"ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್: ತನಿಖೆ ನಡೆಸಲು 4 ವಿಶೇಷ ತಂಡ ರಚನೆ''
ಕೋಲಾರ, ಡಿಸೆಂಬರ್ 3: ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣದ ಸಂಬಂಧ ತನಿಖೆ ನಡೆಸಲು 4 ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಎಸ್ಪಿ ಕಾರ್ತಿಕ್ ರೆಡ್ಡಿ, ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಅಪಹರಣ ತನಿಖೆಗಾಗಿ ತಂಡ ರಚಿಸಲಾಗಿದ್ದು, ಡಿವೈಎಸ್ಪಿ, ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, 4 ಮಂದಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ
ಅಪಹರಣ ಘಟನೆಯ ಮುಖ್ಯ ಸಾಕ್ಷಿಯಾದ ನಯಾಜ್ ನನ್ನು ಬುಧವಾರದಿಂದ ವಿಚಾರಣೆ ನಡೆಸುತ್ತಿದ್ದು, ಗುರುವಾರ ಕಾರು ಚಾಲಕ ಸುನಿಲ್ ಅವರಿಗೆ ಮೆಡಿಕಲ್ ಟೆಸ್ಟ್ ಮಾಡಿಸಿ ನಂತರ ವಿಚಾರಣೆ ಮಾಡಲಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಈ ಪ್ರಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ತನಿಖೆ ನಡೆಸುತ್ತೇವೆ. ಪ್ರಕರಣದಲ್ಲಿ ಕೆಲವು ಸಾಕ್ಷಿ ಸಿಕ್ಕಿದ್ದು, ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದೇವೆ ಎಂದು ಕೋಲಾರದ ಎಸ್ಪಿ ಕಚೇರಿಯಲ್ಲಿ ಕಾರ್ತಿಕ್ ರೆಡ್ಡಿ ಹೇಳಿದರು.
ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ಆಗಬೇಕು
ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಹಿನ್ನೆಲೆಯಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿ, ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಈ ಸಂಬಂಧ ಗೃಹ ಸಚಿವರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ವರ್ತೂರು ಪ್ರಕಾಶ್ ಕಿಡ್ನಾಪ್ ಹಿಂದಿನ ಸ್ಪೋಟಕ ಸತ್ಯ: ಮಗನಿಂದಲೇ ದುಷ್ಕೃತ್ಯ?
ವರ್ತೂರು ಪ್ರಕಾಶ್ ಅವರಿಗೆ ತುಂಬಾನೇ ನೋವಾಗಿದ್ದು, ಎಸ್ಪಿ ಬಳಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಅದೆಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು, ಹಣಕ್ಕಾಗಿ ವರ್ತೂರು ಪ್ರಕಾಶ್ ನನಗೆ ಕರೆ ಮಾಡಿಲ್ಲ. ಅವರ ಮನೆ ಬಳಿ ಹೋಗಿ, ಅವರ ಯೋಗ ಕ್ಷೇಮ ವಿಚಾರಿಸುತ್ತೇನೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.