ಪ.ಬಂಗಾಳ: ಬಿಜೆಪಿ ನಾಯಕನಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧ
ಕೋಲ್ಕತ್ತಾ, ಏಪ್ರಿಲ್ 13: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ರಾಹುಲ್ ಸಿನ್ಹಾಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.
ಕೂಚ್ಬಿಹಾರ್ ಜಿಲ್ಲೆಯ ಸೀತಾಲ್ಕುಚಿಯಲ್ಲಿ ನಡೆದ ಗಲಭೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ. ಬಂಗಾಳ ವಿಧಾನಸಭೆಗೆ ನಡೆದ ನಾಲಕನೇ ಹಂತದ ಮತದಾನ ಸಂದರ್ಭದಲ್ಲಿ ಸೀತಾಲ್ಕುಚಿಯಲ್ಲಿ ಗಲಭೆ ಸಂಭವಿಸಿತ್ತು. ಐದು ಮಂದಿ ಮೃತಪಟ್ಟಿದ್ದರು.
ಮಮತಾ ಬ್ಯಾನರ್ಜಿಗೆ 24 ಗಂಟೆ ಚುನಾವಣಾ ಪ್ರಚಾರಕ್ಕೆ ನಿಷೇಧ
ಈ ಕುರಿತು ಹಬ್ರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಿನ್ಹಾ, ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸೀತಾಲ್ಕುಚಿ ಗಲಭೆ ವಿಚಾರ ಪ್ರಸ್ತಾಪಿಸಿದ್ದರು. ಈ ವೇಳೆ ಅವರು ನಾಲ್ಕು ಮಂದಿಯಲ್ಲ, ಕೇಂದ್ರ ಪಡೆಗಳು ಕೂಚ್ ಬಿಹಾರದ ಸೀತಾಲ್ಕುಚಿಯಲ್ಲಿ ಎಂಟು ಜನರಿಗೆ ಗುಂಡು ಹಾರಿಸಬೇಕಿತ್ತು ಎಂದು ಹೇಳಿದ್ದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಇದೇ ರೀತಿ 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಭದ್ರತಾ ಪಡೆಗಳ ವಿರುದ್ಧ ಮಮತಾ ಅವರು ನೀಡಿರುವ ಹೇಳಿಕೆಗಳು ರಾಜ್ಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ.
ಹೀಗಾಗಿ ಅವರ ಪ್ರಚಾರದ ಮೇಲೆ ಏಪ್ರಿಲ್ 12ರ ರಾತ್ರಿ 8 ಗಂಟೆಯಿಂದ ಏಪ್ರಿಲ್ 13ರ ರಾತ್ರಿ 8 ಗಂಟೆವರೆಗೆ ನಿಷೇಧ ವಿಧಿಸಲಾಗಿದೆ. ಸಿನ್ಹಾ ಮಾತ್ರವಲ್ಲ ಬಿಜೆಪಿ ನಾಯಕರಾದ ದಿಲೀಪ್ ಘೋಷ್, ಸಯಂತನ್ ಬಸು ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಟಿಎಂಸಿ ನಾಯಕರು ಒತ್ತಾಯಿಸಿದ್ದಾರೆ.