ಕೊರೊನಾದಿಂದ ಮರಣ: ಅಂತ್ಯಕ್ರಿಯೆ ಮಾಡಲು ಮುಂದೆ ಬಾರದ ಕುಟುಂಬದವರು
ಕೊಲ್ಕತ್ತಾ, ಮಾರ್ಚ್ 24: ಕೊರೊನಾ ವೈರಸ್ ನಿಂದ ಪಶ್ಚಿಮ ಬಂಗಾಳದಲ್ಲಿ ನಿನ್ನೆ (ಮಾರ್ಚ್ 24) ಮೊದಲ ಸಾವು ಸಂಭವಿಸಿದೆ. ಅದರೊಂದಿಗೆ, ಮೃತನಾದ ವ್ಯಕ್ತಿಯ ಅಂತ್ಯಕ್ರಿಯೆ ನಡೆದ ರೀತಿ, ನಿಜಕ್ಕೂ ಬೇಸರ ಉಂಟು ಮಾಡುತ್ತದೆ.
57 ವರ್ಷ ವ್ಯಕ್ತಿ ಎಎಂಆರ್ಐ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದರಿಂದ ಮೃತಪಟ್ಟಿರುವ ದೃಢವಾಗಿತ್ತು. ಆದರೆ, ಆ ನಂತರ ಇವರ ಅಂತ್ಯಸಂಸ್ಕಾರ ಮಾಡುವುದು ಬಹಳ ಕಷ್ಟವಾಯಿತು. ಮರಣ ಹೊಂದಿದ ಸುದ್ದಿ ತಿಳಿದರೂ, ಕುಟುಂಬದವರು ಸಂಬಂಧಿಗಳು ವೈರಸ್ ಹರಡುವ ಭಯದಿಂದ ಆಸ್ಪತ್ರೆಗೆ ಬರಲೇ ಇಲ್ಲ.
FACT CHECK: ಕೊರೊನಾ ವೈರಸ್ ಗಾಳಿಯಲ್ಲಿ 8 ಗಂಟೆ ಬದುಕಬಹುದೇ?
ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯ ಪ್ರಕಾರ ಕೊರೊನಾ ವೈರಸ್ನಿಂದ ಮೃತಪಟ್ಟ ವ್ಯಕ್ತಿಯ ಮರಣ ಪ್ರಮಾಣ ಪತ್ರಕ್ಕೆ ಸಹಿ ಮಾಡಿಸಿಕೊಂಡು, ಕುಟುಂಬಕ್ಕೆ ದೇಹವನ್ನು ನೀಡಲಾಗುತ್ತದೆ. ಆದರೆ, ಇಲ್ಲಿ ಮೃತದೇಹವನ್ನು ಪಡೆಯಲು, ಅದರ ಅಂತ್ಯಕ್ರಿಯೆ ಮಾಡಲು ಕುಟುಂಬದವರು ಬರಲಿಲ್ಲ.
ಮೃತ ದೇಹದಿಂದ ದೂರ ಸರಿದ ಕುಟುಂಬದವರು
ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ನಿಂದ ಮೃತನಾದ ವ್ಯಕ್ತಿಯ ಮೃತ ದೇಹ ಪಡೆಯಲು ಕುಟುಂಬದವರು ಆಸ್ಪತ್ರೆಗೆ ಬರಲಿಲ್ಲ. ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಮೃತ ದೇಹವನ್ನು ರಾಜ್ಯ ಆಡಳಿತಕ್ಕೆ ಹಸ್ತಾಂತರಿಸಿದರು. ರಾಜ್ಯ ಆಡಳಿತವೇ ಅಂತ್ಯಕ್ರಿಯೆ ಮಾಡುವಾಗಲೂ ಸಂಬಂಧಿಗಳು ಹತ್ತಿರ ಬರಲಿಲ್ಲ. ಸ್ಥಳಿಯರು ಸಹ ಶವಸಂಸ್ಕಾರ ಮಾಡುವ ಸ್ಥಳಕ್ಕೆ ಬರಲಿಲ್ಲ.
ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ
ಪತ್ನಿಯನ್ನು ಪತ್ಯೇಕಿಸಲಾಗಿದೆ
ಪತಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದ್ದು, ಪತ್ನಿಗೆ ಸಹ ವೈರಸ್ ತಗುಲಿದ ಸಾಧ್ಯತೆ ಇದೆ. ಹೀಗಾಗಿ ಅವರ ಪತ್ನಿಯನ್ನು ಆಸ್ಪತ್ರೆಯಲ್ಲಿ ಪತ್ಯೇಕಿಸಿ ಇಡಲಾಗಿದೆ. ಕುಟುಂಬದವರು ಯಾರೂ ಸಹಿ ಮಾಡಲು ಬರದೆ ಇದ್ದಾಗ, ಕೊನೆಗೆ ಆಕೆಯ ಬಳಿಯೇ ಸಹಿ ಮಾಡಿಸಿಕೊಳ್ಳಲಾಗಿದೆ. ಇದೆಲ್ಲದರಿಂದ ಮೃತ ದೇಹದ ಅಂತ್ಯಕ್ರಿಯೆ 10 ಗಂಟೆ ತಡವಾಗಿದೆ.
ವಿದೇಶಕ್ಕೆ ಹೋಗಿರಲಿಲ್ಲ, ಆದರೂ ಕೊರೊನಾ
ಕೊರೊನಾದಿಂದ ಮರಣ ಹೊಂದಿದ 57 ವರ್ಷ ವ್ಯಕ್ತಿ ವಿದೇಶಕ್ಕೆ ಹೋಗಿರಲಿಲ್ಲ. ಆದರೂ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಕೆಲ ದಿನಗಳ ಹಿಂದೆ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ 20 ಪಾಸಿಟಿವ್ ವರದಿ ಬಂದಿದ್ದು, ಪಶ್ವಿಮ ಬಂಗಾಳದ ನಾಲ್ಕನೇ ಪಾಸಿಟಿವ್ ಕೇಸ್ ಇದಾಗಿತ್ತು. ಮೂರು ದಿನಗಳ ನಂತರ ವ್ಯಕ್ತಿ ಮೃತರಾದರು.
ವಿದ್ಯುತ್ ಚಿತಾಗರದಲ್ಲಿ ಅಂತ್ಯಕ್ರಿಯೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃತ ದೇಹದಿಂದ ವೈರಸ್ ಹರಡುವುದನ್ನು ತಡೆಗಟ್ಟದಂತೆ ಅಧಿಕಾರಿಗಳಿಗೆ ತಿಳಿಸಿದ್ದರು. ಹೀಗಿದ್ದರೂ ಮೃತ ದೇಹದ ಅಂತ್ಯಕ್ರಿಯೆ ತುಂಬ ತಡ ಆಗಿತ್ತು. ಕುಟುಂಬದವರು ವೈರಸ್ ಹರಡುವ ಭಯದಿಂದ ಶವಸಂಸ್ಕಾರ ಮಾಡಲಿಲ್ಲ. ಕೊನೆಗೆ ಅಧಿಕಾರಿಗಳೆ ವಿದ್ಯುತ್ ಚಿತಾಗರದಲ್ಲಿ ಅಂತ್ಯಕ್ರಿಯೆ ಮಾಡಿದರು.