ಕೋಲಾರ : ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಪೂರ್ಣ
ಕೋಲಾರ, ಜೂನ್ 11 : 'ಇದೇ ವರ್ಷದ ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 01 ರಂದು ಡ್ಯಾಂ ಅನ್ನು ಲೋಕಾರ್ಪಣೆ ಮಾಡಲಾಗುವುದು' ಎಂದು ವಿಧಾನಸಭೆ ಸ್ಪೀಕರ್ ಮತ್ತು ಶ್ರೀನಿವಾಸಪುರ ಶಾಸಕ ಕೆ. ಆರ್ ರಮೇಶ್ ಕುಮಾರ್ ಹೇಳಿದರು.
ಮಂಗಳವಾರ ಕೋಲಾರ ಜಿಲ್ಲೆಯ ಶಾಸಕರು ಹಾಗೂ ಸಂಸದರೊಂದಿಗೆ ಯರಗೋಳ್ ಜಲಾಶಯದ ಕಾಮಗಾರಿ ಸ್ಥಳವನ್ನು ರಮೇಶ್ ಕುಮಾರ್ ವೀಕ್ಷಣೆ ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಯರಗೋಳ್ ಡ್ಯಾಂನಲ್ಲಿ ಪೋಲಾಗುತ್ತಿದೆ ನೀರು
'ಈ ಡ್ಯಾಂ ಪೂರ್ಣಗೊಂಡರೆ 8 ಟಿಎಂಸಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ. 2016ರಲ್ಲಿ ನಾನು ಇಲ್ಲಿಗೆ ಬಂದಾಗ ಈ ಕಾಮಗಾರಿಯ ಸ್ಥಿತಿ ಶೋಚನೀಯವಾಗಿತ್ತು. ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ' ಎಂದು ತಿಳಿಸಿದರು.
ಬೆಂಬಲ, ಅನುಕೂಲ ಇಲ್ಲದಿದ್ದರೂ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮಾವಿನ ಸುಗ್ಗಿ, ಹಿಗ್ಗಿನಲ್ಲಿ ರೈತರು
'ಕೆ.ಸಿವ್ಯಾಲಿ ನೀರನ್ನು ತರಲು ಸಾಕಷ್ಟು ಅಡೆತಡೆಗಳು ಉಂಟಾದವು. ಅವುಗಳನ್ನು ನಿವಾರಿಸಿ ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ವಿಘ್ನಗಳು ಸಹಜ. ಈ ವರ್ಷದ ಅಂತ್ಯದ ವೇಳೆಗೆ 480 ಎಂಎಲ್ಡಿ ನೀರು ಜಿಲ್ಲೆಗೆ ಹರಿಯುತ್ತದೆ' ಎಂದು ರಮೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಅಂದು ಹಾಲಿನ ವ್ಯಾಪಾರಿ, ಇಂದು ಕೋಲಾರದ ಬಿಜೆಪಿ ಸಂಸದ!
ಯರಗೋಳ್ ಡ್ಯಾಂ ಕಾಮಗಾರಿ ಪೂರ್ಣ
ಕೋಲಾರ, ಮಾಲೂರು, ಬಂಗಾರಪೇಟೆ ವ್ಯಾಪ್ತಿಗೆ ಒಳಪಡುವ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಯರಗೋಳ್ ಡ್ಯಾಂ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂಬ ಆರೋಪವಿತ್ತು. ಈಗ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ.
ಕೆರೆಗಳ ಪುನಃಶ್ಚೇತನ
'ಕೆರೆಗಳ ಪುನಃಶ್ಚೇತನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೆರೆ ಸಂಜೀವಿನಿ ಯೋಜನೆಯಲ್ಲಿ ಕೆಸಿ ವ್ಯಾಲಿ ನೀರು ಹರಿಯುವ ಪ್ರಮುಖ ಕೆರೆಗಳ ಹೂಳು ತೆಗೆಯಲಾಗುತ್ತದೆ. ನೀಲಗಿರಿ ಮತ್ತು ಜಾಲಿ ಮರಗಳನ್ನು ತೆಗೆಯಲು ಶಾಸನವನ್ನು ಮಾಡಲಾಗಿದೆ. ಅದರಂತೆ ಹಂತ ಹಂತವಾಗಿ ನೀಲಗಿರಿ ಮತ್ತು ಜಾಜಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ' ಎಂದು ರಮೇಶ್ ಕುಮಾರ್ ಹೇಳಿದರು.
24 ಟಿಎಂಸಿ ನೀರು ಸಿಗಲಿದೆ
'ಎತ್ತಿನ ಹೊಳೆ ಯೋಜನೆಯು 14 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆಯಾಗಿದೆ. ಸಕಲೇಶಪುರದ ಬಳಿ 7 ಹೊಳೆಗಳಿಂದ ಹೋಗುವ ನೀರನ್ನು ತಡೆಗೋಡೆಗಳನ್ನು ನಿರ್ಮಿಸಿ ಪೈಪ್ಲೈನ್ ಮೂಲಕ ತರಲಾಗುತ್ತದೆ. ಇದರಲ್ಲಿ ಅಂದಾಜು 24 ಟಿಎಂಸಿ ನೀರು ಸಿಗುತ್ತದೆ. ತುಮಕೂರು, ಬೆಂಗಳೂರು ಜಿಲ್ಲೆಗಳಿಗೆ ನೀಡಿದ ನಂತರ 8 ಟಿ.ಎಂ.ಸಿ ನೀರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ದೊರೆಯಲಿದೆ' ಎಂದು ರಮೇಶ್ ಕುಮಾರ್ ಹೇಳಿದರು.
ತ್ವರಿತವಾಗಿ ಕಾಮಗಾರಿ
ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ, 'ಮಾನ್ಯ ಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್ ಅವರ ಇಚ್ಛಾಶಕ್ತಿಯಿಂದ ಯರಗೋಳ್ ಡ್ಯಾಂ ನಿರ್ಮಾಣವಾಗುತ್ತಿದೆ. ಇವರು ಸತತವಾಗಿ ಕಾಮಗಾರಿಯ ಬೆನ್ನತ್ತಿ ವೇಗವಾಗಿ ಕಾಮಗಾರಿ ನಡೆಯುವಂತೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಶಾಸಕರು ಹಾಗೂ ನಾನು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ' ಎಂದರು.