ಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತ
ಕೋಲಾರ, ಫೆಬ್ರವರಿ 18: ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ನೀರಿಲ್ಲದೇ ವ್ಯವಸಾಯವಾದರೂ ಮಾಡುವುದು ಹೇಗೆ ಎಂದು ಅದೆಷ್ಟೋ ರೈತರು ಕೃಷಿಗೆ ತಿಲಾಂಜಲಿ ಇಟ್ಟಿದ್ದಾರೆ. ಆದರೆ ನೀರಿಲ್ಲದಿದ್ದರೂ, ಕಡಿಮೆ ನೀರನ್ನು ಬಳಸಿ ವೈಜ್ಞಾನಿಕವಾಗಿ ಕೃಷಿ ಮಾಡಿ ತೋರಿಸಿದ್ದಾರೆ ಇವರು. ಕೊಳಚೆ ನೀರನ್ನು ಬಳಸಿಕೊಂಡು ಸುವಾಸನೆಯ ಶ್ರೀಗಂಧ ಸಸಿಗಳನ್ನು ಬೆಳೆಯುವ ಪ್ರಯತ್ನ ಮಾಡಿದ್ದಾರೆ ಈ ಯುವರೈತ.
ಕೋಲಾರ ಜಿಲ್ಲೆ ಅಂದರೆ ಬರಗಾಲಕ್ಕೆ ಮತ್ತೊಂದು ಹೆಸರು. ಇಲ್ಲಿ ನದಿ-ನಾಲೆ, ನೀರಿನ ಮೂಲಗಳಿಲ್ಲ. ಹೀಗಾಗೇ ಇಲ್ಲಿ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಹೀಗಿದ್ದಾಗ ಕೃಷಿ ಮಾತೆಲ್ಲಿ? ಆದರೆ ಪಟ್ಟು ಬಿಡದೇ ಕೃಷಿ ಮಾಡಿ ಅದರಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ ಜೋತೇನಹಳ್ಳಿಯ ಈ ರೈತ. ಅವರ ಕೃಷಿ ಹಾದಿ ಹೇಗಿದೆ ಇಲ್ಲಿ ನೋಡೋಣ...
ಕೋಲಾರ ವಕೀಲ ಶಿವಣ್ಣನ ಕೈಹಿಡಿಯಿತು ಈ ಸಾವಯವ ಕೃಷಿ
ಚರಂಡಿ ನೀರಲ್ಲಿ ಗಿಡಗಳ ಆರೈಕೆ
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಜೋತೇನಹಳ್ಳಿ ಗ್ರಾಮದ ಯುವ ರೈತ ಅಂಬರೀಶ್ ಹೀಗೆ ಭಿನ್ನವಾಗಿ ಯೋಚಿಸಿದವರು. ಕೃಷಿಗೆ ಬೇಕಾದಷ್ಟು ನೀರು ಲಭ್ಯವಿಲ್ಲದ್ದರಿಂದ ಊರಿನ ಚರಂಡಿ ನೀರನ್ನು ಬಳಸಿಕೊಂಡು ಶ್ರೀಗಂಧ ಸಸಿಗಳನ್ನು ಬೆಳೆಸಲು ಮುಂದಾದರು. ತಮಗಿರುವ ಅರ್ಧ ಎಕರೆ ಜಮೀನಿನಲ್ಲಿ ಶ್ರೀಗಂಧದೊಂದಿಗೆ ಕರಿಬೇವು, ನೇರಳೆ ಸೇರಿದಂತೆ 600 ಸಸಿಗಳನ್ನು ಬೆಳೆಸಿದ್ದಾರೆ. ಚರಂಡಿ ನೀರನ್ನು ಈ ಗಿಡಗಳಿಗೆ ಬಳಸುತ್ತಿದ್ದಾರೆ. ಜಮೀನಿನಲ್ಲೇ ಊರಿನ ಚರಂಡಿ ನೀರು ಶೇಖರಣೆಯಾಗುವಂತೆ ಹೊಂಡ ನಿರ್ಮಿಸಿದ್ದಾರೆ.
ಕೃಷಿಯೊಂದಿಗೆ ಕೋಳಿ ಸಾಕಣೆ
ಹೊಂಡದಲ್ಲಿ ಶೇಖರಣೆಗೊಂಡ ನೀರನ್ನು ನಂತರ ತೋಟಕ್ಕೆ ಹಾಯಿಸಲಾಗುತ್ತದೆ. ಈ ಒಂದು ಪ್ರಯತ್ನವನ್ನು ಅಂಬರೀಶ್ ಅವರು ಕಳೆದ ಎಂಟು ತಿಂಗಳಿನಿಂದ ಮಾಡುತ್ತಾ ಬಂದಿದ್ದಾರೆ. ಶ್ರೀಗಂಧ ದೀರ್ಘ ಕಾಲದ ಬೆಳೆಯಾಗಿರುವುದರಿಂದ ಇದರ ಜೊತೆ ಜೊತೆಗೆ ಕೋಳಿಗಳ ಸಾಕಣೆ ಮಾಡಿ ಪರ್ಯಾಯ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಹಾಸನದ ಯುವ ರೈತನ ಸಾಹಸ ಎಲ್ಲರಿಗೂ ಮಾದರಿ
ಅಲ್ಪ ಆದಾಯಕ್ಕೂ ದಾರಿ
ಜೋತೇನಹಳ್ಳಿಯ ಅಂಬರೀಶ್ ದೀರ್ಘ ಕಾಲದ ಬೆಳೆ ಶ್ರೀಗಂಧದ ಜೊತೆ ಅಲ್ಪ ಲಾಭವನ್ನೂ ತರುವ ಬೆಳೆಗಳನ್ನು ಬೆಳೆದಿದ್ದಾರೆ. ಕರಿಬೇವು, ನೇರಳೆಯಂಥ ಬೆಳೆಗಳು ಒಂದಿಷ್ಟು ಆದಾಯವನ್ನೂ ತರುತ್ತಿವೆ. ಅಂತರ್ಜಲ ಕುಸಿತಕ್ಕೆ ನಿರಾಶೆಯಾಗದೆ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಪ್ರತಿನಿತ್ಯ ಗ್ರಾಮದ ಕೊಳಕು ನೀರನ್ನು ಹಿಡಿದಿಟ್ಟುಕೊಂಡು, ಹನಿ ನೀರಾವರಿ ಮೂಲಕ ಹಾಯಿಸುತ್ತಾರೆ. ಇದು ಗಿಡ ಫಲವತ್ತಾಗಿ ಬೆಳೆಯಲು ಸಹಾಯಕವಾಗಿದೆ.
ರೈತನಿಗೆ ಊರಿನವರ ಮೆಚ್ಚುಗೆ
ಚರಂಡಿ ನೀರನ್ನು ಹೀಗೆ ಸದುಪಯೋಗ ಮಾಡಿಕೊಂಡಿರುವ ಪ್ರಯತ್ನಕ್ಕೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀರನ್ನೇ ನಂಬಿಕೊಂಡು ಕೈಕಟ್ಟಿ ಕೂರುವ ಬದಲು ಈ ಭಿನ್ನ ಆಲೋಚನೆಯೊಂದಿಗೆ ಮುನ್ನಡೆದಿರುವುದಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ. ಕೊಳಕು ನೀರಲ್ಲಿ ಶ್ರೀಗಂಧ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕೋಲಾರದಂತಹ ಬರಗಾಲದ ಪ್ರದೇಶದಲ್ಲಿ ಇಂಥದ್ದೊಂದು ಪ್ರಯತ್ನ ಕೃಷಿಕರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ.