ಸಿದ್ದರಾಮಯ್ಯ ಪಕ್ಷೇತರವಾಗಿ ನಿಂತು ಗೆದ್ದು ತೋರಿಸಲಿ: ವರ್ತೂರ್ ಸವಾಲ್
ಕೋಲಾರ, ನೆವೆಂಬರ್ 13 : ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷೇತರವಾಗಿ ನಿಂತು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಸವಾಲು ಎಸೆದಿದ್ದಾರೆ.
ಡಿಸೆಂಬರ್ 19ರಂದು ವರ್ತೂರು ಪ್ರಕಾಶ್ ರಿಂದ 'ನಮ್ಮ ಕಾಂಗ್ರೆಸ್' ಘೋಷಣೆ
ಕೋಲಾರ ತಾಲೂಕಿನ ಬೆಗ್ಲಿಯಲ್ಲಿ ಸೋಮವಾರ ಹೊಸ 'ನಮ್ಮ ಕಾಂಗ್ರೆಸ್' ಪಕ್ಷದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ವರ್ತೂರ್ ಪ್ರಕಾಶ್, "ಸಿದ್ದರಾಮಯ್ಯ ಮೂಲತ ಕಾಂಗ್ರೆಸಿಗನಲ್ಲ. ಸಿದ್ದರಾಮಯ್ಯ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ನಾನು ಕಾಂಗ್ರೆಸ್ ಪಕ್ಷ ಸೇರಲು ಸಿದ್ದರಾಮಯ್ಯ ಅಡ್ಡಗಾಲು ಹಾಕಿದ ಪರಿಣಾಮ ಹೊಸ ಪಕ್ಷ ಸ್ಥಾಪನೆ ಮಾಡಿದ್ದು, ಸಿದ್ದರಾಮಯ್ಯ ಅವರೆ ನನ್ನನ್ನು ಕಡೆಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ರಾಜಕೀಯವಾಗಿ ನಾನು ಮೂಲೆ ಗುಂಪಾಗುವುದಿಲ್ಲ. ಈ ಹೊಸ ಪಕ್ಷದಿಂದ ಹಿಂದೆ ಸರಿಯುವ ಮಾತಿಲ್ಲ. ನಮ್ಮ ಪಕ್ಷ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯಲಿದೆ.
ಮುಂದಿನ 2018 ಚುನಾವಣೆಯಲ್ಲಿ ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ ನಾನು ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.