ಮಂಜಿನ ದಟ್ಟಣೆಯಿಂದ ಅಪಘಾತ; ಪಶ್ಚಿಮ ಬಂಗಾಳದಲ್ಲಿ 13 ಮಂದಿ ಸಾವು
ಕೋಲ್ಕತ್ತಾ, ಜನವರಿ 20: ಮಂಜಿನ ದಟ್ಟಣೆಯಿಂದ ದಾರಿ ಕಾಣದೇ ಅಪಘಾತ ಸಂಭವಿಸಿ 13 ಮಂದಿ ಮೃತಪಟ್ಟು 18 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಪುರುಷರು, ನಾಲ್ಕು ಮಕ್ಕಳು ಹಾಗೂ ಆರು ಮಹಿಳೆಯರು ಸೇರಿದಂತೆ ಹದಿಮೂರು ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಫುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಟ್ರಕ್, 15 ಮಂದಿ ಬಲಿ
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಜಲ್ದಾಕಾ ಸೇತುವೆ ಬಳಿ ರಾತ್ರಿ ಅಪಘಾತ ಸಂಭವಿಸಿದೆ. ವ್ಯಾನ್ ಹಾಗೂ ಕಾರು ಧೂಪ್ ಗುರಿ ಕಡೆ ಪ್ರಯಾಣಿಸುತ್ತಿದ್ದು, ಮಂಜು ಆವರಿಸಿದ್ದರಿಂದ ದಾರಿ ಕಾಣದೇ ವ್ಯಾನ್ ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆಯಲ್ಲಿ ಏಕಾಏಕಿ ಟ್ರಕ್ ಚಾಲನೆಯಾಗಿದೆ.
ಟ್ರಕ್ ನಲ್ಲಿದ್ದ ಕಲ್ಲುಗಳು ಬಿದ್ದು, ಅದೇ ದಾರಿಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹದಿಮೂರು ಮಂದಿ ಪ್ರಯಾಣಿಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಎಲ್ಲರೂ ಮದುವೆಗೆ ಹೊರಟಿದ್ದರು ಎನ್ನಲಾಗಿದೆ. ಗಾಯಗೊಂಡಿರುವ ಇತರೆ ಹದಿನೆಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.