ಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾ
ಕೋಲ್ಕತ್ತಾ, ಮೇ 22: ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಉಂಟು ಮಾಡಿರುವ ಅನಾಹುತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದರು.
Recommended Video
ಈ ವೇಳೆ ಪರಿಹಾರ ಕಾರ್ಯಾಚರಣೆಗೆ 1 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದರು. ಆದರೆ, ಮೋದಿ ಅವರ ಮೇಲೆ ಮಮತಾ ಬ್ಯಾನರ್ಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
'ಅಂಫಾನ್ ನಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಭಯಂಕರ'
''1 ಸಾವಿರ ಕೋಟಿ ರುಪಾಯಿಯನ್ನು ಪ್ರಧಾನಿಯವರು ಮುಂಗಡ ಕೊಟ್ಟರೋ? ಅಥವಾ, ಚಂಡಮಾರುತದ ಒಟ್ಟಾರೆ ಪ್ಯಾಕೇಜ್ ಕೊಟ್ಟಿದ್ದಾರೋ ಗೊತ್ತಿಲ್ಲ'' ಎಂದು ಹರಿಹಾಯ್ದಿದ್ದಾರೆ.
|
53 ಸಾವಿರ ಕೋಟಿ ರು ಕೊಡಬೇಕಿದೆ
''ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ 53 ಸಾವಿರ ಕೋಟಿ ರುಪಾಯಿ ಕೊಡಬೇಕಿದೆ. ಬೃಹತ್ ಮೊತ್ತದ ಹಣ ಏಕೆ ಬರುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ಈಗ ನೋಡಿದರೆ ಚಂಡಮಾರುತ ನಮ್ಮ ರಾಜ್ಯದಲ್ಲಿ ಸಾಕಷ್ಟು ಹಾನಿ ಮಾಡಿದೆ. ಇದು ಗೊತ್ತಿದ್ದರೂ ಮೋದಿ ಅವರು ಕೇವಲ 1 ಸಾವಿರ ಕೋಟಿ ರುಪಾಯಿ ಘೋಷಿಸಿದ್ದಾರೆ'' ಎಂಬ ಅರ್ಥದಲ್ಲಿ ಮಮತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
'ನೀವು ಕೊಡಬೇಕು ಎಂದು ಮನಸ್ಸು ಮಾಡಿ'
''ಮೋದಿ ಅವರು ಒಂದು ಸಾವಿರ ಕೋಟಿ ರುಪಾಯಿ ಕೊಟ್ಟು, ಇವಾಗ ಇಷ್ಟು ತೆಗೆದುಕೊಳ್ಳಿ, ಮುಂದಿನದ್ದನ್ನು ನೋಡೋಣ ಎಂದಿದ್ದಾರೆ. ನೀವು ಕೊಡಬೇಕು ಎಂದು ಮನಸ್ಸು ಮಾಡಿ, ಯಾವುದಕ್ಕೆ ಕೊಡಬೇಕು ಎಂಬುದನ್ನು ನಾವು ಹೇಳುತ್ತೇವೆ ಎಂದು ಮೋದಿ ಅವರಿಗೆ ಹೇಳಿದ್ದೇನೆ'' ಎಂದು ಮಮತಾ ಬ್ಯಾನರ್ಜಿ ವಂಗ್ಯವಾಗಿ ಹೇಳಿದ್ದಾರೆ.
ಒಟ್ಟಾಗಿ ಕೆಲಸ ಮಾಡೋಣ
ಮಮತಾ ಬ್ಯಾನರ್ಜಿ ಅವರೊಂದಿಗೆ ಕೋಲ್ಕತ್ತ, ಹೌರಾ, ದಕ್ಷಿಣ ಪರಗಣ ಹಾಗೂ ಉತ್ತರ ಪರಗಣ, ಮಿಡ್ನಾಪುರ ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ''ದುರಂತದ ಸಮಯದಲ್ಲಿ ಒಟ್ಟಾಗಿ ಕೆಲಸ ಮಾಡೋಣ'' ಎಂದು ಅವರು ಕರೆ ನೀಡಿದ್ದಾರೆ.
72 ಕ್ಕೂ ಹೆಚ್ಚು ಜನರ ಪ್ರಾಣ ಹಾನಿ
ಬುಧವಾರ ಸಂಜೆ ಪಶ್ಚಿಮ ಬಂಗಾಳಕ್ಕೆ ದಾಂಗುಡಿ ಇಟ್ಟ ಅಂಫಾನ್ ಚಂಡಮಾರುತ ಒಂದೇ ದಿನದಲ್ಲಿ ಆ ರಾಜ್ಯದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಇಲ್ಲಿಯವರೆಗೆ 72 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಪ್ರಾಣ ಕಳೆದುಕೊಂಡವರಿಗೆ ತಲಾ ಎರಡೂವರೆ ಲಕ್ಷ ರುಪಾಯಿಯನ್ನು ತಕ್ಷಣದ ಪರಿಹಾರವನ್ನಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.