ಕೋಲಾರ ವಿಸ್ಟ್ರಾನ್ ಗಲಭೆ; ಉಪಾಧ್ಯಕ್ಷನನ್ನು ವಜಾ ಮಾಡಿದ ಆ್ಯಪಲ್
ಕೋಲಾರ, ಡಿಸೆಂಬರ್ 20: ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ಡಿಸೆಂಬರ್ 12ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಪಲ್ ಕಾರ್ಮಿಕರ ಕ್ಷಮೆ ಕೋರಿದೆ. ಕಂಪನಿಯ ಬೆಂಗಳೂರಿನ ಉದಾಧ್ಯಕ್ಷ ನಿನ್ಸೆಂಟ್ ಲೀರನ್ನು ಕೆಲಸದಿಂದ ತೆಗೆದು ಹಾಕಿದೆ.
ವಿಸ್ಟ್ರಾನ್ ಘಟಕದಲ್ಲಿ ನಡೆದ ಗಲಭೆ ಬಗ್ಗೆ ಆ್ಯಪಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೆಚ್ಚುವರಿ ಕೆಲಸ ಮಾಡಿಸಿಕೊಂಡಿದ್ದರಿಂದ ವೇತನದಲ್ಲಿ ಏರುಪೇರು ಉಂಟಾಗಿದೆ ಎಂದು ಕಂಪನಿ ಕಡೆಯಿಂದ ಆದ ತಪ್ಪನ್ನು ಒಪ್ಪಿಕೊಂಡಿದೆ.
ವಿಸ್ಟ್ರಾನ್ ಗಲಾಟೆ; ಎಸ್ಎಫ್ಐ ಸಂಘಟನೆ ಅಧ್ಯಕ್ಷ ಬಿಡುಗಡೆ
ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ವೇತನ ಸಮಸ್ಯೆ ಆಗಿರುವುದು ಕಂಡುಬಂದಿದೆ. ವಿಸ್ಟ್ರಾನ್ ಕಂಪನಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ತಡವಾಗಿದೆ. ಇದರಿಂದ ಆ್ಯಪಲ್ಗೂ ಬೇಸರವಾಗಿದೆ. ವಿಸ್ಟ್ರಾನ್ ಕಂಪನಿಯು ಏಜೆನ್ಸಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.
ವಿಸ್ಟ್ರಾನ್ ಘಟಕದ ಗಲಭೆ; 7 ಸಾವಿರ ಜನರ ವಿರುದ್ಧ ಪ್ರಕರಣ ದಾಖಲು!
ವೇತನದ ವಿಚಾರದಲ್ಲಿ ಕಾರ್ಮಿಕರು ದಾಂಧಲೆ ನಡೆಸಿದ್ದರಿಂದ ವಿಸ್ಟ್ರಾನ್ ಘಟಕದಲ್ಲಿ ಸುಮಾರು 400 ಕೋಟಿಗೂ ಅಧಿಕ ನಷ್ಟವಾಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಸ್ಟ್ರಾನ್ ಕಂಪನಿಯಲ್ಲಿ ಗಲಾಟೆ; 156 ಮಂದಿ ಬಂಧನ
ಸಹಾಯವಾಣಿ ಸ್ಥಾಪನೆ
ವಿಸ್ಟ್ರಾನ್ನಲ್ಲಿ ಇಂತಹ ಘಟನೆಗಳು ಪುನಃ ನಡೆಯದಂತೆ ತಡೆಯಲು 24 ಗಂಟೆ ಸಹಾಯವಾಣಿ ತೆರೆದಿದ್ದೇವೆ.ಇಂಗ್ಲೀಷ್ ಸೇರಿದಂತೆ ಸ್ಥಳೀಯ ಭಾಷೆಯಲ್ಲಿ ಸಹಾಯವಾಣಿ ಸೌಲಭ್ಯ ಲಭ್ಯವಿದೆ. ನಿಗದಿತ ಕ್ರಮ ಜರುಗಿಸುವ ತನಕ ಆ್ಯಪಲ್ ಸಂಸ್ಥೆಯಿಂದ ವಿಸ್ಟ್ರಾನ್ ಕಂಪನಿ ಜೊತೆಗಿನ ವ್ಯವಹಾರ ಸ್ಥಗಿತವಾಗಲಿದೆ ಎಂದು ಆ್ಯಪಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ವ್ಯವಹಾರ ನಡೆಸೋಲ್ಲ
ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಆತಂಕಕ್ಕೆ ಒಳಗಾಗುವ ಅಂಶವೊಂದು ಪತ್ರಿಕಾ ಹೇಳಿಕೆಯಲ್ಲಿದೆ. ವಿಸ್ಟ್ರಾನ್ ಜೊತೆ ಮುಂದಿನ ದಿನಗಳಲ್ಲಿ ಹೊಸ ವ್ಯವಹಾರ ನಡೆಸುವುದಿಲ್ಲ ಎಂದು ಆ್ಯಪಲ್ ಹೇಳಿದೆ. ಹೊಸ ವ್ಯವಹಾರ ನಡೆಯದಿದ್ದಲ್ಲಿ ಸದ್ಯ ಇರುವ ನೌಕರರ ಸಂಖ್ಯೆಯನ್ನು ವಿಸ್ಟ್ರಾನ್ ಕಡಿತಗೊಳಿಸುವ ಸಾಧ್ಯತೆ ಇದೆ.
ನಿನ್ಸೆಂಟ್ ಲೀ ಕೆಲಸದಿಂದ ವಜಾ
ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಬೆಂಗಳೂರಿನ ಉಪಾಧ್ಯಕ್ಷ ನಿನ್ಸೆಂಟ್ ಲೀರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ತೈವಾನ್ ಮೂಲದ ಲೀ ಬೆಂಗಳೂರಿನಲ್ಲಿದ್ದು, ವಿಸ್ಟ್ರಾನ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.
ನೌಕರರಿಗೆ ವೇತನ ತಲುಪಿಲ್ಲ
ವಿಸ್ಟ್ರಾನ್ನ ಕೆಲವು ನೌಕರರಿಗೆ ವೇತನ ತಲುಪದೆ ಇರುವುದು ಕಂಡುಬಂದಿದೆ. ವೇತನದಲ್ಲಿ ವ್ಯತ್ಯಯ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಆಗಿರುವ ಅಡಚಣೆಗೆ ಕಾರ್ಮಿಕರ ಕ್ಷಮೆಯಾಚಿಸುತ್ತೇವೆ. ನೌಕರರನ್ನು ನೇಮಿಸಿದ ಏಜೆನ್ಸಿಗಳ ವಿರುದ್ದವೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ತಂಡಗಳನ್ನ ರಚಿಸಿ, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಆ್ಯಪಲ್ ಹೇಳಿದೆ.