ಆ ದಿನ ಮಳೆ ಬರದಿದ್ದರೆ...ಲಕ್ಷ ಗೆಲ್ಲಲು ಆಗ್ತಿರ್ಲಿಲ್ಲ: ಲಾಟರಿ ಗೆದ್ದ ರಿಕ್ಷಾ ಚಾಲಕ
ಕೋಲ್ಕತಾ, ಅಕ್ಟೋಬರ್ 03: ಪಶ್ಚಿಮ ಬಂಗಾಳ ಮೂಲದ ಗೌರ್ ದಾಸ್ ಎಂಬ ರಿಕ್ಷಾಚಾಲಕನಿಗೆ ನಾಗಾಲ್ಯಾಂಡ್ ರಾಜ್ಯ ಲಾಟರಿಯಲ್ಲಿ 50 ಲಕ್ಷ ರೂ. ಬಂಪರ್ ಬಹುಮಾನ ಲಭಿಸಿರುವ ಸುದ್ದಿ ಓದಿರಬಹುದು. ಲಾಟರಿ ಗೆದ್ದ ಖುಷಿಯಲ್ಲಿ ರಿಕ್ಷಾ ಚಾಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ.
ನಾಗಾಲ್ಯಾಂಡ್ ರಾಜ್ಯ ಲಾಟರಿ ಖರೀದಿಸಿದ್ದ ಗೌರ್ ದಾಸ್ ಗೆ ಜಾಕ್ ಪಾಟ್ ಹೊಡೆಯಬಹುದು ಎಂಬ ಯಾವುದೇ ನಿರೀಕ್ಷೆ ಇರಲಿಲ್ಲವಂತೆ, ಸೆಪ್ಟೆಂಬರ್ 29ರಂದು ಒಂದು ವೇಳೆ ಮಳೆ ಬರದಿದ್ದರೆ ನನಗೆ ಲಕ್ಷ ರು ಸಿಗುತ್ತಿರಲಿಲ್ಲ ಎಂದಿದ್ದಾರೆ.
ಅಂದು ಮಳೆ ಬಂದಿದ್ದರಿಂದ, ಗೌರ್ ಹಾಗೂ ಸಂಗಡಿಗರು ಮೊದಲೇ ನಿಗದಿಪಡಿಸಿಕೊಂಡಿದ್ದ ಪಿಕ್ನಿಕ್ ರದ್ದು ಮಾಡಿದ್ದಾರೆ. ಮನೆಗೆ ಹೋಗುವಾಗ ನಾಗಾಲ್ಯಾಂಡ್ ಲಾಟರಿ ನೋಡಿ, ಖರೀದಿ ಮಾಡಿದ್ದಾರೆ. ಅದು ಕೂಡಾ ಲಾಟರಿ ಅಂಗಡಿಯವನ ಒತ್ತಾಯಕ್ಕೆ ಮಣಿದು ಒಂದು ಟಿಕೆಟ್ ಪಡೆದು ಅದೃಷ್ಟವನ್ನು ಪರೀಕ್ಷೆಗೊಡ್ಡಿದ್ದಾರೆ.
ಅಂದು ಗೌರ್ ಜೇಬಲ್ಲಿ 70 ರೂ. ಮಾತ್ರ ಇತ್ತು. ಹೀಗಾಗಿ, ಲಾಟರಿ ಮೇಲೆ ಏಕೆ ದುಡ್ಡು ಹಾಕುವುದು ಎಂದು ಹಿಂದೇಟು ಹಾಕಿದ್ದರಂತೆ, ಕೊನೆಗೆ 30 ರೂ ಲಾಟರಿ ಪಡೆದುಕೊಂಡಿದ್ದಾರೆ. ಕಳೆದ ಭಾನುವಾರದಂದು ಲಾಟರಿ ಅಂಗಡಿಗ ತೆರಳಿ ಫಲಿತಾಂಶ ನೋಡಿದ್ದಾರೆ. ಜಾಕ್ಪಾಟ್ ಹೊಡೆದಿರುವುದು ಗೊತ್ತಾಗಿ ಮಾತೇ ಹೊರಡದಂತಾಗಿದೆ.
ತಕ್ಷಣವೆ ಒಂದೇ ಉಸಿರಿನರಲ್ಲಿ ರಿಕ್ಷಾ ತುಳಿಯುತ್ತಾ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಬಳಿಕ ಲಾಟರಿ ಟಿಕೆಟ್ ನಿಂದ ಬಂದ ಭರ್ಜರಿ ಅದೃಷ್ಟವನ್ನು ಬ್ಯಾಂಕ್ನ ಖಾತೆಗೆ ತುಂಬಿಸಿದ್ದಾರೆ. ವಿಧವೆ ತಾಯಿ, ಹೆಂಡತಿ, ಇಬ್ಬರು ಪುತ್ರಿ ಹಾಗೂ ಪುತ್ರರೊಂದಿಗೆ ವಾಸವಾಗಿರುವ ದಾಸ್, ಲಾಟರಿ ಗೆದ್ದ ಸುದ್ದಿಯನ್ನು ಪಕ್ಕದ ಮನೆಯವರಿಗೂ ತಿಳಿಸಿಲ್ಲ.
ಹಿರಿಯ ಮಗ 3ನೇ ತರಗತಿ ಓದುತ್ತಿದ್ದು, ಇಬ್ಬರು ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಗೆ ಸೇರಿಸಲಾಗಿದೆ. ಲಾಟರಿಯಿಂದ ಬಂದಿರುವ ಹಣದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಮನೆ ಕಟ್ಟಿಸಿಕೊಳ್ಳುವುದಾಗಿ ಹೇಳಿದ್ದಾರೆ. ಗೌರ್ ದಾಸ್ ಲಾಟರಿ ಗೆದ್ದ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ಬಂಧು ಮಿತ್ರರು, ಸ್ನೇಹಿತರು ಆಗಮಿಸುತ್ತಿದ್ದು, ಬಿಟ್ಟಿ ಸಲಹೆಗಳನ್ನು ನೀಡುತ್ತಿದ್ದಾರೆ ಎಂಬ ಸುದ್ದಿಯಿದೆ.