ಚುನಾವಣೆಯ ಹಿಂದಿನ ದಿನ ಟಿಎಂಸಿ ಕಚೇರಿಯಲ್ಲಿ ಸ್ಫೋಟ: ಮೂವರಿಗೆ ಗಾಯ
ಕೋಲ್ಕತಾ, ಮಾರ್ಚ್ 26: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಜಾಯ್ಪುರದಲ್ಲಿನ ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ. ಬಂಗಾಳದಲ್ಲಿ ಮೊದಲ ಹಂತದ ಮತದಾನ ಶನಿವಾರ ನಡೆಯಲಿದ್ದು, ಅದರ ಮುನ್ನಾದಿನ ಈ ಘಟನೆ ನಡೆದಿದೆ. ಜಾಯ್ಪುರದಲ್ಲಿಯೂ ಶನಿವಾರ ಮೊದಲ ಹಂತದ ಮತದಾನ ನಡೆಯಲಿದೆ.
ಈ ಸ್ಫೋಟಕ್ಕೆ ಕಾಂಗ್ರೆಸ್-ಎಡಪಕ್ಷ ಮೈತ್ರಿಕೂಟ ಕಾರಣ ಎಂದು ಟಿಎಂಸಿ ಆರೋಪಿಸಿದೆ. ಇನ್ನೊಂದೆಡೆ ಟಿಎಂಸಿ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಪಕ್ಷದ ಕಚೇರಿಯ ಒಳಗೆ ಟಿಎಂಸಿ ಕಾರ್ಯಕರ್ತರು ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿದೆ ಎಂದು ಆರೋಪಿಸಿದೆ. ಸ್ಫೋಟದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸ್ಫೋಟದಲ್ಲಿ ಗಾಯಗೊಂಡ ಮೂವರನ್ನು ಹೂಗ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳ ಚುನಾವಣೆ ಕಣದಲ್ಲಿ ಪ್ರಧಾನಿ ಮೋದಿ ಗಡ್ಡದ ವಿಷ್ಯ!
ಸ್ಫೋಟದ ನಂತರ ಟಿಎಂಸಿ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಕಾರ್ಯಕರ್ತರ ನಡುವೆ ಹಿಂಸಾಚಾರ ಮತ್ತು ಘರ್ಷಣೆ ನಡೆದಿದೆ. ಈ ಹಿಂಸಾಚಾರದಲ್ಲಿ ಐಎಸ್ಎಫ್ನ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಬಿಷ್ಣುಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಪಡೆಗಳೂ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದುಕೊಂಡಿವೆ.