ಒಂದು ರೂಪಾಯಿಗೆ ಇಡ್ಲಿ ಕೊಟ್ಟು ಹಸಿವು ತಣಿಸುವ ಕೋಲಾರದ ಸೆಲ್ವಮ್ಮ
ಕೋಲಾರ, ಮೇ 26: ಲಾಕ್ಡೌನ್ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದವರು ಎಷ್ಟೋ ಮಂದಿ ಇದ್ದಾರೆ. ಲಾಕ್ ಡೌನ್ ಸಡಿಲಿಕೆ ಆದ ನಂತರವೂ ವ್ಯಾಪಾರ ವಹಿವಾಟಿಲ್ಲದೇ ಹಣಕ್ಕೆ ಕೊರತೆಯಾಗಿ ಕಂಗಾಲಾಗಿರುವ ಕಾರ್ಮಿಕರು, ಬಡವರಿಗೂ ಲೆಕ್ಕವಿಲ್ಲ.
Recommended Video
ಇಂಥ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ನೆರವಾಗಲು ಕೇವಲ ಒಂದು ರೂಪಾಯಿಗೆ ಒಂದು ಇಡ್ಲಿ ನೀಡಿ ಮನೆ ಮಾತಾಗಿದ್ದಾರೆ ಸೆಲ್ವಮ್ಮ ಅವರು. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸೆಲ್ವಮ್ಮ ಅವರು ಬಡವರ ಹೊಟ್ಟೆ ತುಂಬಿಸಲೆಂದು ಕೈಗೊಂಡಿರುವ ಈ ಕಾಯಕಕ್ಕೆ ಐದು ದಶಕಗಳೇ ಆಗಿವೆ. ಇಂಥ ಸಮಯದಲ್ಲಿ ಎಷ್ಟೋ ಜನರಿಗೆ ಈ ಒಂದು ಸಂಗತಿ ಮಾನವೀಯತೆಯ ಪಾಠವನ್ನೂ ಹೇಳುತ್ತದೆ.
ಐದೂವರೆ ದಶಕದಿಂದಲೂ ನಡೆದುಬಂದಿರುವ ರೂಢಿ
ಬಂಗಾರಪೇಟೆ ಪಟ್ಟಣದ ಕಾರಹಳ್ಳಿ ವೃತ್ತದ ನೀರಿನ ಸಂಪ್ ಬಳಿ ಇರುವ ಬೇಕರಿ ರವಿಕುಮಾರ್ ಎಂಬುವರ ತಾಯಿಯೇ ಸೆಲ್ವಮ್ಮ ಅವರು. 80ರ ಈ ಇಳಿ ವಯಸ್ಸಿನಲ್ಲೂ ಪ್ರತಿದಿನ ಇಡ್ಲಿ ತಯಾರು ಮಾಡಿ, ಬಡವರ ಹಾಗೂ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಐದೂವರೆ ದಶಕದಿಂದ ಈ ಕಾರ್ಯ ಸತತವಾಗಿ ನಡೆಯುತ್ತಿದೆ.
ಬಡವರಿಗೆ ಉಚಿತವಾಗಿ ಇಡ್ಲಿ ನೀಡುವ 'ರಾಣಿ' ಮಾನವೀಯತೆ!
ಮೊದಲು ರೂಪಾಯಿಗೆ 4 ಇಡ್ಲಿ
ಆರಂಭದಲ್ಲಿ ರೂಪಾಯಿಗೆ ನಾಲ್ಕು ಇಡ್ಲಿ ನೀಡುತ್ತಿದ್ದ ಇವರು, ತದನಂತರ ರೂಪಾಯಿಗೆ ಎರಡು ಇಡ್ಲಿ ನೀಡಲು ಆರಂಭಿಸಿದರು. ಆಹಾರ ಉತ್ಪನ್ನಗಳ ಬೆಲೆ ಎಷ್ಟೇ ಹೆಚ್ಚಾದರೂ ಅದಕ್ಕೆ ತಲೆಕೆಡಿಸಿಕೊಂಡವರಲ್ಲ. ಈಗ ರೂಪಾಯಿಗೆ 1 ಇಡ್ಲಿ ಕೊಡಲಾಗುತ್ತಿದೆ. 10 ರೂಪಾಯಿಗೆ ತೆಗೆದುಕೊಂಡರೆ ಹೆಚ್ಚುವರಿಯಾಗಿ ಮತ್ತೊಂದು ಇಡ್ಲಿ ಕೊಡುವುದು ಅವರ ರೂಢಿ. ನಿತ್ಯ 325 ಇಡ್ಲಿ ಮಾರಾಟ ಮಾಡುತ್ತಾರೆ ಇವರು.
ಮಂಡಿ, ಕೈಕಾಲು ನೋವಿದ್ದರೂ ಲೆಕ್ಕಿಸುವುದಿಲ್ಲ
ಮನೆಯಲ್ಲಿ ಬೆಳಿಗ್ಗೆ ಏಳು ಗಂಟೆಗೆ ಇವರ ಕಾಯಕ ಶುರುವಾಗುತ್ತದೆ. ಒಲೆಗೆ ಮರದ ಹೊಟ್ಟು ತುಂಬಿ ಇಡ್ಲಿ ಹಾಕಲು ಆರಂಭಿಸಿದರೆ 11 ಗಂಟೆಯವರೆಗೂ ಇಡ್ಲಿ ತಯಾರಿಸುವ ಕೆಲಸ ನಡೆಯುತ್ತದೆ. ನಿತ್ಯ ನಾಲ್ಕು ಕೆ.ಜಿ ಕುಸುಬಲ ಅಕ್ಕಿ, ಉದ್ದಿನ ಬೇಳೆ, ಚಟ್ನಿಗೆ ಬೇಕಾದ ಅಗತ್ಯ ಸಾಮಗ್ರಿ ಕೊಂಡು ರುಬ್ಬಿ ಕೊಡುವ ಕೆಲಸವನ್ನು ಇವರ ಮಗ ರವಿಕುಮಾರ್ ಮಾಡುತ್ತಾರೆ. ಮಗ ರವಿಕುಮಾರ್, ಜ್ಞಾನಸುಂದರಿ ದಂಪತಿ ಕೂಡ ಇವರ ಸಹಕಾರಕ್ಕೆ ನಿಂತಿದ್ದಾರೆ. ಮಂಡಿ, ಕೈಕಾಲು ನೋವು ಇದ್ದರೂ ಅದನ್ನು ಲೆಕ್ಕಿಸದೇ ಇವರೊಬ್ಬರೇ ಇಡ್ಲಿ ಮಾಡಿ, ಪೊಟ್ಟಣ ಕಟ್ಟುತ್ತಾರೆ. ಇಡ್ಲಿ ಅಗ್ಗವಾದರೂ ಗುಣಮಟ್ಟ ಮತ್ತು ರುಚಿಯಲ್ಲಿ ರಾಜಿಯಿಲ್ಲ. ಹೋಟೆಲ್ನಲ್ಲಿ 10 ರು. ಕೊಟ್ಟು ಕೊಂಡುಕೊಳ್ಳುವ ಇಡ್ಲಿಗಿಂತ ಅಜ್ಜಿಯ ಇಡ್ಲಿ ರುಚಿಯಾಗಿರುತ್ತೆ ಎನ್ನುತ್ತಾರೆ ಮುನಿಯಮ್ಮ ಬಡಾವಣೆಯ ವಿ.ರೂಪ.
ಲಾಕ್ಡೌನ್ ಸಮಯದಲ್ಲಿ ಬಡವರ ಬಂಧುವಾದ ಅಮ್ಮ ಕ್ಯಾಂಟೀನ್
"ಯಾರೂ ಹಸಿವಿನಿಂದ ಬಳಲಬಾರದು"
ನನಗೆ ಇಡ್ಲಿ ಮಾರಾಟದಿಂದ ಪಡೆಯುವ ದುಡ್ಡು ಮುಖ್ಯವಲ್ಲ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದು ನನ್ನ ಉದ್ದೇಶ. ಎಲ್ಲರ ಹಸಿವು ನೀಗಿಸಲಾಗದಿದ್ದರೂ ನನ್ನಿಂದಾದಷ್ಟು ಅಳಿಲು ಸೇವೆ ಮಾಡುತ್ತಿದ್ದೇನೆ. ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ, ಸಮಾಜಕ್ಕೆ ಸೇವೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನು ಮರೆಯಬಾರದು ಎನ್ನುತ್ತಾರೆ ಸೆಲ್ವಮ್ಮ.