ಟಿಎಂಸಿ ಶಾಸಕನ ಹತ್ಯೆ; ಇಬ್ಬರ ಬಂಧನ, ಪೊಲೀಸ್ ಅಧಿಕಾರಿ ಅಮಾನತು
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಫೆಬ್ರವರಿ 10: ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಶನಿವಾರದಂದು ಬಿಸ್ವಾಸ್ ಹತ್ಯೆಯಾಗಿತ್ತು. ಮಝ್ ದಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.
ಸರಸ್ವತಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಳಿಕ, ನಾದಿಯಾ ಜಿಲ್ಲೆಯ ಶಾಸಕರಾದ ಸತ್ಯಜಿತ್ ಬಿಸ್ವಾಸ್ ರನ್ನು ಹತ್ಯೆ ಮಾಡಲಾಗಿತ್ತು. ಅಮ್ರ ಶೋಬೈ ಎಂಬ ಕ್ಲಬ್ ಸರಸ್ವತಿ ಪೂಜೆ ಆಯೋಜಿಸಿತ್ತು. ಶನಿವಾರದಂದೆ ಮಝ್ ದಿಯಾದ ನಿವಾಸಿಗಳಾದ ಕಾರ್ತಿಕ್ ಮೊಂದಲ್ ಹಾಗೂ ಸುಜಿತ್ ಮೊಂದಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಅಧಿಕೃತವಾಗಿಯೇ ಬಂಧಿಸಿದ್ದಾರೆ.
ಟಿಎಂಸಿ ಎಂಎಲ್ಎ ಸತ್ಯಜಿತ್ ಬಿಸ್ವಾಸ್ ಗುಂಡಿಟ್ಟು ಬರ್ಬರ ಹತ್ಯೆ
ಹನ್ಸ್ ಖಲಿ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪ್ರತ್ಯಕ್ಷದರ್ಶಿ ಪ್ರಕಾರ, ಸಣ್ಣ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮುಂಭಾಗದ ಸಾಲಿನಲ್ಲಿ ಬಿಸ್ವಾಸ್ ಕೂತಿದ್ದರು. ಇಬ್ಬರಿಂದ ನಾಲ್ವರಿದ್ದ ಗುಂಪು ಅವರನ್ನು ಗುಂಡಿಟ್ಟು ಕೊಂದಿತು.
"ಪಟಾಕಿ ಸಿಡಿದಂಥ ಶಬ್ದ ಕೇಳಿತು. ಆ ನಂತರ ಬಿಶ್ವಾಸ್ ನೆಲದ ಮೇಲೆ ಬಿದ್ದಿದ್ದನ್ನು ನೋಡಿದೆ" ಎಂದು ಹೇಳಿದ್ದಾರೆ. "ನಾನು ಸತ್ಯಜಿತ್ ಬಿಸ್ವಾಸ್ ರಿಂದ ಕೇವಲ ಐದು ಅಡಿ ದೂರದಲ್ಲಿದ್ದೆ. ಅವರ ನೆರವಿಗೆ ಧಾವಿಸಿದೆ. ಅವರು ಸಂಪೂರ್ಣವಾಗಿ ರಕ್ತದಲ್ಲಿ ತೋಯ್ದಿದ್ದರು" ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ತುಂಬ ಹತ್ತಿರದಿಂದ ಬಿಸ್ವಾಸ್ ಮೇಲೆ ಹಲವು ಸುತ್ತು ಗುಂಡು ಹಾರಿಸಲಾಗಿದೆ. ಅಲ್ಲಿ ಸೇರಿದ್ದ ಜನರಲ್ಲಿ ಘಟನೆಯಿಂದ ಗಾಬರಿ ಉಂಟಾಗಿ, ಗೊಂದಲ ಏರ್ಪಟ್ಟಿತು. ಸನ್ನಿವೇಶದ ಅನುಕೂಲ ಪಡೆದ ಗುಂಡು ಹಾರಿಸಿದ ವ್ಯಕ್ತಿಯು ಸ್ಥಳದಿಂದ ಪರಾರಿಯಾಗಿದ್ದಾನೆ.
#Trinamool MLA Satyajit Biswas, 37, #shot dead moments after he lit a lamp at a Saraswati Puja event hosted by a club called 'Amra Shobai' which means 'all of us' at Majhdia in #Nadia district, 125 Km from Kolkata. #Bloody #Battle for #Bengal #Foretold ? pic.twitter.com/szKtF4B9i3
— Monideepa Banerjie (@Monideepa62) 9 February 2019
ತೃಣಮೂಲ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಈ ಕೊಲೆಯ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆರೋಪ ಮಾಡಿದ್ದಾರೆ. ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಬಿಜೆಪಿ ಮುಖಂಡ ಮುಕುಲ್ ರಾಯ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.