ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ: ಟಿಎಂಸಿಗೆ ನಾಲ್ವರು ನಾಯಕರು!
ಕೋಲ್ಕತ್ತಾ, ಮಾರ್ಚ್.04: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಟಿಎಂಸಿಯಿಂದ ಹಲವಾರು ನಾಯಕರು ಬಿಜೆಪಿ ಕಡೆಗೆ ಮುಖ ಮಾಡುತ್ತಿದ್ದರೆ, ಗುರುವಾರ ಮೂವರು ಸೆಲೆಬ್ರೆಟಿಗಳು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೋಲ್ಕತ್ತಾದ ತೃಣಮೂಲ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಉತ್ತರದ 24 ಪರಗಣ ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷ ದೇಬ್ರಾಜ್ ಚಕ್ರಬರ್ತಿ ಪತ್ನಿ ಹಾಗೂ ಖ್ಯಾತ ಗಾಯಕಿ ಅದಿತಿ ಮುಂಶಿ ಅವರು ಹಿರಿಯ ಮುಖಂಡ ಸೌಗತ ರಾಯ್ ಉಪಸ್ಥಿತಿಯಲ್ಲಿ ಟಿಎಂಸಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
"ಬಂಗಾಳದ ಹುಲಿ"ಗೆ ನಮ್ಮ ಬಲ, ಬೆಂಬಲ ಎಂದು ಘೋಷಿಸಿದ ಶಿವಸೇನೆ
ಗುರುವಾರ ಟಿಎಂಸಿ ಪಕ್ಷದ ಅದೇ ಕೇಂದ್ರ ಕಚೇರಿಯಲ್ಲಿ ನಟ ಹಾಗೂ ಚಿತ್ರನಿರ್ದೇಶಕ ಧೀರಜ್ ಪಂಡಿತ್, ಹಾಗೂ ನಟ ಸುಭದ್ರ ಮುಖರ್ಜಿ ಅವರು ಪಕ್ಷಕ್ಕೆ ಸೇರಿದರು. ಇತ್ತೀಚಿಗೆ ಬಿಜೆಪಿ ನಾಯಕಿ ಉಷಾ ಚೌಧರಿ ಕೂಡ ತೃಣಮೂಲ ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದರು.
ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ನಾಯಕನಿಂಗ ಬಸ್ಕಿ:
ಮಾರ್ಚ್.03ರಂದು ಪಶ್ಚಿಮ ಮೇದಿನಿಪುರ್ ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸುಶಾಂತ್ ಪಾಲ್ ಅವರು ಬಹಿರಂಗ ವೇದಿಕೆಯಲ್ಲೇ ತಮ್ಮ ಕಿವಿ ಹಿಡಿದುಕೊಂಡು ಮೂರು ಬಾರಿ ಬಸ್ಕಿ ಹೊಡೆದಿದ್ದಾರೆ. ಇಷ್ಟುದಿನ ನಾನು ಟಿಎಂಸಿಯಲ್ಲಿ ಉಳಿದುಕೊಂಡಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. "ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮಾಡಿದ ಎಲ್ಲ ಪಾಪಕಾರ್ಯಗಳಿಗೆ ನಾನು ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಸಾರ್ವಜನಿಕರಲ್ಲಿ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇವೆ. ಬಸ್ಕಿ ಹೊಡೆಯುವುದು ನನಗೆ ನಾನು ನೀಡಿಕೊಂಡ ಸಣ್ಣ ಶಿಕ್ಷೆ" ಎಂದು ಸುಶಾಂತ್ ಪಾಲ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ:
ಪಶ್ಚಿಮ ಬಂಗಾಳ ವಿಧಾನಸಭೆಯ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಘೋಷಿಸಿದೆ. ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿತ್ತು. ಈ ಪೈಕಿ ಪಶ್ಚಿಮ ಬಂಗಾಳದಲ್ಲಿ ಮಾರ್ಚ್.27ರಿಂದ ಆರಂಭವಾಗಲಿರುವ ಚುನಾವಣೆಯು ಏಪ್ರಿಲ್.29ರಂದು ಮುಕ್ತಾಯಗೊಳ್ಳಲಿದ್ದು, ಮೇ.02ರಂದು ಫಲಿತಾಂಶ ಹೊರ ಬೀಳಲಿದೆ.