ಮಮತಾ ಕರೆದಿದ್ದ ಮಾತುಕತೆಯನ್ನು ತಿರಸ್ಕರಿಸಿದ ಮುಷ್ಕರ ನಿರತ ವೈದ್ಯರು
ಕೋಲ್ಕತಾ, ಜೂನ್ 15 : ಮುಚ್ಚಿದ ಕೋಣೆಯಲ್ಲಿ ಮಾತುಕತೆಗೆ ಬರಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಹ್ವಾನವನ್ನು ಪ್ರತಿಭಟನೆಯಲ್ಲಿ ನಿರತರಾಗಿರುವ ವೈದ್ಯರು 'ಭದ್ರತೆ'ಯ ಕಾರಣ ನೀಡಿ ಸಾರಾಸಗಟಾಗಿ ಶನಿವಾರ ತಳ್ಳಿಹಾಕಿದ್ದಾರೆ.
ವೈದ್ಯರ ಮೇಲೆ ಆಗಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಕೋಲ್ಕತಾದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಪ್ರತಿಭಟನೆ ನಿಲ್ಲಿಸುವಂತೆ 'ಬೆದರಿಕೆ' ಒಡ್ಡಿದ್ದ ಮಮತಾ ಬ್ಯಾನರ್ಜಿ ಮುಕ್ತವಾಗಿ ಕ್ಷಮೆ ಯಾಚಿಸಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ.
'ಕ್ಷಮೆ ಕೇಳಿ' ಎಂದ ವೈದ್ಯರು ದೀದಿಗೆ ಹಾಕಿದ 6 ಷರತ್ತುಗಳೇನು?
ತಮ್ಮ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವೈದ್ಯರು, ವೈದ್ಯರ ನಿಯೋಗ ಮಾತುಕತೆಗೆ ಹೋಗುವುದಿಲ್ಲ ಎಂದು ಹೇಳಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಸ್ವತಃ ಎನ್ಆರ್ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಮಾತುಕತೆಗಾಗಿ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿಯೊಂದಿಗಿನ ಮುಚ್ಚಿದ ಕೋಣೆಯಲ್ಲಿ ಕರೆದಿರುವ ಸಭೆಗೆ ವೈದ್ಯರ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ನಮಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಮುಖ್ಯಮಂತ್ರಿಯ ಕಚೇರಿಗೆ ಹೋಗುವುದಿಲ್ಲ ಎಂದು ಸಭೆ ನಡೆಸಿದ ಬಳಿಕ ಮುಷ್ಕರ ನಿರತ ಜ್ಯೂನಿಯರ್ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ರಾತ್ರಿ ಓರ್ವ ರೋಗಿ ಮೃತರಾದ ನಂತರ ರೋಗಿಯ ಸಂಬಂಧಿಕರು ಜ್ಯೂನಿಯರ್ ವೈದ್ಯರ ಮೇಲೆ ಮತ್ತು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ವೈದ್ಯರು ತಮಗೆ ಭದ್ರತೆ ನೀಡುವವರೆಗೆ ಮುಷ್ಕರ ಹೂಡುವುದಾಗಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?
ಇದು ನಡೆದಿದ್ದು ನಿಲ್ ರತನ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ. ಅಲ್ಲಿಯೂ ಮಮತಾ ಬ್ಯಾನರ್ಜಿ ಅವರು ಬಂದು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಹಲ್ಲೆಗೊಳಗಾದ ವೈದ್ಯರನ್ನು ಭೇಟಿ ಮಾಡಬೇಕು, ಮಾತುಕತೆ ನಡೆಸಬೇಕು, ರಕ್ಷಣೆ ನೀಡದ ಪೊಲೀಸರ ವಿರುದ್ಧ ತನಿಖೆ ನಡೆಸಬೇಕು, ಹಲ್ಲೆ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು, ವೈದ್ಯರ ವಿರುದ್ಧ ಹೂಡಲಾಗಿರುವ ಎಲ್ಲ ಸುಳ್ಳು ಆರೋಪಗಳನ್ನು ವಾಪಸ್ ಪಡೆಯಬೇಕು, ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕು ಮತ್ತು ಆಸ್ಪತ್ರೆಗಳಿಗೆ ಬಿಗಿ ಭದ್ರತೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.