ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲೇ ಗುಡುಗಿದ ಮಾಜಿ ಶಾಸಕ
ಕೋಲಾರ, ಜನವರಿ 11: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಜೆಡಿಎಸ್ ಮಾಜಿ ಶಾಸಕ ವೆಂಕಟಶಿವರೆಡ್ಡಿ ಮತ್ತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲಿ ಗುಡುಗಿದ್ದಾರೆ.
ತಮ್ಮ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಹೂಡಿದಕ್ಕೆ ರಮೇಶ್ ಕುಮಾರ್ ವಿರುದ್ಧ ಸಿಡಿಮಿಡಿಗೊಂಡಿರುವ ವೆಂಕಟಶಿವಾರೆಡ್ಡಿ, "ಮಿಸ್ಟರ್ ರಮೇಶ್ ಕುಮಾರ್ ನಿನಗೆ ತಾಕತ್ತಿದ್ದರೆ ನನ್ನನ್ನು ಜೈಲಿಗೆ ಹಾಕಿಸೋದಲ್ಲ, ಗಲ್ಲಿಗೆ ಹಾಕ್ಸು" ಎಂದು ಸವಾಲು ಹಾಕಿದ್ದಾರೆ.
ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಅವ್ಯವಹಾರ: ವೆಂಕಟ ಶಿವಾರೆಡ್ಡಿ
"ವಿಧಾನಸಭೆಯಲ್ಲಿ ನಾನು ಬಡ ರಾಜಕಾರಣಿ ಎಂದು ಕಣ್ಣೀರು ಸುರಿಸುತ್ತೀಯ. ನಾನು ಸಾಚ, ಬಡವ ಅಂತ ಮಾತಾಡ್ತೀಯಾ, ಪ್ರಾಮಾಣಿಕ ರಾಜಕಾರಣಿ ತರ ಪೋಸ್ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೀನಿ ಅಂತ ಹೇಳ್ತೀಯ. ಆದರೆ ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಇದೆಯಾ?" ಎಂದು ಏಕವಚನದಲ್ಲೇ ಕುಟುಕಿದ್ದಾರೆ.
ಬಳಿಕ ರಮೇಶ್ ಕುಮಾರ್ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿರುವ ಜೊತೆಗೆ ಹಿಂದಿನ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ ನೂರಾರು ಕೋಟಿ ರೂಪಾಯಿಯಷ್ಟು ಹಗರಣ ನಡೆಸಿದ್ದಾರೆ, ತಮ್ಮ ಸ್ವಗ್ರಾಮ ಅಡ್ಡಗಲ್ ಪಕ್ಕದ ಹೊಸಹುಡ್ಯ ಗ್ರಾಮದಲ್ಲಿ ಅಧಿಕಾರಿಗಳನ್ನು ಬೆದರಿಸಿ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಕಬಳಿಕೆ ಮಾಡಿದ್ದಾರೆ, ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಂತರ ಬೆಲೆ ಬಾಳುವ ಕಾಂಪ್ಲೆಕ್ಸ್ ಇದೆ, ಸುಮಾರು 16 ಕೋಟಿ ವೆಚ್ಚದಲ್ಲಿ ಮಗನ ಹೆಸರಲ್ಲಿ ಥಣಿಸಂದ್ರದಲ್ಲಿ ಮನೆ ಕಟ್ಟುತ್ತಿದ್ದಾರೆ, ಅತ್ತಿಕುಂಟೆಯ ಕೊಲೆ ಪ್ರಕರಣದಲ್ಲಿ ರಮೇಶ್ ಕುಮಾರ್ 11ನೇ ಆರೋಪಿಯಾಗಿದ್ದಾರೆ ಎಂದು ದೂರಿದ್ದಾರೆ.
ಶ್ರೀನಿವಾಸಪುರ ಜನರ ಪಾಲಿನ 70 ಎಂ.ಎಂ. ಸಿನೆಮಾ ಹೀರೋ ರಮೇಶ್ ಕುಮಾರ್
"ಅಡ್ಡಗಲ್ ನ ಶ್ಯಾಮ್ ಸುಂದರ್ ರೆಡ್ಡಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ, ಆದರೆ ತನ್ನ ಪ್ರಭಾವ ಬಳಿಸಿ ಬಿ ರಿಪೋರ್ಟ್ ಹಾಕಿ ಹೆಸರು ತೆಗೆದು ಹಾಕಿಸಿದ್ದಾರೆ. ಇಷ್ಟೆಲ್ಲಾ ಮಾಡಿದ್ರು ವಿಧಾನಸಭೆಯಲ್ಲಿ ಕುಳಿತು ಸತ್ಯ ಹರಿಶ್ಚಂದ್ರರಂತೆ ನೀತಿಪಾಠ ಮಾಡುತ್ತಾರೆ" ಎಂದು ಆರೋಪಿಸಿದ್ದಾರೆ.
ರಮೇಶ್ ಕುಮಾರ್ ಹಾಗೂ ವೆಂಕಟಾಶಿವಾರೆಡ್ಡಿ ಇಬ್ಬರು ಸಹ ಶ್ರೀನಿವಾಸಪುರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು, ಡಿಸೆಂಬರ್ 19 2019 ರಂದು ವಿಧಾನಸೌಧದಲ್ಲಿ ರಮೇಶ್ ಕುಮಾರ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಅಕ್ರಮವೆಸಗಿರುವ ಬಗ್ಗೆ 200ಕ್ಕೂ ಹೆಚ್ಚ ಪುಟಗಳ ದಾಖಲೆ ಬಿಡುಗಡೆ ಮಾಡಿದ್ದರು. ಈ ಕಾರಣಕ್ಕಾಗಿ ರಮೇಶ್ ಕುಮಾರ್ ಇದೇ ಜ.9ರಂದು ಶ್ರೀನಿವಾಸಪುರದ ಜೆಎಂಎಫ್ಸಿ ಕೋರ್ಟ್ ನಲ್ಲಿ ಮಾಜಿ ಶಾಸಕ ವೆಂಕಟಾಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.