ರೈಲ್ವೆ ಕಟ್ಟಡದಲ್ಲಿ ಭಾರಿ ಅಗ್ನಿ ಅನಾಹುತ: ರಕ್ಷಣೆಗಾಗಿ ತೆರಳಿದ್ದ 7 ಸಿಬ್ಬಂದಿ ಸಾವು
ಕೋಲ್ಕತಾ, ಮಾರ್ಚ್ 9: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಸೋಮವಾರ ಸಂಜೆ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ. ಸ್ಟ್ರಾಂಡ್ ರೋಡ್ನ ಪೂರ್ವ ರೈಲ್ವೆ ಕೇಂದ್ರ ಕಚೇರಿಯಲ್ಲಿ ಈ ಅಗ್ನಿ ಅವಘಡ ಉಂಟಾಗಿದೆ. ಮೃತಪಟ್ಟವರಲ್ಲಿ ಅಗ್ನಿಶಾಮಕ ದಳ, ರೈಲ್ವೆ ಹಾಗೂ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.
ಸೋಮವಾರ ಸಂಜೆ 6.10ರ ಸುಮಾರಿಗೆ 14 ಮಹಡಿಗಳ ನ್ಯೂ ಕೌಲಿಘಟ್ ಕಟ್ಟಡದ 13ನೇ ಮಹಡಿಯಲ್ಲಿ ಭಾರಿ ಪ್ರಮಾಣದ ಅಗ್ನಿ ಜ್ವಾಲೆ ಆವರಿಸಿತ್ತು. ಈ ಅನಾಹುತದಲ್ಲಿ ಜೀವ ಕಳೆದುಕೊಂಡ ಎಲ್ಲ ಏಳು ಮಂದಿಯೂ ಕಟ್ಟಡದಲ್ಲಿ ರಕ್ಷಣೆ ಹಾಗೂ ಪತ್ತೆ ಕಾರ್ಯಾಚರಣೆಗಾಗಿ ಎಲಿವೇಟರ್ನಲ್ಲಿ ಮಹಡಿಗೆ ತೆರಳಿದವರಾಗಿದ್ದಾರೆ ಎಂದು ಸಚಿವ ಸುಜಿತ್ ಬೋಸ್ ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ನಾಲ್ವರು ಸಿಬ್ಬಂದಿ, ಒಬ್ಬ ಪೊಲೀಸ್ ಅಧಿಕಾರಿ, ಒಬ್ಬ ರೈಲ್ವೆ ಅಧಿಕಾರಿ ಹಾಗೂ ಒಬ್ಬ ಭದ್ರತಾ ಅಧಿಕಾರಿ ಬೆಂಕಿಯ ಜ್ವಾಲೆಗೆ ಸುಟ್ಟುಹೋಗಿದ್ದಾರೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಏಳು ಮಂದಿಯ ಪೈಕಿ ಐದು ಮಂದಿಯ ಶವ 12ನೇ ಮಹಡಿಯ ಎಲಿವೇಟರ್ನಲ್ಲಿ ಪತ್ತೆಯಾಗಿದೆ. ಲಿಫ್ಟ್ ಒಳಗೆ ಇದ್ದವರು ಉಸಿರುಗಟ್ಟಿ ಹಾಗೂ ಬೆಂಕಿಯಿಂದಾಗಿ ಸುಟ್ಟು ಜೀವ ಕಳೆದುಕೊಂಡಿದ್ದಾರೆ. 13ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಕನಿಷ್ಠ 25 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಕಟ್ಟಡ ಎತ್ತರವಿದ್ದ ಕಾರಣ ಬೆಂಕಿ ನಂದಿಸುವ ಕಾರ್ಯಕ್ಕೆ ತೀವ್ರ ಹಿನ್ನಡೆಯಾಯಿತು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. 'ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನು ಇಬ್ಬರು ಕಾಣೆಯಾಗಿರಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಬೆಂಕಿ ಆವರಿಸಿದ್ದ ವೇಳೆ ಎಲಿವೇಟರ್ ಬಳಸಿದ್ದರಿಂದ ಈ ದುರಂತ ಸಂಭವಿಸಿದೆ. ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ನೀಡಲಾಗುವುದು' ಎಂದು ಮಮತಾ ಹೇಳಿದ್ದಾರೆ..
ಇದು ಹಳೆಯ ಕಟ್ಟಡವಾಗಿದ್ದು, ಪೂರ್ವ ರೈಲ್ವೆಯ ಟಿಕೆಟ್ ಬುಕಿಂಗ್ ಕಚೇರಿಗಳನ್ನು ಒಳಗೊಂಡಿತ್ತು. ಈ ಘಟನೆಯಿಂದಾಗಿ ಆನ್ಲೈನ್ ಟಿಕೆಟ್ ಬುಕಿಂಗ್ಗಳು ಸ್ಥಗಿತಗೊಂಡಿವೆ. ಬೆಂಕಿ ಅನಾಹುತದ ಘಟನೆಗಳಲ್ಲಿ ಲಿಫ್ಟ್ ಅಥವಾ ಎಲಿವೇಟರ್ಗಳನ್ನು ಬಳಸಬಾರದು. ಆದರೆ 13ನೇ ಮಹಡಿಯವರೆಗೆ ಮೆಟ್ಟಿಲಲ್ಲಿ ತೆರಳುವುದು ವಿಳಂಬವಾಗಿ ಅಲ್ಲಿರುವ ಜನರು ಬಲಿಯಾಗಬಹುದು ಮತ್ತು ರಕ್ಷಣಾ ಕಾರ್ಯಕ್ಕೆ ತೊಡಕಾಗಬಹುದು ಎಂದು ಈ ಅಧಿಕಾರಿಗಳು ಎಲಿವೇಟರ್ನಲ್ಲಿ ಹೋಗಿದ್ದಾರೆ. ಅದೇ ಅವರ ಜೀವಕ್ಕೆ ಮಾರಕವಾಗಿದೆ ಎಂದು ಸ್ಥಳೀಯ ಕಾರ್ಪೊರೇಟರ್ ತಿಳಿಸಿದ್ದಾರೆ.