ಬಿಜೆಪಿಗೆ ಟಿಎಂಸಿ ನಾಯಕ, ಮಮತಾ ಮೇಲೆರಗಿದ ಮತ್ತೊಂದು ಬರಸಿಡಿಲು!
ಕೋಲತ್ತಾ, ಜೂನ್ 18: ಒಂದರ ಮೇಲೊಂದು ಆಘಾತ ಎದುರಿಸುತ್ತಿರುವ ಮಮತಾ ಬ್ಯಾನರ್ಜಿಗೆ ಮತ್ತೊಂದು ಬರಸಿಡಿಲು ಬಂದೆರಗಿದೆ.
ಟಿಎಂಸಿಯ ಪ್ರಮುಖ ಶಾಸಕರಲ್ಲೊಬ್ಬರಾಗಿದ್ದ ಸುನಿಲ್ ಸಿಂಗ್ ಎಂಬುವವರು 12 ಕೌನ್ಸಲರ್ ಜೊತೆಗೆ ಬಿಜೆಪಿ ಸೇರಿದ್ದಾರೆ.
ಸೋಮವಾರದಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗಿಯ, ಹಿರಿಯ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಸುನಿಲ್ ಸಿಂಗ್ ಬಿಜೆಪಿ ಸೇರಿದರು.
ಟಾರ್ಗೆಟ್ 250! ಬಂಗಾಳ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಜೆಪಿ
ಲೋಕಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸಿದ್ದು, ಹಲವು ಟಿಎಂಸಿ ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆಯಿಂದ ಈಗಾಗಲೇ ಕಂಗೆಟ್ಟಿರುವ ಮಮತಾ ಬ್ಯಾನರ್ಜಿಗೆ ಒಂದರ ಮೇಲೊಂದು ಬರಸಿಡಿಲು ಬಂದೆರಗುತ್ತಲೇ ಇದೆ.
ಬಿಜೆಪಿ ಸೇರಿದ ಟಿಎಂಸಿ ಶಾಸಕ
ತೃಣಮೂಲ ಕಾಂಗ್ರೆಸ್ ನ ಸುನಿಲ್ ಸಿಂಗ್ ಪಶ್ಚಿಮ ಬಂಗಾಳದ ನೌಪುರ ಕ್ಷೇತ್ರದ ಶಾಸಕರಾಗಿದ್ದರು. ಪೊಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ದೂರಿರುವ ಸುನಿಲ್ ಸಿಂಗ್, ತಾವು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯಿಂದ ಆಕರ್ಷಿತನಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದಿದ್ದಾರೆ.
ಎಲ್ಲಾ ಮುಗೀತು, ಈಗ ಮಮತಾ ಕಣ್ಣಲ್ಲಿ ಟಿಎಂಸಿ ಸದಸ್ಯರೇ ವಿಲನ್!
ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸರ್ಕಾರ
"ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ತತ್ತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದು, ದೆಹಲಿಯಲ್ಲಿ ಮೋದಿ ಸರ್ಕಾರ ಅಸ್ತಿತ್ವದಲ್ಲಿರುವಂತೆ ಪಶ್ಚಿಮ ಬಂಗಾಳ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡುವುದು ನಮ್ಮ ಗುರಿ" ಎಂದು ಸುನಿಲ್ ಸಿಂಗ್ ಹೇಳಿದ್ದಾರೆ.
ಕಳ್ಳರು ನಮಗೆ ಬೇಕಿಲ್ಲ!
ಸುನಿಲ್ ಸಿಂಗ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಟಿಎಂಸಿ ದುರ್ಬಲ ಪಕ್ಷವಲ್ಲ. 15-20 ಕೌನ್ಸಲರ್ ಗಳು ಹಣ ಪಡೆದು ಪಕ್ಷ ಬಿಟ್ಟರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರಿಗೆ ಪಕ್ಶಃ ತೊರೆಯುವ ಇಚ್ಛೆ ಇದೆಯೋ ಅವರು ತೊರೆಯಲಿ. ನಮ್ಮ ಪಕ್ಷಕ್ಕೆ ಕಳ್ಳರು ಬೇಕಿಲ್ಲ. ಒಬ್ಬರು ಬಿಟ್ಟರೆ 500 ಜನರನ್ನು ಕರೆತರುವ ತಾಕತ್ತು ನನಗಿದೆ" ಎಂದು ಈ ಬೆಳವಣಿಗೆಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಮಮತಾಗೆ ಗಾಯದ ಮೇಲೆ ಬರೆ: ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆ
ಬಂಗಾಳದಲ್ಲಿ ಬಿಜೆಪಿ ಟಾರ್ಗೆಟ್ 250 !
ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ಕ್ಷೇತ್ರಗಳ ವಿಧಾನಸಭೆಯಲ್ಲಿ ಕನಿಷ್ಠ 250 ಸ್ಥಾನಗಳಲ್ಲಾದರೂ ಗೆಲ್ಲಲೇ ಬೇಕೆಂಬ ಗುರಿಯನ್ನು ಬಿಜೆಪಿ ಹೊಂದಿದ್ದು, ಅದಕ್ಕಾಗಿ ಇಂದಿನಿಂದಲೇ ಕಾರ್ಯತಂತ್ರ ರೂಪಿಸಿಕೊಳ್ಳಲು ಮುಂದಾಗಿದೆ. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು, ಟಿಎಂಸಿಯ ಶಾಸಕರನ್ನೇ ತನ್ನ ತೆಕ್ಕೆಗೆ ಸೇರಿಸಿಕೊಂಡರೆ ಅಭ್ಯರ್ಥಿಗಳ ಆಯ್ಕೆಯೂ ಕಷ್ಟವಾಗಲಾರದು ಮತ್ತು ಗೆಲುವೂ ಸುಲಭ ಎಂಬುದು ಬಿಜೆಪಿ ಲೆಕ್ಕಾಚಾರ.