ಅಂಫಾನ್ ಅಟ್ಟಹಾಸ: ತಲೆ ಮೇಲೆ ಕೈ ಹೊತ್ತು ಕುಳಿತ ದೀದಿ!
ಕೋಲ್ಕತ್ತಾ, ಮೇ 21: ನಿನ್ನೆ ಸಂಜೆ ಪಶ್ಚಿಮ ಬಂಗಾಳಕ್ಕೆ ದಾಂಗುಡಿ ಇಟ್ಟ ಅಂಫಾನ್ ಚಂಡಮಾರುತ ಒಂದೇ ದಿನದಲ್ಲಿ ಆ ರಾಜ್ಯದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದೆ.
ಇಲ್ಲಿಯವರೆಗೆ 72 ಜನ ಪ್ರಾಣ ಕಳೆದುಕೊಂಡಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಪ್ರಾಣ ಕಳೆದುಕೊಂಡವರಿಗೆ ತಲಾ ಎರಡೂವರೆ ಲಕ್ಷ ರುಪಾಯಿಯನ್ನು ತಕ್ಷಣದ ಪರಿಹಾರವನ್ನಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.
'ಅಂಫಾನ್ ನಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಭಯಂಕರ'
ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಬಲ ಕಳೆದುಕೊಂಡಿದ್ದರೂ, ವ್ಯಾಪಕವಾಗಿ ಮಳೆಯನ್ನುಂಟು ಮಾಡುತ್ತಿದೆ. ಇದರಿಂದ ಬೇಸಿಗೆಯಲ್ಲೇ ಪಶ್ಚಿಮ ಬಂಗಾಳಕ್ಕೆ ಮಳೆಗಾಲದ ಸಮಸ್ಯೆ ಬಂದೆರಗಿದೆ. ಇದರಿಂದ ಸಿಎಂ ಮಮತಾ ಬ್ಯಾನರ್ಜಿ ಚಿಂತಾಕ್ರಾಂತರಾಗಿ ತಲೆ ಮೇಲೆ ಕೈ ಹೊತ್ತು ಕುಳಿತಂತಾಗಿದೆ.
1000 ಕೋಟಿ ತಕ್ಷಣದ ನಿಧಿ ಬಿಡುಗಡೆ
ಚಂಡಮಾರುತದಿಂದ ಇಡೀ ರಾಜ್ಯಾದೆಲ್ಲೆಡೆ ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ.
ಜೀರ್ಣೋದ್ಧಾರ ಕಾರ್ಯಕ್ಕಾಗಿ rs 1000 ಕೋಟಿ ತಕ್ಷಣದ ನಿಧಿ ಬಿಡುಗಡೆ ಮಾಡಿದ್ದೇವೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವೈಮಾನಿಕ ಸಮೀಕ್ಷೆ
ಶಾಸಕರು ಮತ್ತು ಮಂತ್ರಿಗಳು ಬಂಗಾಳದಾದ್ಯಂತ ಪ್ರತ್ಯೇಕ ತಂಡವಾಗಿ ಜಿಲ್ಲೆಗಳ ಬಗ್ಗೆ ಕಾಳಜಿ ವಹಿಸುವಂತೆ ಮಮತಾ ಕೇಳಿಕೊಂಡಿದ್ದಾರೆ. ಶನಿವಾರ ಉತ್ತರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳಲ್ಲಿ ಮಮತಾ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಶುಕ್ರವಾರ ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್
ಶುಕ್ರವಾರ ಮಧ್ಯಾಹ್ನ 3 ಕ್ಕೆ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕರೊಂದಿಗೆ ಪರಿಸ್ಥಿತಿ ನಿಭಾಯಿಸುವ ಬಗ್ಗೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಮಮತಾ ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚಿನ ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಅತ್ಯಂತ ದೊಡ್ಡ ಚಂಡಮಾರುತ
ಇದು ಅತ್ಯಂತ ದೊಡ್ಡ ಚಂಡಮಾರುತ ಎಂದು ಮಮತಾ ಹೇಳಿದ್ದಾರೆ. ಹಲವಾರು ಜನ ಸೋಶಿಯಲ್ ಮೀಡಿಯಾದಲ್ಲಿ 1737 ರಲ್ಲಿ ಬಂದಿದ್ದ ಚಂಡಮಾರುತ ದೊಡ್ಡದು ಎನ್ನುತ್ತಿದ್ದಾರೆ. ಆದರೆ, ನನ್ನ ಪ್ರಕಾರ ಇದು ಅತ್ಯಂತ ದೊಡ್ಡ ಅನಾಹುತಕಾರಿ ಚಂಡಮಾರುತ ಎಂದು ಮಮತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.