ಕೋಲ್ಕತ್ತಾ ಪಾಲಿಕೆ ಚುನಾವಣೆ: 23,000 ಪೊಲೀಸರ ನಿಯೋಜನೆ
ಕೋಲ್ಕತ್ತಾ, ಡಿಸೆಂಬರ್ 19: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ)ನ ಎಲ್ಲಾ 144 ವಾರ್ಡ್ಗಳಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬಿಗಿಯಾದ ಪೊಲೀಸ್ ಭದ್ರತಾ ವ್ಯವಸ್ಥೆಗಳ ನಡುವೆ ಕೋವಿಡ್-19 ಪ್ರೋಟೋಕಾಲ್ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಮತದಾನ ಪ್ರಾರಂಭವಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ನಿಲಂಜನ್ ಸ್ಯಾಂಡಿಲ್ಯ ತಿಳಿಸಿದ್ದಾರೆ.
4,959 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಜೊತೆಗೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಗರದಾದ್ಯಂತ ಸುಮಾರು 23,000 ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬಾರಿ ಚುನಾವಣೆಗೆ ಮಹಾನಗರದ ವಿವಿಧ ಭಾಗಗಳಲ್ಲಿ ಮಾರ್ಗ ಮೆರವಣಿಗೆಗಳು ಮತ್ತು ಬಿರುಸಿನ ಪ್ರಚಾರ ನಡೆಸಲಾಗಿದೆ. ಹೀಗಾಗಿ ಈ ಬಾರಿ ಪಾಲಿಕೆ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಪೊಲೀಸ್ ಪಿಕೆಟ್ಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ನಿಲಂಜನ್ ಸ್ಯಾಂಡಿಲ್ಯ ಅವರು ಹೇಳಿದ್ದಾರೆ.
ಕೋಲ್ಕತ್ತಾ ಪೊಲೀಸರು ನಗರ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ್ದಾರೆ, ಹೋಟೆಲ್ಗಳು ಮತ್ತು ವಿವಿಧ ಪ್ರವೇಶಗಳಲ್ಲಿ ಕಟ್ಟುನಿಟ್ಟಾದ ತಪಾಸಣೆಗಳನ್ನು ನಡೆಸಿದ್ದಾರೆ. ಪಡೆಯ ಅಧಿಕಾರಿಗಳು ಮಹಾನಗರದಲ್ಲಿರುವ ಹೋಟೆಲ್ಗಳು ಮತ್ತು ಅತಿಥಿ ಗೃಹಗಳಿಗೆ ಭೇಟಿ ನೀಡಿ ಚೆಕ್-ಇನ್ ಮಾಡಿದ ಅತಿಥಿಗಳ ಸಂಖ್ಯೆ ಮತ್ತು ಇನ್ನೆರಡು ದಿನಗಳಲ್ಲಿ ಆಗಮಿಸಲಿರುವವರ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಚುನಾವಣೆಗಳು ಸಂಪೂರ್ಣವಾಗಿ ಶಾಂತಿಯುತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಆ ಉದ್ದೇಶಕ್ಕಾಗಿ ನಾವು ಕೋಲ್ಕತ್ತಾ, ಸಾಲ್ಟ್ ಲೇಕ್, ಹೌರಾ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಪೊಲೀಸ್ ಕಾವಲು ಬಲಪಡಿಸಿದ್ದೇವೆ. ಎಸ್ಪ್ಲೇನೇಡ್, ನ್ಯೂ ಮಾರ್ಕೆಟ್, ಸೆಂಟ್ರಲ್ ಅವೆನ್ಯೂ, ಗರಿಯಾಹತ್, ಬ್ಯಾಲಿಗುಂ, ಟಾಲಿಗಂಜ್, ಗರಿಯಾ ಮತ್ತು ಸಾಲ್ಟ್ ಲೇಕ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್ ಪ್ರಾರಂಭವಾಗಿದೆ,'' ಎಂದು ಅವರು ಹೇಳಿದರು.
ಮತದಾನ ಪ್ರಾರಂಭವಾಗುವ ಗಂಟೆಗಳ ಮೊದಲು ನಗರದ ತಾರಾತಲಾ ಪ್ರದೇಶದಿಂದ ಒಂದು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಹೊಂದಿರುವ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಡವಾಗಿ ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಅವಧಿಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದು, ಬಿಜೆಪಿಯು ಸಿಪಿಐ(ಎಂ)ಯೊಂದಿಗೆ ಭರ್ಜರಿ ಪೈಪೋಟಿ ನಡೆಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಾನಗರದ ಎಲ್ಲಾ 16 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಜಯಭೇರಿ ಬಾರಿಸಿತ್ತು. ಡಿಸೆಂಬರ್ 21 ರಂದು ಮತ ಎಣಿಕೆ ನಡೆಯಲಿದೆ.
ಜೊತೆಗೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲನ್ನು 2024ರ ಲೋಕಸಭಾ ಚುನಾವಣೆಯಲ್ಲೂ ಕಾಣಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾದ ಮುನ್ಸಿಪಲ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅವರು, ಬಂಗಾಳವು ಕೋಮು ಸೌಹಾರ್ದ ರಾಜ್ಯವಾಗಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೋಮು ಸೌಹಾರ್ದತೆಯನ್ನು ಕೆಡಿಸಲು ನಡೆಸಿದಂತಹ ಪ್ರಚಾರವನ್ನು ಎಲ್ಲರೂ ನೋಡಿದ್ದೇವೆ ಎಂದು ವಾಗ್ದಾಳಿ ಮಾಡಿದ್ದಾರೆ. ಬಿಜೆಪಿಯವರು ಏನೇ ಮಾಡಿದರೂ ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಇಡೀ ದೇಶವೂ ಈ ರೀತಿಯಾಗೆ ಚಿಂತಿಸಿ ಬಿಜೆಪಿಯನ್ನು ಸೋಲಿಸುತ್ತದೆ ಎಂದರು.
ಜೊತೆಗೆ ರಾಜ್ಯದಲ್ಲಿ ಉದ್ಯಮವನ್ನು ಹೆಚ್ಚಿಸಿ ನಿರುದ್ಯೋಗಿಗಳಿಗೆ ಸಹಾಯ ಮಾಡುವುದು ತೃಣಮೂಲ ಕಾಂಗ್ರೆಸ್ಸಿನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕೆಲಸವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ತೃಣ ಮೂಲ ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುತ್ತಿದೆ. ತ್ರಿಪುರಾದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಲು ಇತ್ತೀಚೆಗೆ ಅಲ್ಲಿನ ಮುನ್ಸಿಪಲ್ ಚುನಾವಣೆಯಲ್ಲಿ ಟಿಎಂಸಿ ಬಿಜೆಪಿಯ ವಿರುದ್ಧ ಸ್ಪರ್ಧೆ ನಡೆಸಿತ್ತು. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಟಿಎಂಸಿ ಸಜ್ಜಾಗುತ್ತಿದೆ.