ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ
ಕೋಲಾರ, ಮೇ 31: ಕೋಲಾರ ಜಿಲ್ಲೆ ಅಂದರೆ ಬರದ ನಾಡು ಎಂದೇ ಕರೆಯುತ್ತಾರೆ. ಕೃಷಿಗೆಂದು ನೀರಾವರಿ ವ್ಯವಸ್ಥೆ ಮಾಡುವುದು ಕಷ್ಟಕರವೇ ಎನ್ನುವ ಪರಿಸ್ಥಿತಿ. ಹೀಗಿದ್ದರೂ ಕೋಲಾರದ ಕೆಲ ರೈತರು ಇರುವ ಅಲ್ಪಸ್ವಲ್ಪ ನೀರಲ್ಲೇ ತರಕಾರಿ ಬೆಳೆದು ಬೇರೆ ಬೇರೆ ದೇಶಕ್ಕೂ ರಫ್ತು ಮಾಡುತ್ತಿದ್ದಾರೆ ಎನ್ನುವುದೇ ಹೆಚ್ಚುಗಾರಿಕೆಯ ವಿಷಯ.
ಈ ರೈತರ ನಡುವೆ ಇಲ್ಲೊಬ್ಬರು ಕೈತುಂಬಾ ಸಂಬಳ ಬರುತ್ತಿದ್ದ ಸರ್ಕಾರಿ ಕೆಲಸಕ್ಕೆ ಗುಡ್ ಬಾಯ್ ಹೇಳಿ ಕೃಷಿ ಕಡೆ ವಾಲಿದ್ದಾರೆ. ಅಷ್ಟೇ ಅಲ್ಲ, ಕೃಷಿಯಲ್ಲಿ ಹಲವು ಹೊಸತನಗಳನ್ನು ಕಂಡುಕೊಳ್ಳುತ್ತಾ ಮಾದರಿ ರೈತ ಎಂದೂ ಅನಿಸಿಕೊಂಡಿದ್ದಾರೆ. ಆ ರೈತ ಯಾರು, ಕೃಷಿಯಲ್ಲಿ ಏನೇನು ಪ್ರಯೋಗಗಳನ್ನು ಮಾಡಿದ್ದಾರೆ ಎಂಬುದನ್ನು ಮುಂದೆ ನೋಡೋಣ...
ಉಪನ್ಯಾಸಕ ವೃತ್ತಿಯಿಂದ ಕೃಷಿಯೆಡೆಗೆ ಹೆಜ್ಜೆ...
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಂಪುರ ಗ್ರಾಮದ ರೈತ ಅಶೋಕ್ ಕುಮಾರ್ ಜಿಲ್ಲೆಯಲ್ಲಿ ಪ್ರಗತಿಪರ ರೈತ ಅನಿಸಿಕೊಂಡಿದ್ದಾರೆ. 19 ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. 13 ವರ್ಷಗಳ ಕಾಲ ಶ್ರೀನಿವಾಸಪುರ ಸರ್ಕಾರಿ ಜ್ಯುನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ಸಂಪೂರ್ಣ ಕೃಷಿಕನಾಗಬೇಕು ಎಂದು ನಿರ್ಧರಿಸಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯೆಡೆಗೆ ಬಂದಿದ್ದಾರೆ.
ಕಲ್ಲು ಭೂಮಿಯಲ್ಲಿ ಅಂಜದೆ ಅಂಜೂರ ಬೆಳೆದ ಕೊಪ್ಪಳ ರೈತ!
ಸಾವಯವ, ಸಹಜ ಕೃಷಿಯತ್ತ ಆಸಕ್ತಿ
ತಮಗೆ ಬಂದಿದ್ದ ಪಿತ್ರಾರ್ಜಿತ ಆಸ್ತಿ 70 ಎಕರೆ ಭೂಮಿಯಲ್ಲಿ ಸಾವಯವ ಹಾಗೂ ಸಹಜ ಕೃಷಿ ಮಾಡುತ್ತಿದ್ದಾರೆ. ತಮ್ಮ ಭೂಮಿಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡು ಕೃಷಿ ಕಾರ್ಯಕ್ಕೆ ಇಳಿದಿದ್ದಾರೆ. ಮಾವು, ಬೇವು, ಹೆಬ್ಬೇವು, ನೇರಳೆ ಸೇರಿದಂತೆ ಹತ್ತಾರು ರೀತಿಯ ಸಸ್ಯಸಂಕುಲಗಳನ್ನು ಬೆಳೆಸಿದ್ದಾರೆ.
ಮಳೆಯಾಶ್ರಿತ ಸಹಜ ಕೃಷಿ ಇವರ ವಿಶೇಷತೆ
ಜಮೀನಿನಲ್ಲಿ ಐದಾರು ಕೃಷಿ ಹೊಂಡ, ಇಂಗು ಗುಂಡಿಯನ್ನು ನಿರ್ಮಿಸಿಕೊಂಡಿದ್ದಾರೆ. ಒಂದೇ ಒಂದು ಕೊಳವೆ ಬಾವಿಯನ್ನೂ ಹಾಕಿಸದೇ, ವಿದ್ಯುತ್ ಅನ್ನೂ ಬಳಸದೆ ಕೇವಲ ಮಳೆ ಆಶ್ರಿತ ಸಹಜ ಕೃಷಿ ಮಾಡುತ್ತಿರುವುದು ಇವರ ವಿಶೇಷತೆ.
ಹತ್ತಿರವಾಗಿದೆ ಮಾವಿನ ಹಂಗಾಮು; ಶ್ರೀನಿವಾಸಪುರದ ಮಾವಿನ ಕಥೆಯೇನು?
ಕೃಷಿಗೆ ಜೊತೆಯಾದ ಹೈನುಗಾರಿಕೆ
ಈ ಸಹಜ ಕೃಷಿಯೊಂದಿಗೆ ಹೈನುಗಾರಿಕೆ, ಮೀನುಗಾರಿಕೆಯನ್ನೂ ಕೈಗೊಂಡಿದ್ದಾರೆ. ಪ್ರಯೋಗಶೀಲ ಮನಸ್ಸಿದ್ದರೆ ಎಂತಹ ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಲು ಸಾಧ್ಯ ಎಂಬುದಕ್ಕೆ ಅಶೋಕ್ ಕುಮಾರ್ ಉದಾಹರಣೆಯಾಗಿದ್ದಾರೆ. ತಮ್ಮದೇ ವಿಧಾನದಲ್ಲಿ, ಸಹಜ ಕೃಷಿಯಿಂದ ಲಾಭದೊಂದಿಗೆ ನೆಮ್ಮದಿಯ ಗಳಿಕೆಯನ್ನೂ ಪಡೆದಿರುವುದು ಈ ರೈತನ ಯಶಸ್ಸೇ ಸರಿ...