4 ತಾಲೂಕಿಗೆ ನೀರೊದಗಿಸುವ ಯರಗೋಳ್ ಯೋಜನೆ ಜಾರಿ ಮಾಡಿ: ಎಚ್ಡಿಕೆ
ಬೆಂಗಳೂರು ಆಗಸ್ಟ್ 05: ನಾಲ್ಕು ತಾಲೂಕುಗಳಿಗೆ ನೀರೊದಗಿಸುವ ಯರಗೋಳ್ ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ಇದುವರೆಗೂ ಲೋಕಾರ್ಪಣೆ ಮಾಡಿಲ್ಲ. ಶೀಘ್ರವೇ ಯರಗೋಳ್ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡಿ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಕುಮಾರಸ್ವಾಮಿ ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್ ಸೇರಿ 4 ತಾಲೂಕುಗಳಿಗೆ ನೀರೊದಗಿಸುವ ಯರಗೋಳ್ ಜಲಾಶಯ ತುಂಬಿ ಹರಿಯುತ್ತಿಗೆ. ಈ ಯೋಜನೆಯನ್ನು ಕೂಡಲೇ ರಾಜ್ಯ ಸರ್ಕಾರ ಲೋಕಾರ್ಪಣೆ ಮಾಡಿ ಯೋಜನೆ ಲಾಭ ದೊರೆಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಅಣೆಕಟ್ಟೆ ತುಂಬಿ ಹರಿಯುತ್ತಿರುವ ದೃಶ್ಯ ಸಂತಸ ಮೂಡಿಸಿದೆ. ಕುಡಿಯುವ ನೀರಿಲ್ಲದೆ ತತ್ತರಿಸಿದ್ದ ಈ ಭಾಗದ ಜನರಿಗೆ ಪರಿಶುದ್ಧ ನೀರು ಒದಗಿಸಲು 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಯೋಜನೆಗೆ ಒಪ್ಪಿಗೆ ನೀಡಿದ್ದೆ. ನಂತರ ಯೋಜನೆಗೆಂದು 50ಕೋಟಿ ರೂ.ಮೀಸಲಿಟ್ಟಿದ್ದೆ. ಆಗ ಈ ಜಲಾಶಯದ ಅಣೆಕಟ್ಟೆಗೆ ನೀರು ಎಲ್ಲಿಂದ ಬರುತ್ತದೆ ಎಂದು ಮೂಗು ಮುರಿದಿದ್ದರು. ಅವರೆಲ್ಲ ಈ ಬಂದು ನೋಡಿದರೆ ತಿಳಿಯುತ್ತದೆ ಎಂದು ಹೇಳಿದರು.
ಶೀಘ್ರವೇ ಯರಗೋಳ್ ಯೋಜನೆ ಉದ್ಘಾಟನೆ ಮಾಡಿ ಎಚ್ಡಿಕೆ ಒತ್ತಾಯ
ಜೆಡಿಎಸ್ ಪಕ್ಷ ಕಳೆದ ಏಪ್ರಿಲ್ 24ರಂದು ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಯರಗೋಳ ಜಲಾಶಯಕ್ಕೆ ತೆರಳಿದ್ದೆ. ಲಕ್ಷಾಂತರ ಜನರಿಗೆ ನೀರುಒದಗಿಸುವ ಯೋಜನೆ ನಿಂತಿದ್ದನ್ನು ಕಂಡು ಅಂದೇ ಸರ್ಕಾರದ ಮುಖ್ಯ ಎಂಜಿನೀಯರ್, ಸಂಬಂಧಿತ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸ್ಥಳದಿಂದಲೇ ಸಂಪರ್ಕಿಸಿದ್ದೆ. ತಕ್ಷಣವೇ ಈ ಯೋಜನೆ ಉದ್ಘಾಟಿಸುವಂತೆ ಆಗ್ರಹಿಸಿದ್ದೆ. ಆದರೆ ಅಧಿಕಾರಿಗಳು ನೀರೆತ್ತುವ ಪಂಪ್ ಅಳವಡಿಕೆ ಕೆಲಸ ಬಾಕಿ ಇದೆ ಎಂದಿದ್ದರು. ಅಲ್ಲದೇ ನಿರ್ಲಕ್ಷ್ಯದ ರಾಜಕಾರಣ ಮಾಡುತ್ತಿರುವ ಬಿಜೆಪಿ ಗುತ್ತಿಗೆದಾರರಿಗೆ ಬಾಕಿ ಹಣ ನೀಡದಿರುವುದು ಅಂದೇ ತಿಳಿದು ಬಂತು ಎಂದರು.
ಜನರ ನೀರಿನ ಹಾಹಾಕಾರ ಬಗ್ಗೆ ಕಾಳಜಿ ಇಲ್ಲ
ಜಿಎಎಸ್ ನಂತರ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಆಡಳಿತ ನಡೆಸಿದರೂ ಯೋಜನೆ ಪೂರ್ಣವಾಗಲಿಲ್ಲ. ಮೂರು ವರ್ಷ ಅಧಿಕಾರ ಪೂರೈಸಿರುವ ಬಿಜೆಪಿ ಸರ್ಕಾರಕ್ಕೆ ಜನರ ನೀರಿನ ತತ್ವಾರ ಬಗ್ಗೆ ಕಾಳಜಿ ಇಲ್ಲ. ಅಣೆಕಟ್ಟಿಗೆ ಪಂಪ್ ಜೋಡಿಸಲಾಗದೇ ದಿನಗಳನ್ನು ದೂಡುತ್ತಿದೆ. ಬರಪೀಡಿತ ಜಿಲ್ಲೆಗಳು ಎಂದರೆ ಬಿಜೆಪಿಗೆ ಅಷ್ಟಕಷ್ಟೇ.
ಕೆಲವು ವರ್ಷದಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಸಮೃದ್ಧ ಮಳೆ ಆಗಿದ್ದರಿಂದ ಕೆರೆಗಳಲ್ಲಿ ಮಳೆನೀರು ನಿಲ್ಲದೆ, ಪಕ್ಕದ ಆಂಧ್ರ, ತಮಿಳುನಾಡು ಪಾಲಾಗುತ್ತಿದೆ. ಗುತ್ತಿಗೆದಾರರ ಜೇಬು ತುಂಬಿಸಲು ರಾಷ್ಟ್ರೀಯ ಪಕ್ಷಗಳು ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿಯಂಥಹ ಯೋಜನೆ ರೂಪಿಸಿ ಹಣ ಲೂಟಿಗೆ ಮುಂದಾಗಿವೆ. ಇರುವ ನೀರು ಉಳಿಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ದೂರಿದರು.
ನೀರಿಗಾಗಿ ನೆರೆ ರಾಜ್ಯಗಳ ಜತೆ ಗಲಾಟೆ
ನೆರೆ ರಾಜ್ಯಗಳ ಜತೆ ನೀರಿಗಾಗಿ ಗುದ್ದಾಡುವ ಸರ್ಕಾರಕ್ಕೆ ಮಳೆ ನೀರಿನ ಕನಿಷ್ಠ ಪ್ರಜ್ಞೆಯೇ ಇಲ್ಲ. ಇಲ್ಲಿ ಸಂಗ್ರಹಣೆ ಆಗುವ ಮಳೆ ನೀರನ್ನೆ ಸರಿಯಾಗಿ ಬಳಸಿಕೊಂಡರೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಸರ್ಕಾರ ಬೆಂಗಳೂರಿನ ವಿಷತ್ಯಾಜ್ಯ ನೀರನ್ನು ಅರೆಬರೆ ಸಂಸ್ಕರಿಸಿ ಹರಿಸುತ್ತಿದೆ. ಈ ಜಿಲ್ಲೆಗಳನ್ನು ಭವಿಷ್ಯದಲ್ಲಿ ರಾಜ್ಯದ ಅತಿದೊಡ್ಡ 'ಆನಾರೋಗ್ಯ ಕೂಪ'ವನ್ನಾಗಿ ಮಾಡಲು ಹೊರಟಿದೆ. ಈ ಜಿಲ್ಲೆಯ 'ಸ್ವಯಂಘೋಷಿತ ಭಗೀರಥ'ನ ನ್ನಾರವು ಇದೆ ಸಚಿವ ಸುಧಾಕರ್ ವಿರುದ್ಧವು ಕಿಡಿಕಾರಿದರು.
ಮಳೆ ನೀರು ಸದ್ಬಳಕೆ ಮಾಡಿ ಬವಣೆ ನೀಗಿಸಬೇಕು
ಕೆರೆಕಟ್ಟೆ, ಕಾಲುವೆ, ಗೋಕುಂಟೆಗಳಂಥ ಸಾಂಪ್ರದಾಯಿಕ ಜಲಮೂಲಗಳನ್ನು ನಾಶಗೊಳಿಸಿ ಕಾಗದದ ಮೇಲಷ್ಟೇ ಬಣ್ಣ ಬಣ್ಣವಾಗಿ ಕಾಣುವ, ದುಡ್ಡು ಹೊಡೆಯುವ ಯೋಜನೆಗಳನ್ನು ರೂಪಿಸುವುದನ್ನು ಸರ್ಕಾರ ಇನ್ನಾದರೂ ಬಿಡಬೇಕು. ಈ ಜಿಲ್ಲೆಗಳನ್ನು 'ಶಾಶ್ವತ ಮರುಭೂಮಿ'ಯನ್ನಾಗಿ ಮಾಡುವುದು ಬೇಡ. ಮಳೆ ನೀರನ್ನು ಸದ್ಭಳಕೆ ಮಾಡಿಕೊಂಡರೆ ಬರಪೀಡಿತ ಜಿಲ್ಲೆಗಳ ಬವಣೆ ನೀಗುತ್ತದೆ. ಶೀಘ್ರದಲ್ಲೇ ನಾನು ಯರಗೋಳ್ ಅಣೆಕಟ್ಟೆಗೆ ಭೇಟಿ ನೀಡುತ್ತೇನೆ. ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗೀನ ಸಮರ್ಪಿಸುತ್ತೇನೆ. ಕೋಲಾರ,ಚಿಕ್ಕಬಳ್ಳಾಪುರದಲ್ಲಿ ಮಳೆನೀರು ಉಳಿಸಿ,ಕರೆಕಟ್ಟೆ ಅಭಿವೃದ್ಧಿಪಡಿಸಿ ಜನತೆಗೆ ಪರಿಶುದ್ಧ ನೀರು ಕೊಡುವ ಗುರಿ ಜೆಡಿಎಸ್ ಹೊಂದಿದೆ ಎಂದರು.