ರಾಜಕೀಯ ಸಂಚಲನಕ್ಕೆ ಕಾರಣವಾದ ಶರತ್, ರಮೇಶ್ ಕುಮಾರ್ ಭೇಟಿ
Recommended Video
ಕೋಲಾರ, ಡಿಸೆಂಬರ್ 13: ಬಿಜೆಪಿಯಿಂದ ಬಂಡಾಯವೆದ್ದು, ಹೊಸಕೋಟೆ ವಿಧಾನಸಭೆಯ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಶರತ್ ಬಚ್ಚೇಗೌಡ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಶರತ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ನ ರಮೇಶ್ ಕುಮಾರ್ ನಿವಾಸಕ್ಕೆ ತೆರಳಿ ಗುರುವಾರ ರಾತ್ರಿ ಭೇಟಿ ಮಾಡಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗುಪ್ತ ಮಾತುಕತೆ ನಡೆಸಿದ್ದಾರೆ ಎಂದು ತಿಳಿದಿದೆ. ನಂತರ ಅವರ ಆಶೀರ್ವಾದ ಪಡೆದು ಬಂದಿದ್ದಾರೆ. ಈ ಕಾರಣದಿಂದ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ ಎನ್ನುವುದಕ್ಕೆ ಪುಷ್ಠಿ ನೀಡಿದೆ.
ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?
ಉಪ ಚುನಾವಣೆಯಲ್ಲಿ ರಾಜಕೀಯ ಬದ್ದ ವೈರಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿರುವ ಶರತ್ ಬಚ್ಚೇಗೌಡ ಅವರನ್ನು ಬಿಜೆಪಿ ಪಕ್ಷ ಉಚ್ಛಾಟನೆ ಮಾಡಿತ್ತು. ಮತ್ತೆ ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಎಂಟಿಬಿ ನಾಗರಾಜ್ ಇತ್ತೀಚಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿದ್ದರು.
ಉಪ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡದ ಶರತ್ ತಂದೆ, ಸಂಸದ ಬಿ,ಎನ್.ಬಚ್ಚೇಗೌಡ ವಿರುದ್ದವೂ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಬಿಜೆಪಿ ಬಾಗಿಲು ಬಂದ್ ಆಗಿರುವ ಕಾರಣದಿಂದಾಗಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರು
ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ರಾಜಕೀಯದಲ್ಲಿ ಯಾರು ಶತ್ರುವಲ್ಲ, ಯಾರು ಮಿತ್ರರಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುತ್ತಾರಾ..? ಅಥವಾ ಪಕ್ಷೇತರ ಶಾಸಕರಾಗಿಯೇ ಉಳಿದುಕೊಳ್ಳುತ್ತಾರಾ..? ಕಾದು ನೋಡಬೇಕಿದೆ.