾದ. ಆತನಿಗೆ ಬ್ಯಾಂಕ್ ಗೆ ಬರುವಂತೆ ತಿಳಿಸಿದಾಗ ಕರೆನ್ಸಿ ಚೆಸ್ಟ್ ಕೀಲಿ ಕೈಯನ್ನು ತನ್ನ ಪತ್ನಿಗೆ ಕೊಟ್ಟು ಕಳಿಸಿದ್ದ.
ಇಷ್ಟು ದೊಡ್ಡ ಮೊತ್ತದ ನಾಣ್ಯಗಳನ್ನು ಏಕೆ ಇಡಲಾಗಿತ್ತು?
ಇಷ್ಟು ದೊಡ್ಡ ಮೊತ್ತದ ನಾಣ್ಯಗಳನ್ನು ಏಕೆ ಬ್ಯಾಂಕ್ ನಲ್ಲಿ ಇಡಲಾಗಿತ್ತು ಎಂಬ ಪ್ರಶ್ನೆಯನ್ನು ಪೊಲೀಸರು ಕೇಳಿದ್ದಾರೆ. ಅದಕ್ಕೆ ಉತ್ತರ ಸಿಗಬೇಕಾಗಿದೆ. ಇನ್ನು ಬ್ಯಾಂಕ್ ನಿಂದ ಆಚೆಗೆ ನಾಣ್ಯಗಳನ್ನು ಜೈಸ್ವಾಲ್ ಸಾಗಿಸುತ್ತಿದ್ದದ್ದು ಹೇಗೆ ಎಂಬ ಬಗ್ಗೆ ಕೂಡ ತಿಳಿದುಕೊಳ್ಳಬೇಕಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಲಾಟರಿ ಟಿಕೆಟ್ ಚಟ ಬಿಡಲು ಆಗುತ್ತಿರಲಿಲ್ಲ
ಒಂದಲ್ಲಾ ಒಂದು ದಿನ ನಾನು ಸಿಕ್ಕಿಬೀಳುವ ಬಗ್ಗೆ ಗೊತ್ತಿತ್ತು. ಆದರೆ ಲಾಟರಿ ಟಿಕೆಟ್ ಖರೀದಿಸುವ ಚಟದಿಂದ ಹೊರಬರಲು ಸಾಧ್ಯವಾಗಲಿಲ್ಲ. ಆದರೆ ಬ್ಯಾಂಕ್ ನಿಂದ ನನಗೆ ಯಾರೂ ಸಹಾಯ ಮಾಡಿಲ್ಲ ಎಂದು ಜೈಸ್ವಾಲ್ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.