ಮಮತಾ ರಾಜ್ಯದಲ್ಲಿ 69 ವೈದ್ಯರ ರಾಜೀನಾಮೆ; ಸಿಎಂ ಬೇಷರತ್ ಕ್ಷಮೆಗೆ ಆಗ್ರಹ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಜೂನ್ 14: ಕೋಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಅರವತ್ತೊಂಬತ್ತರಷ್ಟು ವೈದ್ಯರು ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂಬುದು ಈ ವೈದ್ಯರ ಆಗ್ರಹವಾಗಿದೆ.
"ಒಂದು ವೇಳೆ ಕೆಲಸಕ್ಕೆ ಮರಳದಿದ್ದಲ್ಲಿ ಹುಷಾರ್, ಕಠಿಣ ಕ್ರಮ ಎದುರಿಸಬೇಕಾಗುತ್ತದೆ" ಎಂದು ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದರು. ಈ ಧೋರಣೆ ವಿರುದ್ಧ ವೈದ್ಯರು ಸಿಟ್ಟಿಗೆದ್ದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ ವೈದ್ಯರನ್ನೂ ಕ್ಷಮಿಸಿದ್ದೇನೆ: ದೀದಿ
ಪಶ್ಚಿಮ ಬಂಗಾಲದ ವಿವಿಧೆಡೆ ವೈದ್ಯಕೀಯ ಸೇವೆಗೆ ಅಡೆತಡೆ ಉಂಟಾದ ಹಿನ್ನೆಲೆಯಲ್ಲಿ ಜೂನ್ ಹದಿಮೂರನೇ ತಾರೀಕು ಬುಧವಾರದಂದು ಮಮತಾ ಅವರು ಸರಕಾರ ನಡೆಸುವ ಎಸ್ ಎಸ್ ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ರಾಜ್ಯದಾದ್ಯಂತ ಪ್ರತಿಭಟನೆಯಲ್ಲಿ ನಿರತರಾಗಿದ್ದ ಕಿರಿಯ ವೈದ್ಯರಿಗೆ, ಇನ್ನು ನಾಲ್ಕು ಗಂಟೆಯೊಳಗೆ ಕೆಲಸ ಆರಂಭಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಮುಖ್ಯಮಂತ್ರಿಯ ಆದೇಶವನ್ನು ಪಾಲಿಸದೆ ಕಿರಿಯ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೆಲಸಕ್ಕೆ ಹಿಂತಿರುಗಿ. ನಿಮ್ಮ ಭದ್ರತೆಗೆ ನಾನು ಜವಾಬ್ದಾರಿ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಒತ್ತಾಯಿಸಿದ್ದಾರೆ. ಒಂದೆರಡು ಆಸ್ಪತ್ರೆಯಲ್ಲಿ ತುರ್ತು ಸೇವೆ ಲಭ್ಯವಿದೆ. ಈ ಮಧ್ಯೆ ಶುಕ್ರವಾರದಂದು ಸರಿಯಾದ ಸಮಯಕ್ಕೆ ವೈದ್ಯಕೀಯ ಸೇವೆ ಸಿಗದೆ ಮೂರು ದಿನದ ಮಗು ಸಾವನ್ನಪ್ಪಿದೆ.
ಬಂಗಾಳಕ್ಕೆ ಬೆಂಬಲವಾಗಿ ಕರ್ನಾಟಕದಲ್ಲೂ ವೈದ್ಯರ ಮುಷ್ಕರ?
ತಮ್ಮ ಸಹೋದ್ಯೋಗಿಗಳ ಮೇಲೆ ಸರಕಾರಿ ಆಸ್ಪತ್ರೆಯಲ್ಲಿ ತೀವ್ರವಾದ ಹಲ್ಲೆ ಆದ ಮೇಲೆ ಭದ್ರತೆಗೆ ಒತ್ತಾಯಿಸಿ, ಜೂನ್ ಹನ್ನೊಂದರಿಂದ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯರು ಪಟ್ಟು ಹಿಡಿದಿದ್ದಾರೆ.