ಕೋಲಾರದಲ್ಲಿ ಕೊವಿಡ್ ಕೇಂದ್ರದ ವಿರುದ್ಧ ಖಾಸಗಿ ವೈದ್ಯನ ವಿಡಿಯೋ ವೈರಲ್
ಕೋಲಾರ, ಜೂನ್ 17: ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಕೊವಿಡ್ ಟೆಸ್ಟ್ ಕೇಂದ್ರದ ವಿರುದ್ಧ ವಿಡಿಯೋ ಮಾಡಿ ಅಸಮಾಧಾನ ಹೊರ ಹಾಕಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ತಾಲೂಕಿನ ಶ್ರೀ ವೆಂಕಟೇಶ್ವರ ನರ್ಸಿಂಗ್ ಹೋಂನ ಮುಖ್ಯ ವೈದ್ಯ ಡಾ.ವೆಂಕಟಾಚಲ, ಒಬ್ಬ ವೈದ್ಯರಾಗಿ ತಾವು ಅಸಮಾಧಾನ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ವಿಡಿಯೋ ಮೂಲಕ ಹೊರ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೊರೊನಾ ವೈರಸ್ ಪರೀಕ್ಷೆ ನಡೆಸಿ ಐದು ದಿನವಾದರೂ ವರದಿ ಕೊಡದ ಆರೋಗ್ಯ ಇಲಾಖೆ ವಿರುದ್ಧ ಇಂದು ಪಿಪಿಟಿ ಕಿಟ್ ಹಾಗೂ ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ...
'ಕೊರೊನಾ ತಡೆಯಲು ಈ ಔಷಧಿ ಬಳಸಬೇಕಂತೆ': ಇದು ನಕಲಿ ಚೀಟಿ ಎಚ್ಚರಿಕೆ
ರೋಗಿಗೆ ಕೊರೊನಾ ಪರೀಕ್ಷೆಗೆ ಸೂಚಿಸಿದ್ದ ವೈದ್ಯ ವೆಂಕಟಾಚಲ
ಶ್ರೀನಿವಾಸಪುರದಲ್ಲಿರುವ ಶ್ರೀವೆಂಕಟೇಶ್ವರ ನರ್ಸಿಂಗ್ ಹೋಂಗೆ ಜೂನ್ 8ರಂದು ರೋಗಿಯೊಬ್ಬರು ಜ್ವರ ಎಂದು ಬಂದಿದ್ದಾರೆ. ಈ ಹಿಂದೆಯೂ ಮೂರು ದಿನ ಚಿಕಿತ್ಸೆ ಪಡೆದಿದ್ದ ಅವರು, ಗುಣಮುಖರಾಗದ ಕಾರಣ ಪುನಃ ಬಂದಿದ್ದಾರೆ. ಆ ರೋಗಿಯ ರೋಗ ಲಕ್ಷಣಗಳನ್ನು ಅವಲೋಕಿಸಿದ ವೈದ್ಯ ವೆಂಕಟಾಚಲ ಅವರು, ಈ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಡ್ಯೂಟಿ ಡಾಕ್ಟರ್ ಗೆ ತಿಳಿಸಿ ಬೆಂಗಳೂರಿಗೆ ಹೊರಡಿದ್ದಾರೆ. ಮರುದಿನವೇ ಕೊರೊನಾ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಮರುದಿನ ಬೆಳಿಗ್ಗೆ ಶ್ರೀನಿವಾಸಪುರ ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಅವರಿಗೆ ಮಾಹಿತಿ ಕೊಟ್ಟು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಜೂನ್ 10ರಂದು ರೋಗಿಯ ಕೊವಿಡ್ ವರದಿ ಬಂದಿರಲಿಲ್ಲ.
ರೋಗಿಗೆ ಇತ್ತು ಕೊರೊನಾ ವೈರಸ್
ರೋಗಿಯ ಕೆಮ್ಮು ಕಡಿಮೆ ಆಗದ ಕಾರಣ ಅನುಮಾನದ ಮೇಲೆ ಆಸ್ಪತ್ರೆಯಲ್ಲಿ ಎಕ್ಸ್ ರೇ ತೆಗೆಸಿ ಪರಿಶೀಲಿಸಿ, ಕೋಲಾರದ ಮೆಡಿಕಲ್ ಕಾಲೇಜಿಗೆ ತಿಳಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಅದೇ ದಿನ ಸಂಜೆ ಮತ್ತೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಅವರಿಗೆ ಕರೆ ಮಾಡಿ ವರದಿ ಕೇಳಿದ್ದಾರೆ. ಆ ರೋಗಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಕೂಡಲೇ ವೈದ್ಯಾಧಿಕಾರಿ ತಹಶೀಲ್ದಾರ್ ಶ್ರೀನಿವಾಸ್ ಜೊತೆಗೂಡಿ ವೆಂಕಟೇಶ್ವರ ನರ್ಸಿಂಗ್ ಹೋಂಗೆ ಬಂದು ಡಾ.ವೆಂಕಟಾಚಲ ಸೇರಿದಂತೆ 12 ಜನರನ್ನು ಕ್ವಾರಂಟೈನ್ ನಲ್ಲಿಡುತ್ತಾರೆ. ಆಸ್ಪತ್ರೆಯಲ್ಲಿರುವ ಹತ್ತು ಕೋಣೆಗಳನ್ನು ಸ್ವಚ್ಛಗೊಳಿಸಿ, ಸ್ವಾನಿಟೈಸಿಂಗ್ ಮಾಡಿಸಿ ಎಲ್ಲರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಿದ್ದಾರೆ. ಜೂನ್ 12ರಂದು ಬೆಳ್ಳಿಗೆ 12 ಜನರ ಸ್ವಾಬ್ ಸಂಗ್ರಹಿಸಿದ್ದಾರೆ. ಜೊತೆಗೆ ಪಾಸಿಟಿವ್ ಬಂದಿದ್ದ ರೋಗಿಯ ಮಗ, ಸೊಸೆ ಸೇರಿದಂತೆ ಆರು ಜನರ ಸ್ವಾಬ್ ಸಂಗ್ರಹಿಸಿ ಜೂನ್ 13ಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಐದು ದಿನಗಳಾದರೂ ಬಂದಿಲ್ಲ 18 ಜನರ ವರದಿ
"ಐದು ದಿನಗಳಾದರೂ ಈ 18 ಜನರ ಸ್ವಾಬ್ ವರದಿ ಮಾತ್ರ ಇದುವರೆಗೂ ಬಂದಿಲ್ಲ. ಆಸ್ಪತ್ರೆಯ ಸಿಬ್ಬಂದಿ, ರೋಗಿ ಕಡೆಯವರು, ನೀವೇ ವೈದ್ಯರಾಗಿ ಐದು ದಿನಗಳಾದರೂ ಒಂದು ವರದಿ ತರಿಸಿಕೊಳ್ಳಲು ಆಗಲಿಲ್ಲವಲ್ಲ ಎಂದು ಕೇಳುತ್ತಿದ್ದಾರೆ. ನಾವು ಇನ್ನೂ 14 ದಿನಗಳ ಕಾಲ ಕ್ವಾರಂಟೈ ನಲ್ಲಿರುತ್ತೇವೆ, ಆದರೆ ನಮಗೆ ಕೊರೊನಾ ವೈರಸ್ ಇದೆಯೋ ಇಲ್ಲವೋ ಅನ್ನುವ ಆತಂಕವನ್ನು ಮೊದಲು ದೂರ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ" ಎಂದು ವಿಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ ವೈದ್ಯ ವೆಂಕಟಾಚಲ.
ವೈರಲ್ ಆದ ವೈದ್ಯರ ವಿಡಿಯೋ
ಈ ನಡೆಯಿಂದ ಬೇಸತ್ತಿರುವ ಡಾ.ವೆಂಕಟಾಚಲ ಅವರು ತಮ್ಮ ಆಸ್ಪತ್ರೆ ಸಿಬ್ಬಂದಿ ಜೊತೆಗೂಡಿ ಪಿಪಿಇ ಕಿಟ್ ಧರಿಸಿ ಆರೋಗ್ಯ ಇಲಾಖೆ ವಿರುದ್ಧ ತಮ್ಮ ಆಸ್ಪತ್ರೆಯ ಮುಂಭಾಗ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಬೇಜವಾಬ್ದಾರಿ ವಿರುದ್ಧ ತಾವೇ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಮಾಹಿತಿ ತಿಳಿದು ತಕ್ಷಣ ಆಸ್ಪತ್ರೆಯ ಬಳಿ ಬಂದ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ವೈದ್ಯರು ಹಾಗೂ ಸಿಬ್ಬಂದಿ ಪಟ್ಟು ಹಿಡಿದಿದ್ದು, ಇಂದು ಸಂಜೆ ವರದಿ ಬರುತ್ತದೆ ಎಂದು ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ಸು ಪಡೆದುಕೊಂಡಿದ್ದಾರೆ.