ವಿಡಿಯೋ; ನಮಗೆ ಮದ್ಯ ಬೇಡ ಸ್ವಾಮಿ; ಕೋಲಾರ ಡಿಸಿಗೆ ಮನವಿ ಮಾಡಿದ ಮಾಜಿ ಮದ್ಯವ್ಯಸನಿಗಳು
ಕೋಲಾರ, ಮೇ 04: ಇಂದಿನಿಂದ ರಾಜ್ಯಾದ್ಯಂತ ಮದ್ಯದಂಗಡಿಗಳು ತೆರೆದಿವೆ. ಇಷ್ಟು ದಿನ ಲಾಕ್ ಡೌನ್ ನಿಂದ ಮದ್ಯವಿಲ್ಲದೇ ಪರದಾಡುತ್ತಿದ್ದ ಜನರಂತೂ ಬಿಸಿಲನ್ನೂ ಲೆಕ್ಕಿಸದೇ, ಉದ್ದದ ಸಾಲನ್ನೂ ಲೆಕ್ಕಿಸದೇ ಮದ್ಯ ಖರೀದಿಸಿದ್ದಾರೆ. ಇಷ್ಟು ದಿನ ಕಾದು ಕಾದು ಕೊನೆಗೂ ಮದ್ಯ ಖರೀದಿಸಿದ ಖುಷಿಯಲ್ಲಿ ಕೆಲವರಿದ್ದರೆ, ಮತ್ತೆ ಇನ್ನೂ ಕೆಲವರು ಮದ್ಯ ಸಿಗದೇ ನಿರಾಶರಾಗಿ ಮನೆಗೆ ವಾಪಸ್ಸಾಗಿದ್ದಾರೆ.
ಆದರೆ ಈ ನಡುವೆ ಕೋಲಾರದ ಜಿಲ್ಲಾಧಿಕಾರಿಗಳಿಗೆ ದಯವಿಟ್ಟು ಬಾರ್ ಗಳನ್ನು ತೆರೆಯಬೇಡಿ ಎಂಬ ಮನವಿ ಬಂದಿದೆ. ಅಷ್ಟಕ್ಕೂ ಈ ಮನವಿ ಸಲ್ಲಿಸಿರುವುದು ಬೇರಾರೂ ಅಲ್ಲ, ಮಾಜಿ ಮದ್ಯವ್ಯಸನಿಗಳು. ವಿಡಿಯೋ ಮೂಲಕ ಜಿಲ್ಲಾಧಿಕಾರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ. ಅವರು ಮಾಡಿರುವ ಮನವಿ ಏನು? ಇಲ್ಲಿದೆ ವಿವರ...
|
ಜಿಲ್ಲಾಧಿಕಾರಿಗೆ ವಿಡಿಯೋ ಮೂಲಕ ಮನವಿ
"ನಾವು ಕುಡಿಯೋದು ಬಿಟ್ಟು ಆರಾಮಾಗಿದ್ದೇವೆ. ದಯವಿಟ್ಟು ಬಾರ್ ಗಳನ್ನು ಓಪನ್ ಮಾಡಬೇಡಿ" ಎಂದು ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಕೆಲವರು ಮನವಿ ಮಾಡಿಕೊಂಡಿದ್ದಾರೆ. ಗ್ರಾಮದ ಅರಳಿ ಕಟ್ಟೆಯಲ್ಲಿ ಕುಳಿತು ಕೈ ಮುಗಿದು ಬೇಡಿಕೊಂಡಿದ್ದಾರೆ ಇವರು. ಕೊರೊನಾದಿಂದಾಗಿ ನಲವತ್ತು ದಿನಗಳಿಂದ ಎಣ್ಣೆ ಬಿಟ್ಟು ಆರಾಮಾಗಿದ್ದೇವೆ. ಮತ್ತೆ ಓಪನ್ ಮಾಡಬೇಡಿ" ಎಂದು ಕೇಳಿಕೊಂಡಿದ್ದಾರೆ.
"ನಮಗೆ ಜ್ಞಾನೋದಯವಾಗಿದೆ"
ನಾವು ಆರಾಮಾಗಿದ್ದೇವೆ. ನಮ್ಮ ಕುಟುಂಬದವರೂ ನೆಮ್ಮದಿಯಾಗಿದ್ದಾರೆ. ನಮಗೂ ಕುಡಿತ ಬಿಟ್ಟರೆ ಜೀವನ ಚೆನ್ನಾಗಿರುತ್ತದೆ ಎಂಬ ಜ್ಞಾನೋದಯವಾಗಿದೆ. ಆದ್ದರಿಂದ ದಯವಿಟ್ಟು ಡಿಸಿ ಮೇಡಂ ಅವರು ಸಂಪೂರ್ಣವಾಗಿ ಮದ್ಯದಂಗಡಿಗಳನ್ನು ತೆರೆಯದಂತೆ ಸರ್ಕಾರಕ್ಕೆ ಮನವಿ ಮಾಡಿದರೆ ತುಂಬಾ ಉಪಕಾರವಾಗುತ್ತದೆ ಎಂದಿದ್ದಾರೆ.
"ನಮಗೆ ಮದ್ಯ ಬೇಡವೇ ಬೇಡ"
ಕೊರೊನಾದಿಂದಾಗಿ ಬಾರ್ ಗಳು ಬಂದಾಗಿನಿಂದ ಚೆನ್ನಾಗಿದ್ದೇವೆ. ನಮಗೆ ಮದ್ಯ ಬೇಡವೇ ಬೇಡ. ನಮಗೆ ಮದ್ಯದ ಅವಶ್ಯಕತೆ ಇಲ್ಲವೇ ಇಲ್ಲ. ಇದನ್ನು ರದ್ದು ಪಡಿಸುವುದೇ ಒಳ್ಳೆಯ ಮಾರ್ಗ. ಇದರಿಂದ ಎಷ್ಟೋ ಕುಟುಂಬಗಳು ಉಳಿದುಕೊಳ್ಳುತ್ತವೆ ಎಂದು ಮನವಿ ಮಾಡಿದ್ದಾರೆ.
ಮದ್ಯದಂಗಡಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ
ಇಂದು ಮದ್ಯದಂಗಡಿಗಳು ತೆರೆದಿದ್ದರಿಂದ ಕೈಗೆ ಎಣ್ಣೆ ಸಿಗುತ್ತಿದ್ದಂತೆ ಮದ್ಯಪ್ರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ರಾಜ ವೈನ್ಸ್ ಶಾಪ್ ಮುಂಭಾಗ ಪಟಾಕಿ ಕೈಯಲ್ಲಿ ಹಿಡಿದು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಮದ್ಯದಂಗಡಿ ತೆರೆಯುತ್ತಿದ್ದಂತೆ ಪಟಾಕಿ ಸಿಡಿಸಿ ಜೈಕಾರ ಹಾಕಿದ್ದರು.