ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರದ 43 ಸಚಿವರ ಪ್ರಮಾಣವಚನ
ಕೋಲ್ಕತ್ತಾ, ಮೇ 10: ಪಶ್ಚಿಮ ಬಂಗಾಳದಲ್ಲಿ ಮೂರನೇ ಅವಧಿಗೆ ಸರ್ಕಾರ ರಚಿಸುತ್ತಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದ 43 ಮಂದಿ ಸಚಿವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೋಲ್ಕತ್ತಾದಲ್ಲಿ ಇರುವ ರಾಜಭವನದಲ್ಲಿ ಬೆಳಗ್ಗೆ 10.45ರ ವೇಳೆಗೆ ರಾಜ್ಯಪಾಲರಾದ ಜಗದೀಪ್ ಧಂಕರ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಕಳೆದ ಮೇ 5ರಂದಷ್ಟೇ ರಾಜ್ಯದ ಮುಖ್ಯಮಂತ್ರಿ ಆಗಿ ಮಮತಾ ಬ್ಯಾನರ್ಜಿ ಪದಗ್ರಹಣ ಮಾಡಿದ್ದರು.
3ನೇ ಬಾರಿ ಸಿಎಂ ಆಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ ವಚನ
ರಾಜ್ಯದ 43 ನೂತನ ಸಚಿವರ ಪೈಕಿ 25 ಮಂದಿ ಚಿರಪರಿಚಿತರಿಗೆ ಸಚಿವ ಸ್ಥಾನ ನೀಡಿದ್ದರೆ,18 ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಟಿಎಂಸಿ ಹಿರಿಯ ಶಾಸಕ ಸುಬ್ರತ್ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಯಾದ್ ಹಕೀಂ, ಅರೂಪ್ ಬಿಸ್ವಾಸ್, ಸುಜಿತ್ ಬೋಸ್, ಚಂದ್ರಿಮಾ ಭಟ್ಟಾಚಾರ್ಯ ಮತ್ತು ಶಶಿ ಪಂಜಾ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನದ ಅವಕಾಶ ನೀಡಲಾಗಿದೆ.
ದೀದಿ ಸಂಪುಟದಲ್ಲಿ ಯಾರಿಗೆಲ್ಲ ಅವಕಾಶ?:
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ರಾಜ್ಯಸಭಾ ಸದಸ್ಯ ಮನಸ್ ಭುವಾನ್ ಅವರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಸುವೇಂದು ಅಧಿಕಾರಿ ಜಿಲ್ಲೆಯಲ್ಲಿ ಗೆಲುವು ದಾಖಲಿಸಿದ ಅಖಿಲ್ ಗಿರಿ ಹಾಗೂ ಮತ್ತೊಬ್ಬ ಬಂಡಾಯ ನಾಯಕ ರಜಿಬ್ ಬ್ಯಾನರ್ಜಿ ಅವರ ಹೌರಾ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿದ ಶಾಸಕ ಅರುಪ್ ರಾಯ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇವರ ಜೊತೆ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸ್ಟಾರ್ ನಟ ಬಿರ್ಬಹಾ ಹಂಸ್ದಾ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.
ಬಂಗಾಳದಲ್ಲಿ ದೀದಿಗೆ ಫುಲ್ ಮಾರ್ಕ್ಸ್:
ಪಶ್ಚಿಮ ಬಂಗಾಳದಲ್ಲಿ ನಡೆದ 294 ವಿಧಾನಸಭೆ ಕ್ಷೇತ್ರಗಳ ಪೈಕಿ 213 ಸ್ಥಾನಗಳಲ್ಲಿ ಟಿಎಂಸಿ ಜಯಭೇರಿ ಬಾರಿಸಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸಮರ ಸಾರಿದ್ದ ಬಿಜೆಪಿ ಮೊದಲ ಬಾರಿಗೆ 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೂರನೇ ಬಾರಿ ದಿಗ್ವಿಜಯ ಸಾಧಿಸಿರುವ ದೀದಿ ರಾಜ್ಯದ ಮುಖ್ಯಮಂತ್ರಿ ಆಗಿ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದು, ಸೋಮವಾರದ ಸರ್ಕಾರದ 43 ಸಚಿವರು ಪದಗ್ರಹಣ ಮಾಡಲಿದ್ದಾರೆ.