ಶಕ್ತಿ ಮೀರಿ ಪ್ರಯತ್ನಿಸಿದ್ದರಿಂದ ಯಶಸ್ಸು: ಐಎಎಸ್ ಟಾಪರ್ ನಂದಿನಿ
ಬುಧವಾರ ಪ್ರಕಟಗೊಂಡಿದ್ದ ಐಎಎಸ್ 2016ನೇ ಸಾಲಿನ ಪರೀಕ್ಷಾ ಫಲಿತಾಂಶದಲ್ಲಿ ಕೋಲಾರದ ಕೆ.ಆರ್. ನಂದಿನಿ ಮೊದಲ ಸ್ಥಾನ ಗಳಿಸಿ, ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.
ನವದಹೆಲಿ, ಜೂನ್ 1: ''ಐಎಎಸ್ ನಲ್ಲಿ ಪ್ರಥಮ ಶ್ರೇಯಾಂಕ ಪಡೆಯಲೇಬೇಕೆಂದು ಶಕ್ತಿ ಮೀರಿ ಪ್ರಯತ್ನಿಸಿದ್ದಕ್ಕೆ ಇಂದು ಫಲ ಸಿಕ್ಕಿದೆ. ಮನಸ್ಸಿಗೆ ಖುಷಿಯಾಗಿದೆ. ದೊಡ್ಡ ಕನಸೊಂದನ್ನು ಸಾಧಿಸಿದ ಬಗ್ಗೆ ಹೆಮ್ಮೆಯಾಗುತ್ತಿದೆ''
- ಇದು 2016ರ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದ ಕೋಲಾರ ಮೂಲದ ಕೆ.ಆರ್. ನಂದಿನಿ ಅವರ ಮನದಾಳದ ಮಾತು.[2016ನೇ ಸಾಲಿನ UPSC ಟಾಪರ್ ಕೋಲಾರದ ನಂದಿನಿ ಕೆ ಆರ್]
ಫಲಿತಾಂಶ ಹೊರಬಿದ್ದ ನಂತರ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸದ್ಯಕ್ಕೀಗ ಭಾರತೀಯ ಕಂದಾಯ ಸೇವೆ (ಐಆರ್ ಎಸ್) ನಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿರುವ ಅವರು, ಐಎಎಸ್ ನಲ್ಲಿ ತಾವು ನಡೆಸಿದ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.
ಕಠಿಣ ಪರಿಶ್ರಮದಿಂದಲೇ ಯಶಸ್ಸು ಸಿಕ್ಕಿದ್ದೆಂದು ಹೇಳಿದ ಅವರು, 2014ರಲ್ಲಿ ಈ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣಳಾಗಿ ಐಆರ್ ಎಸ್ ಗೆ ಆಯ್ಕೆಯಾಗಿದ್ದೆ. ಆನಂತರ, 2015ರಲ್ಲಿ 2ನೇ ಬಾರಿಗೆ ಐಎಎಸ್ ಪರೀಕ್ಷೆ ತೆಗೆದುಕೊಂಡಿದ್ದೆ. ಆದರೆ, ಆಗ ನನ್ನಿಂದ ಟಾಪರ್ ಸಾಧನೆಯಾಗಲಿಲ್ಲ.
ಆದರೆ, ಇದೀಗ ಮತ್ತೆ ಪರೀಕ್ಷ ಬರೆಯುವ ಮೂಲಕ ಟಾಪರ್ ಸಾಧನೆ ಮಾಡಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ, ಐಎಎಸ್ ಅಧಿಕಾರಿಗಳಾಗಬೇಕೆಂದು ಕನಸು ಕಾಣುವ ಎಲ್ಲಾ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ''ನಾವು ನಮ್ಮ ಮೇಲಿನ ವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ'' ಎಂದರಲ್ಲದೆ, ಸುತ್ತಲಿನ ಸಮಾಜವೂ ಐಎಎಸ್ ಅಭ್ಯರ್ಥಿಗಳಿಗೆ ಉತ್ತಮ ಸಹಕಾರ ನೀಡಿ ನೆರವಾಗಬೇಕು ಎಂದರು.