"ಭಾರತ್ ಮಾತಾ ಕೀ ಜೈ" ಎಂದರೆ ದೀದಿಗೆ ಸಿಟ್ಟು: ಪ್ರಧಾನಿ ಮೋದಿ
ಕೋಲ್ಕತ್ತಾ, ಫೆಬ್ರವರಿ.07: "ಪಶ್ಚಿಮ ಬಂಗಾಳದಲ್ಲಿ ನಿಮ್ಮ ಹಕ್ಕು ಮತ್ತು ಅಧಿಕಾರದ ಬಗ್ಗೆ ಪ್ರಶ್ನೆ ಮಾಡಿದರೆ ದೀದಿಯವರಿಗೆ ನಿರಾಶೆಯಾಗುತ್ತದೆ. ಅದೇ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರೆ ಅವರಿಗೆ ಸಿಟ್ಟು ಬರುತ್ತದೆ" ಎನ್ನುವ ಮೂಲಕ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಹಾಲ್ದಿಯಾದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮಾತನಾಡಿದರು. ಮಮತಾ ಬ್ಯಾನರ್ಜಿಯವರ ಆಡಳಿತದಿಂದ ರಾಜ್ಯದಲ್ಲಿ ಯಾವುದೇ ರೀತಿ ಪರಿವರ್ತನೆಯಾಗಿಲ್ಲ ಎಂದು ಮೋದಿ ಹೇಳಿದರು.
ಪಶ್ಚಿಮ ಬಂಗಾಳ ರೈತರಿಗೆ ಮಮತಾ ಅನ್ಯಾಯ ಮಾಡಿದ್ದಾರೆ; ನಡ್ಡಾ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತದಿಂದ ಪರಿವರ್ತನೆ ಕಂಡು ಬಂದಿಲ್ಲ. ಅದರ ಬದಲಿಗೆ ಆಸಕ್ತಿದಾಯಕವಾಗಿ ಎಡದ ಪುನರುಜ್ಜೀವನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೇವಡಿ ಮಾಡಿದ್ದಾರೆ.
ಎಡ ಪುನರುಜ್ಜೀವನ ಎಂದರೇನು:
ಪಶ್ಚಿಮ ಬಂಗಾಳದಲ್ಲಿ ಎಡ ಪುನರುಜ್ಜೀವನವಾಗಿದೆ ಎಂದಿರುವ ಪ್ರಧಾನಿ ಮೋದಿ, ಈ ಮಾತಿನ ಅರ್ಥವನ್ನೂ ಸಹ ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ, ಅಪರಾಧ, ಹಿಂಸೆ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಎಡದ ಪುನರುಜ್ಜೀವನ ಎಂದು ವಾಖ್ಯಾನಿಸಿದ್ದಾರೆ.
ಭಾನುವಾರ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಜನವರಿ.25ರಂದು ನಡೆದ ಘಟನೆ ಮರುಕಳಿಸುವ ಸೂಕ್ಷ್ಮತೆಯನ್ನು ಅರಿತು, ಈ ಸಮಾರಂಭದಿಂದ ದೀದಿ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.