ಶ್ರೀನಿವಾಸಪುರದ ಆಸ್ಪತ್ರೆ ಅವ್ಯವಸ್ಥೆಗೆ ತೆಲುಗಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹಿಗ್ಗಾಮುಗ್ಗಾ ತರಾಟೆ
ಶ್ರೀನಿವಾಸಪುರ (ಕೋಲಾರ), ಜುಲೈ 16: ಸಿಟ್ಟು- ಭಾವುಕತೆ ಇವೆರಡರ ಕಾಂಬಿನೇಷನ್ ವಿಧಾನಸಭೆ ಅಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ 'ಸ್ವಾಮಿ'ಯೋರು, ಶ್ರೀನಿವಾಸಪುರದಲ್ಲಿ ಇರುವ ಸರಕಾರಿ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿದರು. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು.
ರಮೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆಯಲ್ಲಿಯೇ ಔಷಧ ಇಲ್ಲ, ಇಂಜೆಕ್ಷನ್ ಇಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ವಿಚಾರ ತಿಳಿದು ಸಿಟ್ಟಿಗೆದ್ದ ರಮೇಶ್ ಕುಮಾರ್, ವೈದ್ಯಾಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಆ ಕಡೆಯಿಂದ ಬಂದ ಉತ್ತರ ಸಮಂಜಸವಾಗಿ ಇಲ್ಲ ಎನಿಸಿದ ಕೂಡಲೇ ಸರಿಯಾಗಿ 'ಕ್ಲಾಸ್' ತೆಗೆದುಕೊಂಡರು.
ರಮೇಶ್ ಕುಮಾರ್: ಬಿಕ್ಕಟ್ಟುಗಳು ಬಂದಾಗೆಲ್ಲಾ ಭಾವನೆಗಳೇ ಅಸ್ತ್ರ!
"ಆಸ್ಪತ್ರೆಯಲ್ಲಿ ಏನೇ ಕೊರತೆ ಕಂಡುಬಂದರೂ ಸರಕಾರದ ಗಮನಕ್ಕೆ ತರಬೇಕು. ಅವುಗಳನ್ನು ಒದಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆದರೆ ಆ ಬಗ್ಗೆ ಯೋಚನೆಯೇ ಇಲ್ಲದಂತೆ ಕಾಣುತ್ತಿದ್ದೀರಿ. ಹಣಕಾಸಿಗೆ ಸಮಸ್ಯೆ ಇರುವ ಬಡ ರೋಗಿಗಳೂ ಖಾಸಗಿ ಆಸ್ಪತ್ರೆಗೆ ಹೋಗಲಿ ಅನ್ನೋದೇ ನಿಮ್ಮ ಉದ್ದೇಶವಾ? ಬಡವರ ಬಗ್ಗೆ ಸ್ವಲ್ಪವೂ ನಿಮಗೆ ಕಾಳಜಿ ಇಲ್ಲವಾ" ಎಂದು ಜೋರು ಧ್ವನಿಯಲ್ಲೇ ಪ್ರಶ್ನಿಸಿದರು.
"ಸರಕಾರಕ್ಕೆ ಮನವಿ ಸಲ್ಲಿಸಿದ ನಂತರವೂ ಔಷಧ ಪೂರೈಕೆಆಗದಿದ್ದರೆ ಅದು ಸರಕಾರದ ಕಡೆಯಿಂದ ತಪ್ಪು. ಆದರೆ ಅದಕ್ಕೆ ಮನವಿಯನ್ನೇ ಸಲ್ಲಿಸದಿದ್ದರೆ ಹೇಗೆ?" ಎಂದು ವೈದ್ಯಾಧಿಕಾರಿ ವಿಜಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
"ಬಡವರ ಬಗ್ಗೆ ನಿಮಗೆ ಕರುಣೆ ಇಲ್ಲ. ಭಗವಂತ ಅಂತೇನಾದರೂ ಇದ್ದರೆ ನಿಮಗೆಲ್ಲ ಈಗಿಂದೀಗಲೇ ಏನಾದರೂ ಆಗಲಿ. ನೀವೆಲ್ಲಾ ಸ್ಕೌಂಡ್ರಲ್ಸ್" ಎಂದು ಆಕೋಶ ವ್ಯಕ್ತಪಡಿಸಿದರು.
ಕೋಲಾರ : ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಪೂರ್ಣ
ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಚೀಟಿ ಬರೆದು ಕೊಡುವ ಹಾಗಿಲ್ಲ. ನೀವು ಔಷಧಿ ಸರಬರಾಜು ಮಾಡುವ ಹಾಗಿಲ್ಲ. ಅಂದರೆ ಬಡವರೆಲ್ಲ ಪ್ರೈವೇಟ್ ಆಸ್ಪತ್ರೆಗೆ ಹೋಗಲಿ ಅನ್ನೋದು ನಿಮ್ಮ ಉದ್ದೇಶವಾ? ನೀವೆಲ್ಲ ಪ್ರೈವೇಟ್ ಹಾಸ್ಪಿಟಲ್ ನವರಿಗೆ ಸರೆಂಡರ್ ಆಗಿದ್ದೀರಿ ಎಂದು ತೆಲುಗಿನಲ್ಲಿ ಅಸಮಾಧಾನ ಹೊರಹಾಕಿದರು.