ಬೆಮೆಲ್ ಕಂಪನಿ ಖಾಸಗೀಕರಣಕ್ಕೆ ಕಾರ್ಮಿಕರ ವಿರೋಧ, ಪ್ರತಿಭಟನೆ
ಕೋಲಾರ, ಮಾರ್ಚ್ 5: ಕೇಂದ್ರ ಸರ್ಕಾರವು ಬೆಮೆಲ್ ಕಂಪನಿಯ ಸುಮಾರು ಶೇ.72 ರಷ್ಟು ಪಾಲುದಾರಿಕೆಯನ್ನು ಖಾಸಗಿಯವರಿಗೆ ವಹಿಸುವುದರ ಮೂಲಕ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿ, ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
1964ರಲ್ಲಿ ಕೇವಲ ಐದು ಕೋಟಿ ರುಪಾಯಿ ಬಂಡವಾಳದಿಂದ ಆರಂಭವಾದ ಬೆಮೆಲ್, ಇಂದು 3,500 ಕೋಟಿ ರುಪಾಯಿ ವಹಿವಾಟು ನಡೆಸುತ್ತಿದೆ. ಐದು ಸಾವಿರ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಕುಟುಂಬಗಳು ಈ ಕಂಪನಿಯನ್ನು ಅವಲಂಬಿಸಿವೆ. ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಕೆಜಿಎಫ್ನ ಬೆಮೆಲ್ ಕಾರ್ಖಾನೆ, ಈಗಾಗಲೇ ರಕ್ಷಣಾ ಇಲಾಖೆಗೆ ಬೇಕಾದ ಟೆಟ್ರಾ ಸೇರಿದಂತೆ ವಿವಿಧ ಬೃಹತ್ ವಾಹನಗಳನ್ನು ತಯಾರಿಸುತ್ತಿರುವ ಹಾಗೂ ಲಾಭದಲ್ಲಿರುವ ಕಾರ್ಖಾನೆಯಾಗಿದೆ.
ಮಾರ್ಚ್ 16ರಂದು ಬಿಎಸ್ಎನ್ಎಲ್, ಬ್ಯಾಂಕು, ಬಿಇಎಂಎಲ್ ಕಾರ್ಮಿಕರ ಪ್ರತಿಭಟನೆ
ಕೋಟ್ಯಂತರ ರೂಪಾಯಿ ಲಾಭ ಇದೆ
ಕಂಪನಿಯಿಂದ ಸರ್ಕಾರದ ಬೊಕ್ಕಸಕ್ಕೂ ಕೂಡಾ ಕೋಟ್ಯಂತರ ರೂಪಾಯಿ ಲಾಭ ಇದೆ. ಹೀಗಿದ್ದರೂ ಕೇಂದ್ರ ಸರ್ಕಾರ ಬೆಮೆಲ್ ಕಂಪನಿಯ ಸುಮಾರು ಶೇ.72ರಷ್ಟು ಪಾಲುದಾರಿಕೆಯನ್ನು ಖಾಸಗಿಯವರಿಗೆ ವಹಿಸುವುದರ ಮೂಲಕ ಖಾಸಗೀಕರಣ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
116ನೇ ದಿನವೂ ಮುಂದುವರೆದ ಟೊಯೊಟಾ ಕಾರ್ಮಿಕ ಪ್ರತಿಭಟನೆ
ಒಂದು ತಿಂಗಳ ನಿರಂತರ ಹೋರಾಟಕ್ಕೆ ಮುಂದಾಗಿದ್ದು, ಕಾರ್ಮಿಕರ ಹೋರಾಟ ಹದಿಮೂರನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರ ಹೋರಾಟಕ್ಕೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಬೆಂಬಲ ನೀಡಿ ಕೇಂದ್ರ ಸರ್ಕಾರ ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಅತಿ ಶೀಘ್ರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೋರಾಟಕ್ಕೆ ಕರೆತರುವ ಭರವಸೆಯನ್ನು ನೀಡಿದ್ದಾರೆ.
ಚಿನ್ನದ ಗಣಿಗೆ ಬೀಗ ಹಾಕಿ 20 ವರ್ಷ
ಅಂದಿನ ಕೋಲಾರದ ಅಭಿವೃದ್ಧಿ ಹರಿಕಾರ ಕೇಂದ್ರ ಮಂತ್ರಿಯಾಗಿದ್ದ ಎಂ.ವಿ ಕೃಷ್ಣಪ್ಪ ಕಾಳಜಿಯ ಫಲವಾಗಿ ಸ್ಥಾಪನೆಯಾದ ಕಾರ್ಖಾನೆ ಇಂದು ಬೃಹತ್ ಕೈಗಾರಿಕೆಯಾಗಿ ಹೊರಹೊಮ್ಮಿದೆ. ಈಗಾಗಲೇ ಕೆಜಿಎಫ್ನಲ್ಲಿದ್ದ ಚಿನ್ನದ ಗಣಿಗೆ ಬೀಗ ಹಾಕಿ 20 ವರ್ಷಗಳೇ ಕಳೆದರೂ ಅದನ್ನು ಮತ್ತೆ ಪುನರ್ಸ್ಥಾಪನೆ ಮಾಡಲಾಗಿಲ್ಲ. ಇದರಿಂದಾಗಿ ಸಾವಿರಾರು ಜನ ಕಾರ್ಮಿಕರು ಬೀದಿಪಾಲಾದರು. ಹೀಗಿರುವಾಗ ಮತ್ತೆ ಕೇಂದ್ರ ಬೆಮೆಲ್ ಶೇ.46 ರಷ್ಟು ಪಾಲುದಾರಿಕೆಯನ್ನು ಖಾಸಗಿಯವರಿಗೆ ವಹಿಸಿತ್ತು. ಈಗ ಮತ್ತೆ ಶೇ.26ರಷ್ಟು ಪಾಲನ್ನು ಖಾಸಗಿಯವರಿಗೆ ನೀಡುತ್ತಿದೆ, ಇದರಿಂದಾಗಿ ಒಟ್ಟು ಕಂಪನಿಯ ಶೇ.72 ರಷ್ಟು ಪಾಲುದಾರಿಕೆ ಖಾಸಗಿಯವರ ಪಾಲಾಗುವ ಮೂಲಕ ಕಂಪನಿ ಸರ್ಕಾರದ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಇಲ್ಲಿಯ ಕಾರ್ಮಿಕರದ್ದಾಗಿದೆ.
ರಕ್ಷಣಾ ಇಲಾಖೆಗೆ ಬೇಕಾದ ವಾಹನಗಳ ತಯಾರಿಕೆ
ರಕ್ಷಣಾ ಇಲಾಖೆಗೆ ಬೇಕಾದ ವಾಹನಗಳನ್ನು, ಯಂತ್ರೋಪಕರಣಗಳನ್ನು ಹೆಚ್ಚಾಗಿ ತಯಾರು ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ಮೆಟ್ರೋ, ಮುಂಬೈ ಮೆಟ್ರೋ ರೈಲು ಬೋಗಿಗಳನ್ನು ಸಹ ಇಲ್ಲಿಯೇ ತಯಾರಿಸಲಾಗಿದೆ. ಹಾಗಾಗಿ ಉತ್ತಮ ಆದಾಯ ತರುವ ಇಂತಹ ಕಂಪನಿ ಖಾಸಗಿ ಪಾಲಾದಲ್ಲಿ, ಖಾಸಗಿಯವರು ಲಾಭದ ದೃಷ್ಟಿಯಿಂದ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವುದು ಕಷ್ಟ. ಹಾಗಾಗಿ ಕೇಂದ್ರ ತನ್ನ ನಿಲುವನ್ನು ಬದಲಿಸಿ ಬೆಮೆಲ್ ಕಂಪನಿಯನ್ನು ಕೇಂದ್ರ ಸರ್ಕಾರದ ಒಡೆತನದಲ್ಲೇ ಇರಿಸಿಕೊಳ್ಳಬೇಕು ಅನ್ನುವುದು ಕಾರ್ಮಿಕರ ಒತ್ತಾಯವಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಕಾರ್ಮಿಕರ ಎಚ್ಚರಿಕೆ ರವಾನಿಸಿದರು.
ಲಾಭ ತಂದು ಕೊಡುತ್ತಿರುವ ಕಂಪನಿ
ಒಟ್ಟಾರೆ ಸರ್ಕಾರಕ್ಕೆ ಲಾಭ ತಂದು ಕೊಡುತ್ತಿರುವ ಕಂಪನಿಯನ್ನು ಖಾಸಗೀಕರಣ ಮಾಡುತ್ತಿರುವ ಬಗ್ಗೆ ವರ್ಷಗಳಿಂದ ನಡೆಯುತ್ತಿದ್ದ ಕಾರ್ಮಿಕರ ಹೋರಾಟಕ್ಕೆ ಸದ್ಯ ಕಾಂಗ್ರೆಸ್ ಬೆಂಬಲ ಸಿಕ್ಕಿದ್ದು, ಖಾಸಗೀಕರಣದ ಹೋರಾಟ ಸದ್ಯಕ್ಕೆ ರಾಜಕೀಯ ತಿರುವು ಪಡೆದುಕೊಳ್ಳುವ ಮೂಲಕ ಮತ್ತಷ್ಟು ವೇಗ ಪಡೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.